ಶಿವಮೊಗ್ಗ: ಈ ಬಾರಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮಾ.1ರ ಮಧ್ಯಾಹ್ನ ಒಂದು ವಿಷಯದ ಪರೀಕ್ಷೆ ನಡೆಯಲಿದೆ. ಅಂದು ಶುಕ್ರವಾರವಾದ ಕಾರಣ ಒಂದು ಕೋಮಿನವರ ಪ್ರಾರ್ಥನೆಗೆ ಅನುಕೂಲವಾಗಲೆಂಬ ಕಾರಣಕ್ಕೆ ಈ ಬದಲಾವಣೆ ಮಾಡಲಾಗಿದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿರುವುದು ಧಾರ್ಮಿಕ ಭಾವನೆ ಕೆರಳಿಸುವ ಸಂಗತಿಯಾಗಿದೆ. ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿ ಎನ್ಎಸ್ಯುಐ ಪದಾಧಿಕಾರಿಗಳು ಬುಧವಾರ ಡಿವೈಎಸ್ಪಿ ಸುರೇಶ್ಗೆ ದೂರು ನೀಡಿದರು.
ಮಾ.1ರ ಬೆಳಗ್ಗೆ ಪಿಯುಸಿ ಪರೀಕ್ಷೆ ಆರಂಭವಾಗುವುದರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಮಧ್ಯಾಹ್ನ ನಡೆಸಲಾಗುತ್ತದೆ. ಎಸ್ಎಸ್ಎಲ್ಸಿಯ ಉಳಿದ ಎಲ್ಲ ಪರೀಕ್ಷೆಗಳು ಬೆಳಗ್ಗೆಯೇ ನಡೆಯಲಿವೆ. ಆದರೆ ಶುಕ್ರವಾರದ ನಮಾಜ್ಗಾಗಿ ಮಧ್ಯಾಹ್ನ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸೂಲಿಬೆಲೆ ಪೋಸ್ಟ್ ಮಾಡಿರುವುದು ಅಶಾಂತಿಗೆ ಕಾರಣವಾಗಲಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಒಂದೆಡೆ ಸಮಾಜದಲ್ಲಿ ಸಾಮರಸ್ಯ ಹಾಳಾದರೆ ಮತ್ತೊಂದೆಡೆ ವಿದ್ಯಾರ್ಥಿಗಳಲ್ಲಿ ಕೋಮು ಭಾವನೆ ರೂಪುಗೊಳ್ಳುತ್ತದೆ. ಹೀಗಾಗಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಎನ್ಎಸ್ಯುಐ ಪದಾಧಿಕಾರಿಗಳಾದ ವಿಜಯ್ಕುಮಾರ್, ಹರ್ಷಿತ್, ಚರಣ್, ರವಿಕುಮಾರ್, ಚೇತನ್ ಮುಂತಾದವರಿದ್ದರು.