More

    ಸಣ್ಣ ಅಪರಾಧಗಳಿಗೆ ಕ್ಷಮೆ; ಜನವಿಶ್ವಾಸ ವಿಧೇಯಕ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಅನುಮೋದನೆ

    ನವದೆಹಲಿ: ವ್ಯಾಪಾರ-ವಹಿವಾಟುಗಳನ್ನು ಸುಗಮಗೊಳಿಸುವ ಉದ್ದೇಶದಿಂದ 42 ವಿವಿಧ ಕಾಯ್ದೆಗಳಲ್ಲಿನ 183 ನಿಬಂಧನೆಗಳನ್ನು ಪರಿಷ್ಕರಿಸುವ ಮೂಲಕ ಸಣ್ಣಸಣ್ಣ ಅಪರಾಧಗಳಿಗೆ ಕ್ಷಮೆ ನೀಡುವ (ನಿರಪರಾಧೀಕರಣ) ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಮಸೂದೆ-2023ರ ತಿದ್ದುಪಡಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. 19 ಸಚಿವಾಲಯಗಳು ನಿರ್ವಹಿಸುವ 42 ಕಾಯ್ದೆಗಳ 183 ನಿಬಂಧನೆಗಳಿಗೆ ತಿದ್ದುಪಡಿ ತರಲು ಇದು ಪ್ರಸ್ತಾಪಿಸಿದೆ.

    ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಮಸೂದೆಯನ್ನು ಕಳೆದ ವರ್ಷದ ಡಿಸೆಂಬರ್ 22ರಂದು ಲೋಕಸಭೆಯಲ್ಲಿ ವಾಣಿಜ್ಯ, ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮಂಡಿಸಿದ್ದರು. ನಂತರ, ಮಸೂದೆಯನ್ನು ಸಂಸತ್ತಿನ ಜಂಟಿ ಸಮಿತಿಗೆ ಶಿಫಾರಸು ಮಾಡಲಾಯಿತು. ಈ ಬಗ್ಗೆ ಸಮಿತಿಯು ಶಾಸಕಾಂಗ – ಕಾನೂನು ಇಲಾಖೆ ಸೇರಿ ಎಲ್ಲಾ 19 ಸಚಿವಾಲಯಗಳೊಂದಿಗೆ ವಿಸõತ ಚರ್ಚೆ ನಡೆಸಿ ಈ ವರ್ಷದ ಮಾರ್ಚ್​ನಲ್ಲಿ ತನ್ನ ವರದಿಯನ್ನು ಅಂಗೀಕರಿಸಿ, ರಾಜ್ಯಸಭೆ ಮತ್ತು ಲೋಕಸಭೆ ಮುಂದಿಟ್ಟಿದೆ.

    ವ್ಯಾಪಾರ ಮತ್ತು ಜೀವನ ನಿರ್ವಹಣೆಯನ್ನು ಸುಲಭಗೊಳಿಸುವ ಉದ್ದೇಶದಿಂದ ಜನ ವಿಶ್ವಾಸ್ ವಿಧೇಯಕವನ್ನು ಪರಿಗಣನೆಗೆ ತೆಗೆದುಕೊಂಡು ಸಣ್ಣಸಣ್ಣ ಅಪರಾಧಗಳಿಗೆ ದೊಡ್ಡ ಪ್ರಮಾಣದ ದಂಡ ಅಥವಾ ಶಿಕ್ಷೆ ವಿಧಿಸದಿರಲು ರಾಜ್ಯ ಸರ್ಕಾರಗಳನ್ನು ಉತ್ತೇಜಿಸಬೇಕು ಎಂದು ಸಂಸದೀಯ ಸಮಿತಿಯು ಕೇಂದ್ರಕ್ಕೆ ತಿಳಿಸಿದೆ. ನ್ಯಾಯಾಲಯದ ಮೊಕದ್ದಮೆಗಳ ಬಾಕಿ ಉಳಿದಿರುವಿಕೆ ತಗ್ಗಿಸಲು ಸಹಾಯ ಮಾಡುವಂತಹ ನಿಬಂಧನೆಗಳನ್ನು ಅಳವಡಿಸಿಕೊಳ್ಳಬೇಕು ಎಂದೂ ಸಮಿತಿ ಸಲಹೆ ನೀಡಿದೆ. ವ್ಯಾಜ್ಯಗಳ ಹೆಚ್ಚಳವನ್ನು ತಪ್ಪಿಸಲು ದಂಡದ ಬದಲು ದಂಡವನ್ನು ವಿಧಿಸುವುದರೊಂದಿಗೆ ಜೈಲು ಶಿಕ್ಷೆಯನ್ನು ಕಾರ್ಯಸಾಧ್ಯವಾದ ಸ್ಥಳಗಳಲ್ಲಿ ತೆಗೆದುಹಾಕಬಹುದು ಎಂದು ಸಮಿತಿಯು ಶಿಫಾರಸು ಮಾಡಿದೆ.

    ಸಣ್ಣಸಣ್ಣ ಅಪರಾಧಗಳ ಅಮಾನ್ಯಗೊಳಿಸುವ ಜತೆಗೆ ಸಂದರ್ಭಕ್ಕನುಗುಣವಾಗಿ ಜೈಲುಶಿಕ್ಷೆ ಬದಲಿಗೆ ದಂಡ ವಿಧಿಸುವ ಪ್ರಕ್ರಿಯೆ ತರ್ಕಬದ್ಧಗೊಳಿಸುವುದಕ್ಕೆ ಮಸೂದೆ ವೇದಿಕೆ ಒದಗಿಸಿದ್ದು, ನಂಬಿಕೆ ಆಧಾರಿತ ಆಡಳಿತವನ್ನು ಬಲಪಡಿಸುವ ಉದ್ದೇಶ ಹೊಂದಿದೆ. ಶಿಕ್ಷೆಯಿಂದ ವಿನಾಯಿತಿ ನೀಡುವ ಪ್ರಕ್ರಿಯೆ ಬಗ್ಗೆ ಉದಾಹರಣೆ ನೀಡುವುದಾದರೆ ; ಮಾಹಿತಿ ತಂತ್ರಜ್ಞಾನ ಕಾಯ್ದೆ-2000ದ ಅಡಿಯಲ್ಲಿ, ಕಾನೂನುಬದ್ಧ ಒಪ್ಪಂದವನ್ನು ಉಲ್ಲಂಘಿಸಿ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವುದು ಮೂರು ವರ್ಷಗಳ ಜೈಲು ಶಿಕ್ಷೆ ಅಥವಾ ಐದು ಲಕ್ಷ ರೂ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಆದರೆ ತಿದ್ದುಪಡಿ ವಿಧೇಯಕದ ಪ್ರಕಾರ ರೂ 25 ಲಕ್ಷ ದಂಡ ವಿಧಿಸುವುದರ ಮೂಲಕ ಈ ಸಮಸ್ಯೆ ಇತ್ಯರ್ಥವಾಗಲಿದೆ.

    ಕೇಂದ್ರದ ನಿರ್ಧಾರಕ್ಕೆ ಕಾರಣ ಏನು?

    ಒಪ್ಪಂದಗಳ ಜಾರಿ ಮತ್ತು ತೆರಿಗೆ ಅನುಸರಣೆ ಸೇರಿದಂತೆ ವ್ಯಾಪಾರ ಚಟುವಟಿಕೆಯ ವಿವಿಧ ಅಂಶಗಳನ್ನು ಒಳಗೊಂಡಿದ್ದ ವಿಶ್ವಬ್ಯಾಂಕ್​ನ ಈಸ್ ಆಫ್ ಡೂಯಿಂಗ್ ಬಿಜಿನೆಸ್ ಶ್ರೇಯಾಂಕ ವರದಿಯಲ್ಲಿ ಭಾರತ 2013ರಲ್ಲಿ 185 ದೇಶಗಳ ಮಧ್ಯೆ 132ನೇ ಸ್ಥಾನ ಹೊಂದಿತ್ತು. ಈದು 2020ರಲ್ಲಿ 63ಕ್ಕೆ ಏರಿತು. ನಂತರ ಶ್ರೇಯಾಂಕಗಳನ್ನು ಸ್ಥಗಿತಗೊಳಿಸಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ವಾಣಿಜ್ಯ ಸ್ಥಾಯಿ ಸಮಿತಿ ಸೇರಿದಂತೆ ವಿವಿಧ ತಜ್ಞರ ಸಮಿತಿಗಳು, ಕಂಪನಿ ಕಾನೂನು ಸಮಿತಿಯು ವ್ಯಾಪಾರ ಚಟುವಟಿಕೆಗಳಿಗೆ ಅಡೆತಡೆ ಕಡಿಮೆ ಮಾಡಲು ಹಲವು ಸುಧಾರಣೆಗಳನ್ನು ಶಿಫಾರಸು ಮಾಡಿವೆ. ಕಂಪನಿಯ ಕಾನೂನು ಸಮಿತಿಯು ತಾಂತ್ರಿಕ ಅಥವಾ ಕಾರ್ಯವಿಧಾನದ ಉಲ್ಲಂಘನೆಗಳನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವುದು ವ್ಯಾಪಾರ ಚಟುವಟಿಕೆಗೆ ಭಾರಿ ತಡೆಯೊಡ್ಡುತ್ತಿದೆ ಎಂದು ಹೇಳಿದೆ. ನಂತರ, ಕಂಪನಿಗಳ ಕಾಯ್ದೆ-2013ನ್ನು 2019 ಮತ್ತು 2020ರಲ್ಲಿ ತಿದ್ದುಪಡಿ ತಂದು ಇವುಗಳನ್ನು ಸಿವಿಲ್ ಅಪರಾಧಗಳನ್ನಾಗಿ ಮರು-ವರ್ಗೀಕರಿಸಲು ತೀರ್ವನಿಸಲಾಗಿತ್ತು.

    ಲೀಥಿಯಂಗೆ ಉತ್ತೇಜನ

    ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ-1957ರ ತಿದ್ದುಪಡಿಗೆ ಕೇಂದ್ರ ಸಂಪುಟ ಒಪ್ಪಿಗೆ ಸೂಚಿಸಿದ್ದು, ಲೀಥಿಯಂ ಮತ್ತು ಇತರ ಖನಿಜಗಳ ಗಣಿಗಾರಿಕೆಗೆ ಅವಕಾಶ ನೀಡಿದೆ. ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಪ್ರಮುಖ ಖನಿಜಗಳಲ್ಲಿ ಒಂದಾದ ಲೀಥಿಯಂಗೆ ಭಾರೀ ಬೇಡಿಕೆ ಬರುವ ನಿರೀಕ್ಷೆಯಿದೆ. ಲೀಥಿಯಂ, ಚಿನ್ನ, ಬೆಳ್ಳಿ, ತಾಮ್ರ ಮತ್ತು ಸತುಗಳಂತಹ ಖನಿಜಗಳ ಅನ್ವೇಷಣೆ ಉತ್ತೇಜಿಸಲು ಸರ್ಕಾರ ಈ ತಿದ್ದುಪಡಿಗೆ ಪ್ರಸ್ತಾಪಿಸಿದೆ. ಕಂಪನಿಗಳು ಅನ್ವೇಷಿಸಲು ಬಯಸುವ ಪ್ರದೇಶಗಳನ್ನು ಸೂಚಿಸಲು ಅನುಮತಿಸಲಾಗುವುದು. ಭಾರತದಲ್ಲಿ ಗಣಿಗಾರಿಕೆ ನಡೆಸಲು ಪೋ›ತ್ಸಾಹಿಸು ವುದೂ ಇದರ ಉದ್ದೇಶ. ಈ ತಿದ್ದುಪಡಿಯಿಂದ ಖನಿಜ ಪರಿಶೋಧನೆಯ ಎಲ್ಲಾ ಕ್ಷೇತ್ರಗಳಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಸಾಧ್ಯತೆಯಿದೆ.

    ಯಾವ್ಯಾವ ಕಾಯ್ದೆಗಳು

    • ಡ್ರಗ್ಸ್ ಆಂಡ್ ಕಾಸ್ಮೆಟಿಕ್ಸ್ ಕಾಯ್ದೆ 1940
    • ಸಾರ್ವಜನಿಕ ಸಾಲ ಕಾಯ್ದೆ-1944
    • ಫಾರ್ಮಸಿ ಕಾಯ್ದೆ-1948
    • ಸಿನಿಮಾಟೋಗ್ರಾಫ್ ಕಾಯ್ದೆ-1952
    • ಹಕ್ಕುಸ್ವಾಮ್ಯ ಕಾಯ್ದೆ- 1957
    • ಪೇಟೆಂಟ್​ ಕಾಯ್ದೆ-1970
    • ಪರಿಸರ (ರಕ್ಷಣೆ) ಕಾಯ್ದೆ-1986
    • ಮೋಟಾರು ವಾಹನಗಳ ಕಾಯ್ದೆ-1988
    • ಟ್ರೇಡ್ ಮಾರ್ಕ್ ಕಾಯ್ದೆ-1999
    • ರೈಲ್ವೆ ಕಾಯ್ದೆ-1989
    • ಮಾಹಿತಿ ತಂತ್ರಜ್ಞಾನ ಕಾಯ್ದೆ-2000
    • ಹಣಕಾಸು ಅವ್ಯವಹಾರ ತಡೆ ಕಾಯ್ದೆ-2002
    • ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006
    • ಕಾನೂನು ಮಾಪನಶಾಸ್ತ್ರ ಕಾಯ್ದೆ-2009
    • ಫ್ಯಾಕ್ಟರಿಂಗ್ ರೆಗ್ಯುಲೇಷನ್ ಕಾಯ್ದೆ-2011

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts