ಜೈಪುರ: ಮುಸ್ಲಿಂ ಲೀಗ್ಗಿಂತ ಮೂರು ವರ್ಷಗಳ ಮುನ್ನ ಪಾಕಿಸ್ತಾನದ ನಿರ್ಣಯವನ್ನು ಅಂಗೀಕರಿಸುವ ವಿಚಾರವನ್ನು ಪ್ರಸ್ತಾಪಿಸಿದ ಮೊದಲ ವಕೀಲ ವೀರ ಸಾವರ್ಕರ್ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ವಿವಾದಿತ ಹೇಳಿಕೆ ನೀಡಿದ್ದಾರೆ.
ಜೈಪುರ ಸಾಹಿತ್ಯ ಸಮ್ಮೇಳನ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ಎರಡು ರಾಷ್ಟ್ರಗಳ ಸಿದ್ಧಾಂತ ಸಾವರ್ಕರ್ ಅವರದ್ದು, ಹಿಂದು ಮಹಾಸಭಾವು ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಗುರುತಿಸಬೇಕು ಎಂದರೆ, ಮುಸ್ಲಿಮರಿಗೆ ಬೇರೆ ರಾಷ್ಟ್ರಬೇಕು ಎಂದಿತ್ತು ಎಂದು ಹೇಳಿದರು.
ಹೀಗಾಗಲೇ ಸಾವರ್ಕರ್ ಬಗ್ಗೆ ರಾಜಕೀಯದ ಹಲವು ನಾಯಕರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಶಶಿ ತರೂರ್ ಅವರು ಈ ವಿವಾದಿತ ಹೇಳಿಕೆ ನೀಡಿದ್ದಾರೆ.
ವೀರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಬೇಕು ಎಂದು ಬಿಜೆಪಿ ಮತ್ತು ಶಿವಸೇನೆ ಪ್ರತಿಪಾದಿಸಿವೆ. ಇದಕ್ಕೆ ಕೆಲ ಪಕ್ಷಗಳು ವಿರೋಧಿಸಿವೆ.
ಜನವರಿ 18ರಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಅವರು, ಸಾವರ್ಕರ್ ಅವರನ್ನು ನಾವು ಗೌರವಿಸುತ್ತೇವೆ. ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಕೊಡಲು ವಿರೋಧಿಸುವವರನ್ನು ಅವರಿದ್ದ ಜೈಲಿನಲ್ಲಿ ಎರಡು ದಿನ ಇಡಬೇಕು. ಆಗ ದೇಶಕ್ಕೆ ಸಾವರ್ಕರ್ ಅವರ ಕೊಡುಗೆ ಏನು ಎಂಬುದು ಅರ್ಥವಾಗುತ್ತದೆ ಎಂದಿದ್ದರು. (ಏಜೆನ್ಸೀಸ್)