ಬೆಂಗಳೂರು: ಕೆಜಿ ಹಳ್ಳಿ, ಡಿಜೆ ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ಸಂಭವಿಸಿದ ಇಡೀ ದಾಂಧಲೆಯ ಹೊಣೆಯನ್ನು ಪೊಲೀಸರೇ ಹೊತ್ತುಕೊಳ್ಳಬೇಕು. ಪೊಲೀಸ್ ಠಾಣೆಯನ್ನೇ ಪೊಲೀಸರು ರಕ್ಷಿಸಿಕೊಳ್ಳಲು ಆಗಲಿಲ್ಲ, ನಮ್ಮ ಶಾಸಕರಿಗೂ ರಕ್ಷಣೆ ಕೊಡಲಿಲ್ಲ, ಎಲ್ಲ ಗೊತ್ತಿದ್ದೂ ಸುಮ್ಮನಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಡಿಜೆ ಹಳ್ಳಿಯಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ತಮ್ಮದೇ ಪಕ್ಷದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯ ಮನೆಗೆ ಗಲಭೆಕೋರರು ಬೆಂಕಿ ಇಟ್ಟು ದಾಂಧಲೆ ನಡೆಸಿ ಅರ್ಧ ದಿನ ಕಳೆದರೂ ಕಾಂಗ್ರೆಸ್ ನಾಯಕರು ಮೌನವಾಗಿದ್ದರು. ಘಟನೆ ಕುರಿತಂತೆ ಕೈನಾಯಕರು ತುಟಿ ಬಿಚ್ಚುತ್ತಿಲ್ಲ ಎಂದು ಬಿಜೆಪಿ ಮುಖಂಡರು ಆರೋಪದ ಸುರಿಮಳೆಗೈದರು. ಅಖಂಡ ಶ್ರೀನಿವಾಸಮೂರ್ತಿ ದಲಿತರಾಗಿದ್ದು, ಅವರ ಮನೆ ಮೇಲೆ ದಾಳಿ ನಡೆದರೂ ಕಾಂಗ್ರೆಸ್ ತಮ್ಮ ಶಾಸಕರ ಪರವಾಗಿ ನಿಲ್ಲುತ್ತಿಲ್ಲ, ಅಲ್ಪಸಂಖ್ಯಾತರ ಮತಗಳೇ ಕಾಂಗ್ರೆಸ್ಗೆ ಮುಖ್ಯ ಎಂದು ಮೇಲಿಂದ ಮೇಲೆ ಟೀಕೆಗಳು ಬಂದವು. ಕಾಂಗ್ರೆಸ್ ಕಡೆಯಿಂದ ಪ್ರತಿಕ್ರಿಯೆ ನೀಡುವುದು ಅನಿವಾರ್ಯವಾದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಇಡೀ ಘಟನೆಗೆ ಪೋಲೀಸರನ್ನೇ ಹೊಣೆಗಾರರನ್ನಾಗಿ ಬಿಂಬಿಸಿದರು.
ಇದನ್ನೂ ಓದಿರಿ ಡಿಜೆ ಹಳ್ಳಿ ಗಲಭೆ ಆರಂಭದ ಆ ಕ್ಷಣ… ಪೊಲೀಸ್ ಠಾಣೆಯಲ್ಲಿದ್ದುಕೊಂಡೇ ಸಾವಿರಾರು ಜನರನ್ನು ಕರೆಸಿಕೊಂಡ ದುಷ್ಕರ್ಮಿಗಳು
ಪೈಗಂಬರ್ ಕುರಿತ ಅವಹೇಳನಕಾರಿ ಪೋಸ್ಟ್ ನೋಡಿ ಯಾರು ನೊಂದಿದ್ದಾರೋ ಅವರು ಪೊಲೀಸರ ಬಳಿಗೆ ಬಂದು ಕ್ರಮಕೈಗೊಳ್ಳಲು ಕೋರಿದ್ದಾರೆ. ಮೂರು ಗಂಟೆಯಾದರೂ ಕ್ರಮಕೈಗೊಳ್ಳದೆ ಸಮಯ ವ್ಯರ್ಥ ಮಾಡಿದ್ದಾರೆ. ತಕ್ಷಣವೇ ಎಫ್ಐಆರ್ ಹಾಕಿದ್ದರೆ ಅಥವಾ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ತಪ್ಪಿತಸ್ಥನನ್ನು ಬಂಧಿಸಿದ್ದರೆ ಈ ಘಟನೆ ಆಗುತ್ತಿರಲಿಲ್ಲ ಎಂದು ಡಿಕೆಶಿ ಹೇಳಿದರು.
ಮೊದಲು ಪ್ರಚೋದನಕಾರಿ ಪೋಸ್ಟ್ ಮಾಡಿದ್ದು ತಪ್ಪು. ನಂತರ ಪೊಲೀಸ್ ಠಾಣೆ ಹಾಗೂ ಆಸ್ತಿಪಾಸ್ತಿ ಹಾನಿ ಮಾಡಿದ್ದೂ ತಪ್ಪು. ಇವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ. ನಮಗೆ ರಕ್ಷಣೆ ಕೊಡುವ ಪೊಲೀಸ್ ಠಾಣೆಗೆ ನುಗ್ಗುವ ಈ ಕೃತ್ಯಕ್ಕೆ ಬೆಂಬಲ ಕೊಡುವ ಪ್ರಶ್ನೆಯೇ ಇಲ್ಲ. ನಾವು ಯಾರ ಬೆಂಬಲಕ್ಕೂ ಅಲ್ಲ. ಆದರೆ, ಅಮಾಯಕರಿಗೆ ಸುಮ್ಮನೆ ತೊಂದರೆ ಆಗಬಾರದು ಎಂದು ಸ್ಪಷ್ಟಪಡಿಸಿದರು.
ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆ ನಿಷೇಧ ವಿಚಾರವಾಗಿ ಸರ್ಕಾರದ ನಿರ್ಧಾರಗಳ ಬಗ್ಗೆ ನಾವು ಮಧ್ಯ ಪ್ರವೇಶ ಮಾಡುವುದಿಲ್ಲ. ಇದಕ್ಕೆ ಪ್ರಚೋದನೆ ಮಾಡಿದವರ ಮೇಲೆ ಕ್ರಮ ಆಗಬೇಕು. ಪ್ರಚೋದನೆ ನೀಡಿದ ಸಂಘಟನೆ ಮೇಲೆ ಕ್ರಮ ಆಗಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಅವಹೇಳನಕಾರಿ ಪೋಸ್ಟ್ ಹಾಕಿದ್ದ ನವೀನ್ ಬಿಜೆಪಿಯ ಕಟ್ಟಾ ಅಭಿಮಾನಿ. ಆತ ಬಿಜೆಪಿಗೆ ಮತ ಹಾಕಿದ್ದ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ನವೀನ್ಗೂ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೂ ಯಾವುದೇ ರೀತಿಯಲ್ಲೂ ರಾಜಕೀಯ ಸಂಬಂಧ ಇಲ್ಲ ಎಂದರು.
ಇದನ್ನೂ ಓದಿರಿ ನಾನು ಹುಟ್ಟಿ ಬೆಳೆದ ಮನೆಯನ್ನು ಸುಟ್ಟು ಹಾಕಿದ್ದಾರೆ… ಗಲಭೆಕೋರರಿಗೆ ಕಠಿಣ ಶಿಕ್ಷೆ ಆಗಲೇ ಬೇಕು: ಅಖಂಡ ಶ್ರೀನಿವಾಸಮೂರ್ತಿ
ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ‘ನವೀನ್ ಫೇಸ್ಬುಕ್ ಪೋಸ್ಟ್ ಕುರಿತು ಮತ್ತು ಪೊಲೀಸರು ವಿಳಂಬವಾಗಿ ಕ್ರಮಕೈಗೊಂಡರು ಎಂದು ಅಭಿಪ್ರಾಯ ನೀಡಲು 14 ಗಂಟೆಗಳ ನಂತರ ಕರ್ನಾಟಕ ಕಾಂಗ್ರೆಸ್ ಜಾಗೃತಗೊಂಡಿತು. ಒಂದು ನೇರ ಪ್ರಶ್ನೆ, ನಿಮ್ಮ ಪಕ್ಷ ಈ ರೀತಿಯ ಗಲಭೆಗಳನ್ನು ಬೆಂಬಲಿಸುತ್ತದೆಯೇ? ಅಲ್ಪಸಂಖ್ಯಾತ ಗುಂಪುಗಳ ಗಲಭೆಯನ್ನು ಖಂಡಿಸಲು ಕಾಂಗ್ರೆಸ್ ಏಕೆ ಹಿಂಜರಿಯುತ್ತದೆ?’ ಎಂದು ಪ್ರಶ್ನಿಸಿದ್ದಾರೆ.
ಡಿಕೆಶಿ ಹೇಳಿಕೆಗೆ ವಿರುದ್ಧ ಕಿಡಿಕಾರಿರುವ ಸಚಿವ ಸಿ.ಟಿ.ರವಿ, ‘ಪೊಲೀಸರೇ ಡಿಜಿ ಹಳ್ಳಿ ಘಟನೆಗೆ ಕಾರಣ, ಬಾಂಧವರದ್ದೇನು ತಪ್ಪಿಲ್ಲ ಎಂಬ ನಿಲುವು ಇವರದ್ದು. ನಾಚಿಕೆಯಾಗಬೇಕು ಇಂಥ ಜನ್ಮಕ್ಕೆ’ ಎಂದಿದ್ದಾರೆ.