ನವದೆಹಲಿ: ಇಂದು ಕಾಂಗ್ರೆಸ್ ಪಕ್ಷದ ಉನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಾಂಗ್ರೆಸ್ ವರ್ಕಿಂಗ್ ಕಮಿಟಿ(CWC)ಯ ಮಹತ್ವದ ಸಭೆಯು ನವದೆಹಲಿಯಲ್ಲಿ ನಡೆಯುತ್ತಿದೆ. ಕರೊನಾ ಆಕ್ರಮಣದ ನಂತರ ನಡೆಯುತ್ತಿರುವ ಕಮಿಟಿಯ ಈ ಮೊದಲ ಭೌತಿಕ ಸಭೆಯಲ್ಲಿ ಪಕ್ಷಕ್ಕೆ ಪೂರ್ಣಕಾಲೀನ ಅಧ್ಯಕ್ಷರ ಚುನಾವಣೆ ನಡೆಸುವ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ 2019 ರಲ್ಲಿ ಕಾಂಗ್ರೆಸ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದಾಗಿನಿಂದ ಸೋನಿಯಾ ಗಾಂಧಿ ಮಧ್ಯಂತರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಕ್ಷದ ನಿರ್ಧಾರಗಳನ್ನು ಗಾಂಧಿ ಕುಟುಂಬವೇ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಗುಲಾಮ್ ನಬಿ ಆಜಾದ್, ಕಪಿಲ್ ಸಿಬಾಲ್ ಮುಂತಾದ ಜಿ-23 ನಾಯಕರು ಪೂರ್ಣಾವಧಿ ಮುಖ್ಯಸ್ಥರ ನೇಮಕವಾಗಬೇಕೆಂದು ಪದೇ ಪದೇ ಬೇಡಿಕೆಯಿಡುತ್ತಾ ಬಂದಿದ್ದಾರೆ. ಹೀಗಾಗಿ ಜಿಲ್ಲಾ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಆಂತರಿಕ ಚುನಾವಣೆಗಳ ಬಗ್ಗೆ ಇಂದಿನ ವರ್ಕಿಂಗ್ ಕಮಿಟಿ ಸಭೆಯಲ್ಲಿ ಪ್ರಸ್ತಾಪವಾಗಲಿದೆ ಎನ್ನಲಾಗಿದೆ.
ಜೊತೆಯಲ್ಲೇ, ಇತ್ತೀಚೆಗೆ ಪಂಜಾಬ್ ಮತ್ತು ಛತ್ತೀಸಗಡ ರಾಜ್ಯಗಳಲ್ಲಿ ಉಂಟಾಗಿರುವ ನಾಯಕತ್ವದ ಘರ್ಷಣೆಗಳ ಬಗ್ಗೆ, ಹಲವು ಹಿರಿಯ ನಾಯಕರು ಪಕ್ಷ ತೊರೆದ ಬಗ್ಗೆ ಮತ್ತು ವಿಧಾನಸಭಾ ಚುನಾವಣೆ ಎದುರಿಸಲಿರುವ ರಾಜ್ಯಗಳಲ್ಲಿ ಪಕ್ಷದ ಹೋರಾಟ ತಂತ್ರ ಹೇಗಿರಬೇಕು ಎಂಬುದರ ಬಗ್ಗೆಯೂ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ನಡುರಸ್ತೆಯಲ್ಲಿ ಖಡ್ಗಗಳನ್ನು ಹಿಡಿದು ನೃತ್ಯ ಮಾಡಿದ ಕಾರ್ಯಕರ್ತರು!
ಪೊಲೀಸ್ ಠಾಣೆ ಪಕ್ಕದಲ್ಲೇ 25 ಗೋವುಗಳ ಮಾರಣ ಹೋಮ
ಮೈಸೂರು ದಸರಾ: ವಿದ್ಯುತ್ ದೀಪಾಲಂಕಾರ ನೋಡಲು ಇನ್ನೂ 9 ದಿನ ಅವಕಾಶ