More

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನ: ಮಹಾರಾಷ್ಟ್ರ ಸಿಎಂ ಶಿಂಧೆ ಹೇಳಿಕೆಗೆ ತಿರುಗೇಟು ಕೊಟ್ಟ ಶಾಸಕ ರವಿಕುಮಾರ್ ಗಣಿಗ

    ಮಂಡ್ಯ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ, ಶಿಂಧೆ ರೀತಿ ತಾಯಿಗೆ ದ್ರೋಹ ಮಾಡುವವರು ನಮ್ಮಲ್ಲಿಲ್ಲ. ನಮ್ಮದು ಗಟ್ಟಿಯಾದ ಸರ್ಕಾರ ಎಂದಿದ್ದಾರೆ.
    ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಂಧೆ ಅನ್ನ ಕೊಟ್ಟ ಪಕ್ಷಕ್ಕೆ ಚೂರಿ ಹಾಕಿದ್ದಾರೆ. ಅವರ ರೀತಿ ನಮ್ಮಲ್ಲಿ ಶಕುನಿ ಕೆಲಸ ಯಾರು ಮಾಡಲ್ಲ. ನಮ್ಮದು 136+2(ಕಾಂಗ್ರೆಸ್ ಹಾಗೂ ಪಕ್ಷೇತರ ಶಾಸಕರ ಬಲ) ಗಟ್ಟಿಯಾದ ಸರ್ಕಾರ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಐದು ವರ್ಷ ಸ್ಟ್ರಾಂಗ್ ಆಗಿ ನಡೆಯುತ್ತದೆ ಎಂದರು.
    ಬಿಜೆಪಿಯ 25 ಹಾಗೂ ಜೆಡಿಎಸ್‌ನ 13 ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದಾರೆ. ಆದ್ದರಿಂದ ಮೊದಲು ಅವರ ಪಕ್ಷವನ್ನು ಉಳಿಸಿಕೊಳ್ಳಲಿ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಅವರ ಶಾಸಕರನ್ನು ಭದ್ರವಾಗಿ ಇಟ್ಟುಕೊಳ್ಳಲಿ. ಎಂಪಿ ಚುನಾವಣೆ ಮುಂಚೆಯೇ ಅವರು ನಮ್ಮೊಂದಿಗೆ ಸಂಪರ್ಕದಲ್ಲಿ ಇದ್ದಾರೆ. ಎಲ್ಲರೂ ಸಂಪರ್ಕದಲ್ಲಿ ಇದ್ದಾರೆ, ಅದರಂತೆ ಮಾತುಕತೆ ನಡೆಯುತ್ತಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಜತೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದರು.
    ಹಿರಿಯ ಶಾಸಕ ಜಿ.ಟಿ.ದೇವೇಗೌಡ ಜೆಡಿಎಸ್‌ನ ಕಟ್ಟಪ್ಪ ಆಗಿದ್ದಾರೆ. ಅವರ ಹೆಸರು ಬೇಡ, ಬೇರೆ ಅವರು ನಮ್ಮೊಟ್ಟಿಗೆ ಇದ್ದಾರೆ. ಕೆಲವೇ ದಿನಗಳಲ್ಲಿ ಬಿಜೆಪಿ ವಿರೋಧ ಪಕ್ಷ ಸ್ಥಾನ ಕಳೆದುಕೊಳ್ಳಲಿದೆ. ವಿರೋಧ ಪಕ್ಷಕ್ಕೆ ಬೇಕಾದ ಸಂಖ್ಯಾಬಲ ಅವರ ಬಳಿ ಇರಲ್ಲ. ಮುಂದಿನ ನಾಲ್ಕು ವರ್ಷ ನಮ್ಮ ಸರ್ಕಾರ ಅಭಿವೃದ್ಧಿ ಕೆಲಸ ಮಾಡಲಿದೆ. ರಾಜ್ಯದಲ್ಲಿ ಬಿಜೆಪಿ ಯಾವಾಗಲೂ ಸ್ವತಂತ್ರವಾಗಿ ಗೆದ್ದು ಬಂದಿಲ್ಲ. ಬೇರೆ ಅವರನ್ನು ಒಡೆದು ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಈಗ ಅದು ನಡೆಯುವುದಿಲ್ಲ. ರಾಮರಾಜ್ಯ ನಮ್ಮ ಸರ್ಕಾರದಲ್ಲಿ ನಡೆಯುತ್ತದೆ. ಟ್ರೈಂ ಪಾಸ್‌ಗೆ ಬಿಜೆಪಿ ಅವರು ಮಾತಾಡುತ್ತಾರೆ ಅಷ್ಟೆ ಎಂದು ವ್ಯಂಗ್ಯವಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts