ಬೋರಗಾಂವ: ಸಹಕಾರ, ಶಿಕ್ಷಣ, ಕ್ರೀಡೆ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಕೊಡುಗೆ ನೀಡಿರುವ ಉದ್ಯಮಿ ಅಭಿನಂದನ ಪಾಟೀಲ ಅವರ ಜನ್ಮದಿನವನ್ನು ಪ್ರತಿ ವರ್ಷ ವಿವಿಧ ಸಾಮಾಜಿಕ ಚಟುವಟಿಕೆಗಳ ಮೂಲಕ ಆಚರಿಸಲಾಗುತ್ತದೆ. ಕಬ್ಬು ಅರೆಯುವ ಕಾರ್ಮಿಕರ ಮಕ್ಕಳಿಗೆ ಅನ್ನಸಂತರ್ಪಣೆ, ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿ ವಿತರಿಸುವ ಸಮಾಜಮುಖಿ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಘೋಸರವಾಡದ ಜಾನಕಿ ವೃದ್ಧಾಶ್ರಮದ ಪ್ರವರ್ತಕ ಬಾಬಾಸಾಹೇಬ ಪೂಜಾರಿ ಹೇಳಿದರು.
ಸಮೀಪದ ಗೋಸರವಾಡ ಗ್ರಾಮದ ಜಾನಕಿ ವೃದ್ಧಾಶ್ರಮದಲ್ಲಿ ಭಾನುವಾರ ಏರ್ಪಡಿಸಿದ್ದ ಅರಿಹಂತ ಉದ್ಯೋಗ ಸಮೂಹದ ಕಾರ್ಯಾಧ್ಯಕ್ಷ ಅಭಿನಂದನ ರಾವಾಸಾಹೇಬ ಪಾಟೀಲ ಅವರ 48ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವ ಮುಖಂಡ ಪಥ್ವಿರಾಜ್ ಪಾಟೀಲ ಮಾತನಾಡಿ, ಉದ್ಯಮಿ ಅಭಿನಂದನ ಪಾಟೀಲ ಅವರು ಹಲವು ವರ್ಷಗಳಿಂದ ಸಹಕಾರಿ ಕ್ಷೇತ್ರದ ಜತೆಗೆ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಅವರ ಜನ್ಮದಿನದಂದು ಸಾಮಾಜಿಕ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ವೃದ್ಧಾಶ್ರಮಕ್ಕೆ ದಿನಸಿ ಸಾಮಗ್ರಿ ವಿತರಿಸಲಾಯಿತು. ಬೋರಗಾಂವ ನಗರದ ಹಲವು ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಅಭಿಷೇಕ ನೆರವೇರಿಸಲಾಯಿತು. ಸುಮತಿ ನಿವಾಸದ ಎದುರು ಬ್ರಹ್ಮದೇವನ ಪೂಜೆ ಮಾಡುವ ಮೂಲಕ ಅಭಿನಂದನ ಪಾಟೀಲ ಅವರಿಗೆ ದೀರ್ಘಾಯುಷ್ಯ ಸಿಗಲಿ ಎಂದು ಪ್ರಾರ್ಥಿಸಲಾಯಿತು. ಅರಿಹಂತ ಶಾಲೆಯ ಸಿಇಒ ಬಾಳಾಸಾಹೇಬ ಹಾವಲೆ, ಪಿಕೆಪಿಎಸ್ ಸಿಇಒ ರಾಕೇಶ ಫಿರಗನ್ನವರ, ಹಾಲು ಉತ್ಪಾದಕರ ಸಂಘದ ಸಿಇಒ ಬಾಹುಬಲಿ ಕಾವಟೆ ಹಾಗೂ ಅರಿಹಂತ ಪದಾಧಿಕಾರಿಗಳು ಉಪಸ್ಥಿತರಿದ್ದರು.