More

    ಕುಡಿಯುವ ನೀರಿನಲ್ಲೂ ಕಾಂಗ್ರೆಸ್​ ರಾಜಕಾರಣ: ಬಸವರಾಜ ಬೊಮ್ಮಾಯಿ

    ವಿಜಯವಾಣಿ ಸುದ್ದಿಜಾಲ ಗದಗ
    ದೇಶದಲ್ಲಿ ಪ್ರಧಾನಿ ಮೋದಿ ಪರ ಸುನಾಮಿ ಇದೆ. ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
    ಜಿಲ್ಲೆಯ ರೋಣ ಪಟ್ಟಣದಲ್ಲಿ ಏರ್ಪಡಿಸಿದ್ದ ಬೃಹತ್​ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅಸಮರ್ಥ ಸಿಎಂ ಎಂದು ಆರೋಪ ಮಾಡಿದ್ದಾರೆ. ನಾನು ರಾಜ್ಯಕ್ಕೆ ಏನು ಮಾಡಿದ್ದೇನೆ ಮತದಾರರಿಗೆ ಗೊತ್ತಿದೆ. ಆದರೆ, ರೋಣ ಕ್ಷೇತ್ರಕ್ಕೆ ಏನು ಮಾಡಿದ್ದೇನೆ ಎಂದು ತಾವು ಮಾಡಿದ ಅಭಿವೃದ್ಧಿ ಕೆಲಸಗಳನ್ನು ವಿವರಿಸಿದರು.
    ರೋಣ ನರೇಗಲ್​ ಕುಡಿಯುವ ನೀರಿನ ಯೋಜನೆಯನ್ನು ಕಳಕಪ್ಪ ಬಂಡಿ ಶಾಸಕರಾಗಿದ್ದ ಸಂದರ್ಭದಲ್ಲಿ ಆರಂಭಿಸಲಾಗಿತ್ತು. 2013 ರಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದು ಈ ಯೋಜನೆ ಸಂರ್ಪೂಣ ಸ್ಥಗಿತಗೊಳಿಸಿದರು. ಕುಡಿಯುವ ನೀರು ಕೊಡುವುದು ನಮ್ಮ ಕರ್ತವ್ಯವೂ ಹೌದು, ಪುಣ್ಯದ ಕೆಲಸವೂ ಹೌದು. ನಾನು ಸಿಎಂ ಆದ ಮೇಲೆ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿದೆ ಎಂದು ಹೇಳಿದರು.
    ನಾನು ಸಿಎಂ ಆಗಿದ್ದಾಗ ರಾಜ್ಯದ 30 ಲಕ್ಷ ಮನೆಗಳಿಗೆ ಕುಡಿಯುವ ನೀರು ಕೊಡುವ ಕೆಲಸ ಮಾಡಿದ್ದೇನೆ. ಈ ಭಾಗದ 21 ಕೆರೆ ತುಂಬಿಸಲು ಆಲಮಟ್ಟಿ ಆಣೆಕಟ್ಟೆಯಿಂದ ನೀರು ತರಲಾಗಿತ್ತು. ಇವತ್ತಿನ ಕಾಂಗ್ರೆಸ್​ ಸರ್ಕಾರ ನೀರು ಕೊಡುವುದರಲ್ಲಿಯೂ ರಾಜಕಾರಣ ಮಾಡುತ್ತಿದೆ. ಅಧಿಕಾರ ಶಾಶ್ವತ ಅಲ್ಲ. ಕಳಕಪ್ಪ ಬಂಡಿ ಚುನಾವಣೆಯಲ್ಲಿ ಸೋತಿರಬಹುದು.ಆದರೆ, ಅವರು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದರು.
    ಶಾಸಕರು, ಮಂತ್ರಿಗಳು ಬಹಳ ಜನ ಆಗಬಹುದು. ಆದರೆ ಜನನಾಯಕ ಆಗುವುದು ಕಷ್ಟ. ರಾಜ್ಯದಲ್ಲಿ ನೂರಾರು ಜನ ಸಚಿವರಾಗಿದ್ದಾರೆ. ಆದರೆ, ಜನನಾಯಕರು ಎಷ್ಟು ಜನ ಆಗಿದ್ದಾರೆ ಎಂಬುದು ಪ್ರಶ್ನೆ. ನಮಗೆ ಜನಪ್ರೀಯ ಶಾಸಕರು ಬೇಡ, ಜನಪರ ಶಾಸಕರು ಬೇಕು ಎಂದರು.

    ರೋಣ ತಾಲೂಕಿಗೂ ನೀರಾವರಿ:
    ಕೊಪ್ಪಳ ಏತ ನೀರಾವರಿಯನ್ನು ರೋಣ ತಾಲೂಕಿಗೂ ವಿಸ್ತರಣೆ ಮಾಡಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ. ಸಿಂಗಟಾಲೂರು ಏತ ನೀರಾವರಿ ಯೋಜನೆಗೆ 850 ಕೋಟಿ ರೂ. ಖರ್ಚು ಮಾಡಿ ಯೋಜನೆ ಜಾರಿ ಮಾಡಿದ್ದೇವೆ. ರಾಜ್ಯದಲ್ಲಿ ಬರ ಬಂದಿದೆ. ಕಾಂಗ್ರೆಸ್​ ಕೊಡುವ 2000 ಹಣದಲ್ಲಿ ಶೇ. 75 ರಷ್ಟು ಹಣ ಕೇಂದ್ರ ಸರ್ಕಾರದಿಂದ ಬಂದಿದೆ. ಇತ್ತಿಚೆಗೆ 3454 ಕೋಟಿ ಕೇಂದ್ರ ಸರ್ಕಾರ ಬರ ಪರಿಹಾರ ಕೊಟ್ಟಿದೆ. ಅಷ್ಟೇ ಹಣವನ್ನು ರಾಜ್ಯ ಸರ್ಕಾರ ಕೊಡಬೇಕು. ಯುಪಿಎ ಅವಧಿಯಲ್ಲಿ 19579 ಕೋಟಿ ರೂ. ಪರಿಹಾರ ಕೇಳಿದರೆ, ಕಾಂಗ್ರೆಸ್​ ಕೊಟ್ಟಿದ್ದು ಕೇವಲ 1900 ಕೋಟಿ ಮಾತ್ರ. ಎನ್​ಡಿಎ ಸರ್ಕಾರ ಹತ್ತು ವರ್ಷದಲ್ಲಿ 10 ಸಾವಿರ ಕೋಟಿ ರೂ. ನೀಡಿದೆ. ಶೇ. 60 ರಷ್ಟು ಕೇಂದ್ರ ಸರ್ಕಾರ ಕೊಟ್ಟಿದೆ ಎಂದು ಹೇಳಿದರು.
    ಕಳೆದ ಹತ್ತು ತಿಂಗಳಲ್ಲಿ ರೈತರಿಗೆ ಕಾಂಗ್ರೆಸ್​ ಕೊಟ್ಟಿದೇನು? ಎಂದು ಪ್ರಶ್ನಿಸಿದ ಬೊಮ್ಮಾಯಿ, ನಾವು ಕೊಟ್ಟಿದ್ದ ರೈತ ವಿದ್ಯಾನಿಧಿ, ರೈತಶಕ್ತಿ, ಕಿಸಾನ್​ ಸಮ್ಮಾನ್​ ಯೋಜನೆಗಳನ್ನು ನಿಲ್ಲಿಸಿದ್ದಾರೆ. ದಲಿತರ ಹಣವನ್ನೂ ಬಿಡಲಿಲ್ಲ. ದಲಿತರ ಮೇಲೆ ಪ್ರೀತಿಯ ಭಾಷಣ ಮಾಡುವ ಇವರು ದಲಿತರ ಹೊಟ್ಟೆ ಮೇಲೆ ಹೊಡೆದಿದ್ದಾರೆ. ರೈತನ ಬೆನ್ನಿಗೆ ಹೊಡೆದು, ಮಹಿಳೆಯರ ಬದುಕಿನ ಮೇಲೆ ಹೊಡೆದಿದ್ದಾರೆ. ಕಾಂಗ್ರೆಸ್​ ಸರ್ಕಾರದಲ್ಲಿ ಮಹಿಳೆಯರ ಮಾನ ಪ್ರಾಣಕ್ಕೆ ರಕ್ಷಣೆ ಇಲ್ಲವಾಗಿದೆ. ಹುಬ್ಬಳ್ಳಿಯಲ್ಲಿ ಕಾಲೇಜು ಯುವತಿಯನ್ನು ಒಂಭತ್ತು ಬಾರಿ ಇರಿದು ಕೊಲೆ ಮಾಡಲಾಗಿದೆ. ಈ ಸರ್ಕಾರ ಆರೋಪಿಗಳನ್ನು ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದರು.

    ಕಾಂಗ್ರೆಸ್ಸಿಗೆ ಚೊಂಬು:
    ಲೋಕಸಭೆ ಚುನಾವಣೆಯಲ್ಲಿ ಈಗ ನಡೆದಿರುವ 14 ಕ್ಷೇತ್ರಗಳ ಪೈಕಿ 14 ಕೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಉತ್ತರ ಕರ್ನಾಟಕದಲ್ಲಿಯೂ ಎಲ್ಲ ಕ್ಷೇತ್ರಗಳನ್​ಉ ಬಿಜೆಪಿ ಗೆಲ್ಲಲಿದೆ. ಬಿಜೆಪಿಗೆ ಮತ ಹಾಕಿ ಮೆ.7 ರ ನಂತರ ಕಾಂಗ್ರೆಸ್​ ಗೆ ಚೊಂಬು ಕೊಡಬೇಕು. ಮುಂದಿನ ಒಂದು ವರ್ಷದಲ್ಲಿ ರಾಜ್ಯದಲ್ಲಿ ಮತ್ತೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
    ಸಮಾವೇಶದಲ್ಲಿ ವಿರೋಧ ಪಕ್ಷದ ನಾಯಕ ಆರ್​. ಅಶೋಕ್​, ಚಿತ್ರ ನಟಿ ತಾರಾ, ಮಾಜಿ ಸಚಿವ ಕಳಕಪ್ಪ ಬಂಡಿ, ಎಸ್​.ಕೆ ಬೆಳ್ಳುಬ್ಬಿ ಸೇರಿದಂತೆ ಅನೇಕ ಮುಖಂಡರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts