ಬೆಂಗಳೂರು: ಫೇಸ್ಬುಕ್ನಲ್ಲಿ ಇಸ್ಲಾಂ ಧರ್ಮಗುರುವಿನ ಬಗ್ಗೆ ಅವಹೇಳನಕಾರಿ ಬರಹ ಹಾಕಿದ್ದ ನವೀನ್ನನ್ನು ಕೂಡಲೇ ತಂದೊಪ್ಪಿಸುವಂತೆ ಪೊಲೀಸ್ ಠಾಣೆಯಲ್ಲಿ ಪಟ್ಟು ಹಿಡಿದಿದ್ದ ಶಿವಾಜಿನಗರದ ಸೈಯದ್ ಅಜ್ನಾನ್ ಹಾಗೂ ಮುಜಾಮಿಲ್ ಪಾಷ ಅವರೇ ಕೆಜಿ ಹಳ್ಳಿ, ಡಿಜೆ ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ಗಲಭೆ ಸಂಭವಿಸಲು ಪ್ರಮುಖ ಕಾರಣಕರ್ತರು ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ಶಿವಾಜಿನಗರದಲ್ಲಿ ಧಾರ್ಮಿಕ ಶಾಲೆ ನಡೆಸುತ್ತಿರುವ ಸೈಯದ್ ಅಜ್ನಾನ್, ಎಸ್ಡಿಪಿಐ ಪಕ್ಷದ ಮುಖಂಡ ಮುಜಾಮಿಲ್ ಪಾಷ ಸೇರಿದಂತೆ 15 ಮಂದಿ ಮಂಗಳವಾರ ರಾತ್ರಿ 8.30ರ ಸುಮಾರಿಗೆ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗೆ ಬಂದಿದ್ದರು. ಅವಹೇಳನಕಾರಿ ಪೋಸ್ಟ್ ಮಾಡಿರುವ ನವೀನ್ನನ್ನು ಬಂಧಿಸುವಂತೆ ಆಗ್ರಹಿಸಿದರು. ದೂರು ಪಡೆದ ಇನ್ಸ್ಪೆಕ್ಟರ್ ಕೇಶವಮೂರ್ತಿ, ಎಫ್ಐಆರ್ ದಾಖಲಿಸಿಕೊಂಡು ಕೂಡಲೇ ಆರೋಪಿಯನ್ನು ಬಂಧಿಸುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪದ ಅವರು, ‘ಈಗಲೇ ಬಂಧಿಸಿ ಠಾಣೆಗೆ ಕರೆತನ್ನಿ, ಆತನನ್ನು ನಮಗೆ ಒಪ್ಪಿಸಿ’ ಎಂದು ಪಟ್ಟು ಹಿಡಿದರು. ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದರೂ ಇದಕ್ಕೊಪ್ಪದ ಅವರು, ಠಾಣೆ ಬಳಿಗೆ ಬರುವಂತೆ ಯಾರಿಗೂ ಒಂದು ಫೋನ್ ಕಾಲ್ ಮಾಡುತ್ತಾರೆ. ಕೆಲವೇ ಕ್ಷಣದಲ್ಲಿ ಠಾಣೆ ಎದುರು ಸಾವಿರಾರು ಮಂದಿ ಜಮಾಯಿಸಿದ್ದರು. ಅವರ ಕೈಯಲ್ಲಿ ಕಲ್ಲು, ಪೆಟ್ರೋಲ್, ಕೆರಾಸಿನ್ ಇದ್ದವು.
ಇದನ್ನೂ ಓದಿರಿ ನಾನು ಹುಟ್ಟಿ ಬೆಳೆದ ಮನೆಯನ್ನು ಸುಟ್ಟು ಹಾಕಿದ್ದಾರೆ… ಗಲಭೆಕೋರರಿಗೆ ಕಠಿಣ ಶಿಕ್ಷೆ ಆಗಲೇ ಬೇಕು: ಅಖಂಡ ಶ್ರೀನಿವಾಸಮೂರ್ತಿ
ಠಾಣೆಯಿಂದ ಹೊರಬಂದ ಅಜ್ನಾನ್ ಹಾಗೂ ಮುಜಾಮಿಲ್, ಜನರ ಜತೆ ಸೇರಿ ಪ್ರತಿಭಟನೆ ಆರಂಭಿಸಿದರು. ಮುಂಜಾಗ್ರತಾ ಕ್ರಮವಾಗಿ ಠಾಣೆ ಗೇಟ್ ಅನ್ನು ಪೊಲೀಸರು ಮುಚ್ಚಿದರು. ಅಷ್ಟರಲ್ಲಿ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಹಾಗೂ ಬಾಣಸವಾಡಿ ಉಪವಿಭಾಗದ ಎಸಿಪಿ ರವೀಂದ್ರಪ್ರಸಾದ್ ಠಾಣೆಗೆ ಬಂದಿದ್ದರು.
ಗೇಟ್ ಮುರಿದು ಠಾಣೆಯೊಳಗೆ ನುಗ್ಗಲು ಕಿಡಿಗೇಡಿಗಳು ಯತ್ನಿಸಿದರು. ಡಿಸಿಪಿ, ಎಸಿಪಿ, ಇನ್ಸ್ಪೆಕ್ಟರ್ ವಾಹನಕ್ಕೆ ಬೆಂಕಿ ಹಚ್ಚಿದರು. ಠಾಣೆ ನೆಲಮಹಡಿಯ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಬೈಕ್ಗಳನ್ನು ಸುಟ್ಟರು. ಘಟನಾ ಸ್ಥಳಕ್ಕೆ ಬಂದ ಕೆಎಸ್ಆರ್ಪಿ ವಾಹನ, ಹೊಯ್ಸಳ ಗಸ್ತು ವಾಹನಕ್ಕೂ ಸೀಮೆಎಣ್ಣೆ ಹಾಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು.
ಕೆಲವರು, ಠಾಣೆಯೊಳಗೆ ನುಗ್ಗಲು ಯತ್ನಿಸಿ ಪೊಲೀಸರ ಬಂದೂಕುಗಳನ್ನು ಕಿತ್ತುಕೊಳ್ಳಲು ಮುಂದಾದರು. ಇದೇ ವೇಳೆ ಡಿಸಿಪಿ ಮತ್ತು ಎಸಿಪಿ ಅವರು ಠಾಣೆಯ ಬಾಗಿಲನ್ನು ಒಳಗಿನಿಂದ ಮುಚ್ಚಿ ರಕ್ಷಣೆ ಪಡೆದುಕೊಂಡರು. ಅದೇ ಸಂದರ್ಭದಲ್ಲಿ ಉದ್ರಿಕ್ತರು ಠಾಣೆಯ ಕಿಟಕಿ ಬಾಗಿಲಿನ ಗಾಜು ಒಡೆದರು. ಈ ಗಲಭೆ ನಡೆಯುತ್ತಿದ್ದ ವೇಳೆ ಅಜ್ನಾನ್ ಹಾಗೂ ಮುಜಾಮಿಲ್ ಸ್ಥಳದಲ್ಲೇ ಇದ್ದರು. ಅವರೇ ಇತರರಿಗೆ ಪ್ರಚೋದನೆ ನೀಡಿದರು ಎಂಬುದಕ್ಕೆ ವಿಡಿಯೋ ಲಭ್ಯವಾಗಿದೆ.
ಅಜ್ನಾನ್ ಹಾಗೂ ಮುಜಾಮಿಲ್ ಇಬ್ಬರನ್ನೂ ಈಗಾಗಲೇ ಬಂಧಿಸಿರುವ ಪೊಲೀಸರು, ಅಜ್ಞಾತ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತ ಆರೋಪಿ ಮುಜಾಮಿಲ್, ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಎಸ್ಡಿಪಿ ಪಕ್ಷದ ಅಭ್ಯರ್ಥಿಯಾಗಿ ಸಂಗಯ್ಯಪುರ ವಾರ್ಡ್-60 ಕ್ಷೇತ್ರದಿಂದ ಸ್ಪರ್ಧಿಸಿದ್ದ.
ಡಿಜೆ ಹಳ್ಳಿ ಗಲಭೆ: ಅವಹೇಳನಕಾರಿ ಪೋಸ್ಟ್ ಹಾಕಿದ್ದ ನವೀನ್ ಬಿಜೆಪಿ ಅಭಿಮಾನಿ ಎಂದ ಡಿ.ಕೆ.ಶಿವಕುಮಾರ್
.