ನವದೆಹಲಿ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯ ಎದ್ದಿರುವ ಡಿಸಿಎಂ ಸಚಿನ್ ಪೈಲಟ್ ತಮ್ಮ ಆಪ್ತರೊಂದಿಗೆ ದೆಹಲಿಯಲ್ಲಿ ಬೀಡುಬಿಟ್ಟಿದ್ದರು. ಹಾಗೇ, ಹೈಕಮಾಂಡ್ ಎದುರು ತಮ್ಮ ಬಲಪ್ರದರ್ಶನಕ್ಕೆ ಎಲ್ಲ ಸಿದ್ಧತೆಯನ್ನೂ ನಡೆಸಿದ್ದರು.
ಆದರೆ ಸಚಿನ್ ಪೈಲಟ್ಗೆ ಕಾಂಗ್ರೆಸ್ ಹೈಕಮಾಂಡ್ ಬಹುದೊಡ್ಡ ಶಾಕ್ ನೀಡಿದೆ. ಕೂಡಲೇ ಜೈಪುರಕ್ಕೆ ತೆರಳಿ, ಅಶೋಕ್ ಗೆಹ್ಲೋಟ್ ನಾಯಕತ್ವದ ಆಡಳಿತದಲ್ಲೇ ಕೆಲಸ ಮಾಡಿಕೊಂಡಿರಲು ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಇಂದು ರಾತ್ರಿಯೇ ಜೈಪುರಕ್ಕೆ ವಾಪಸ್ ಹೋಗಬೇಕು ಮತ್ತು ಅಲ್ಲಿ ಕಾಂಗ್ರೆಸ್ ವೀಕ್ಷಕರಾದ ಅಜಯ್ ಮೇಕನ್, ರಾಜಸ್ಥಾನ ಕಾಂಗ್ರೆಸ್ ಪ್ರದೇಶ ಸಮಿತಿ ಮುಖ್ಯಸ್ಥ ಅವಿನಾಶ್ ಪಾಂಡೆ ಮತ್ತು ಪಕ್ಷದ ಹಿರಿಯ ವಕ್ತಾರ ರಣದೀಪ್ ಸಿಂಗ್ ಸರ್ಜೇವಾಲಾ ಅವರನ್ನು ಭೇಟಿಯಾಗಬೇಕು ಎಂದು ಸಚಿನ್ ಅವರಿಗೆ ಕಾಂಗ್ರೆಸ್ ವರಿಷ್ಠರು ಸೂಚಿಸಿದ್ದಾರೆ ಎನ್ನಲಾಗಿದೆ.
ಈ ಮೂವರನ್ನೂ ರಾಜಸ್ಥಾನದಲ್ಲಿ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದ್ದು, ಇಂದು ರಾತ್ರಿಯ ಫ್ಲೈಟ್ನಲ್ಲಿ ಅವರೂ ಕೂಡ ಜೈಪುರಕ್ಕೆ ತೆರಳಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ರಷ್ಯಾದಲ್ಲಿ ಸಿದ್ಧವಾಯ್ತು ಜಗತ್ತಿನ ಮೊದಲ ಕೊವಿಡ್-19 ಲಸಿಕೆ; ಕ್ಲಿನಿಕಲ್ ಪ್ರಯೋಗ ಸಂಪೂರ್ಣ ಯಶಸ್ವಿ
ನಾಳೆ ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಿವಾಸದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಆ ಸಭೆಗೆ ಹಾಜರಾಗಬೇಕು ಎಂದೂ ಸಚಿನ್ ಪೈಲಟ್ಗೆ ಸೂಚಿಸಲಾಗಿದೆ.
ಇನ್ನು ಎಂಎಲ್ಎಗಳನ್ನು ಅಪಹರಿಸಿದ್ದಾರೆ ಎಂಬ ಆರೋಪದಡಿ ತನಗೆ ರಾಜಸ್ಥಾನ ಪೊಲೀಸರು ನೋಟಿಸ್ ಕೊಟ್ಟಿದ್ದು, ತನಿಖೆ ಶುರು ಮಾಡಿದ್ದರ ಬಗ್ಗೆ ಸಚಿನ್ ಪೈಲಟ್ ಕೂಡ ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)
ಸಚಿನ್ ಪೈಲಟ್ ಪರಿಸ್ಥಿತಿ ನೋಡಿದರೆ ತುಂಬ ನೋವಾಗುತ್ತದೆ ಎಂದ ಜ್ಯೋತಿರಾದಿತ್ಯ ಸಿಂಧಿಯಾ