ಹಿರಿಯೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಆದರ್ಶ ಪಾಲಿಸಿ ಅಭಿವೃದ್ಧಿ ಜತೆಗೆ ಸಾಮಾಜಿಕ ನ್ಯಾಯದ ತೇರು ಎಳೆಯಲು ಶ್ರಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ತಾಲೂಕಿನ ಕೋಡಿಹಳ್ಳಿ-ಇಕ್ಕನೂರು ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ ಸಂದರ್ಭ ಗ್ರಾಮಸ್ಥರಿಂದ ಗೌರವ ಸ್ವೀಕರಿಸಿ ಮಾತನಾಡಿ,
ಸಾಮಾಜಿಕ ನ್ಯಾಯದಡಿ ಸರ್ಕಾರದ ಸೌಲಭ್ಯಗಳನ್ನು ಬಡವರ ಮನೆ ಬಾಗಿಲಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಶಿಕ್ಷಣ, ಆರೋಗ್ಯ, ನೀರಾವರಿ ಸೌಲಭ್ಯದ ಜತೆ, ಕಾನೂನು ಶಾಂತಿ ಸುವ್ಯವಸ್ಥೆ ಕಾಪಾಡಲು ವಿಶೇಷ ಆದ್ಯತೆ ನೀಡಲಾಗುವುದು.
ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲೂಕಿನ 1 ಲಕ್ಷ ಎಕರೆಗೂ ಹೆಚ್ಚಿನ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಇಕ್ಕನೂರು- ಕೋಡಿಹಳ್ಳಿ ಗ್ರಾಮದ ಕೆರೆಗೆ ನೀರು ತುಂಬಿಸಲಾಗುವುದು ಎಂದು ತಿಳಿಸಿದರು.
ರೈತರ ಹಿತ ಕಾಯಲು ಬದ್ಧ: ವೇದಾವತಿ ನದಿ ಪಾತ್ರದಲ್ಲಿ ಸರಣಿ ಚೆಕ್ಡ್ಯಾಂ, ಬ್ಯಾರೇಜ್ ನಿರ್ಮಾಣಕ್ಕೆ ಆದ್ಯತೆ ನೀಡಿದ್ದರ ಪರಿಣಾಮ ಇಂದು ನದಿ ಪಾತ್ರದ ಗ್ರಾಮಗಳಲ್ಲಿ ಅಂತರ್ಜಲ ವೃದ್ಧಿಯಾಗಿ, ಕೃಷಿ ಚಟುವಟಿಕೆಗೆ ವರದಾನವಾಗಿದೆ.
ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸಲು ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ ಎಂದರು.
10 ವರ್ಷ ಶಾಸಕ, ಕೆಲ ಕಾಲ ಸಚಿವನಾಗಿದ್ದ ಸಮಯದಲ್ಲಿ ಮುರಾರ್ಜಿ ವಸತಿ ಶಾಲೆ, ತೋಟಗಾರಿಕೆ ಕಾಲೇಜು ಸ್ಥಾಪಿಸಿ ಅಭಿವೃದ್ಧಿಯ ಹೆಜ್ಜೆ ಗುರುತು ಮೂಡಿಸಿದ್ದೇನೆ.
ಪ್ರಸ್ತುತ ಸಿಕ್ಕಿರುವ ಅಧಿಕಾರವನ್ನು ಬಳಸಿಕೊಂಡು ಶಾಶ್ವತವಾಗಿ ಉಳಿಯುವ ಅಭಿವೃದ್ಧಿ ಕಾರ್ಯ ಮಾಡಲಾಗುವುದು. ಕಾಲಮಿತಿಯಲ್ಲಿ ಧರ್ಮಪುರ ಫೀಡರ್ ನಾಲೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯೆ ಗೀತಾ ನಾಗಕುಮಾರ್, ತಾಪ ಮಾಜಿ ಸದಸ್ಯೆ ಡಾ.ಜೆ.ಸುಜಾತಾ, ಕೆಪಿಸಿಸಿ ಸದಸ್ಯ ಸುರೇಶ್ ಬಾಬು,
ಮುಖಂಡರಾದ ಈರಲಿಂಗೇಗೌಡ, ಕೋಡಿಹಳ್ಳಿ ಸಂತೋಷ್, ಚಿದಾನಂದ್, ಪರಸೇಗೌಡ, ಹನುಮಂತರಾಯಪ್ಪ, ಜ್ಞಾನೇಶ್, ಕಲ್ಲಹಟ್ಟಿ ಹರೀಶ್, ಜೀವೇಶ್, ಜಿ.ಎಲ್.ಮೂರ್ತಿ ಇತರರಿದ್ದರು.