ಶಿವಮೊಗ್ಗ: ನಗರದ ಕುವೆಂಪು ರಸ್ತೆಗೆ ಹೊಂದಿಕೊಂಡಿರುವ ಮೆಗ್ಗಾನ್ ಆಸ್ಪತ್ರೆಯ ಶಿಥಿಲಗೊಂಡಿರುವ ಹಳೇ ಕಂಪೌಂಡ್ನ್ನೇ ಅವೈಜ್ಞಾನಿಕವಾಗಿ ನಾಲ್ಕೈದು ಅಡಿ ಏರಿಸಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಕಾಮಗಾರಿಯನ್ನು ಸ್ಥಗಿತಗೊಳಿಸಿ ಶನಿವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ವಿಶೇಷ ಅನುದಾನದಲ್ಲಿ 10 ರೂ. ವೆಚ್ಚದಲ್ಲಿ ಕಂಪೌಂಡ್ ದುರಸ್ತಿ ಕಾಮಗಾರಿ ನಡೆಸಲಾಗಿದೆ. ಆದರೆ ಹೊಸದಾಗಿ ಸುಸಜ್ಜಿತ ಕಂಪೌಂಡ್ ನಿರ್ಮಿಸುವ ಬದಲು ಅಲ್ಲಲ್ಲಿ ಮುರಿದುಬಿದ್ದಿರುವ ಕಂಪೌಂಡ್ಗೆ ತೇಪೆ ಹಚ್ಚುವ ಕಾರ್ಯದ ಜತೆಗೆ ಸಿಮೆಂಟ್ ಇಟ್ಟಿಗೆಗಳನ್ನು ಇಟ್ಟು ಕಂಪೌಂಡ್ ಏರಿಸಲಾಗುತ್ತಿದೆ. ಇದು ಭ್ರಷ್ಟತೆಯ ಕರಾಳ ಮುಖವನ್ನು ಮತ್ತೊಮ್ಮೆ ಸಾಬೀತು ಮಾಡುತ್ತಿದೆ ಎಂದು ಕಿಡಿಕಾರಿದರು.
ಪರಿಶೀಲನೆ ನಡೆಸಿದೇ ಮೆಗ್ಗಾನ್ ಆಸ್ಪತ್ರೆ ಆಡಳಿತಾಧಿಕಾರಿಗಳು ಮತ್ತು ನಿರ್ಮಿತಿ ಕೇಂದ್ರದ ಅಭಿಯಂತರರು 80 ವರ್ಷದ ಹಳೆಯ ಕಂಪೌಂಡ್ ದುರಸ್ತಿಗೆ ಅವೈಜ್ಞಾನಿಕವಾಗಿ ಒಪ್ಪಿಗೆ ನೀಡಿದ್ದಾರೆ. ಗುತ್ತಿಗೆದಾರರು ತರಾತುರಿಯಲ್ಲಿ ಕಂಪೌಂಡ್ ಏರಿಸುತ್ತಿದ್ದಾರೆ. ಇದರಿಂದ ಭವಿಷ್ಯದಲ್ಲಿ ರೋಗಿಗಳು ಮತ್ತು ಅವರ ಸಂಬಂಧಿಕರು, ಸಾರ್ವಜನಿಕರು, ವ್ಯಾಪಾರಸ್ಥರ ಮೇಲೆ ಬಿದ್ದು ಜೀವಗಳು ಬಲಿಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಸ್.ಶ್ರೀಧರ್ ಅವರನ್ನು ಸ್ಥಳಕ್ಕೆ ಕರೆಯಿಸಿ ಶಿಥಿಲಗೊಂಡಿರುವ ಕಂಪೌಂಡ್ ಬೀಳಿಸಿ ಹೊಸದಾಗಿ ನಿರ್ಮಿಸುವಂತೆ ಸೂಚಿಸಲಾಯಿತು. ಪ್ರತಿಭಟನೆ ಬಳಿಕ ಎಚ್ಚೆತ್ತ ಗುತ್ತಿಗೆದಾರರು ಶಿಥಿಲಗೊಂಡ ಕಂಪೌಂಡ್ ಪೂರ್ಣ ನೆಲಸಮಗೊಳಿಸಿ ಹೊಸದಾಗಿ ನಿರ್ಮಾಣ ಕಾಮಗಾರಿ ಮುಂದುವರಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ, ಮಾಜಿ ಎಂಎಲ್ಸಿ ಆರ್.ಪ್ರಸನ್ನಕುಮಾರ್, ಮುಖಂಡರಾದ ನಾರಾಯಣಸ್ವಾಮಿ, ಕವಿತಾ ರಾಘವೇಂದ್ರ, ಕೆ.ರಂಗನಾಥ್, ಸ್ಟೆಲಾ ಮಾರ್ಟಿನ್, ಗಿರೀಶ್, ಮಧುಸೂದನ್, ಬಾಲಾಜಿ, ನವೀನ್, ಅರ್ಚನಾ, ಶೋಭಾ, ಗ್ಲಾಡಿ ಡಿ, ಕವಿತಾ, ಕಿರಣ್ ಮತ್ತಿತರರಿದ್ದರು.