ಕಂಪ್ಲಿ: 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಸೌಲಭ್ಯವಿದ್ದು, ಇದರ ಲಾಭ ಪಡೆಯಬೇಕು ಎಂದು ಹಕ್ಕಿಪಿಕ್ಕಿ ಕಾಲನಿಯ ನಿವಾಸಿಗಳಿಗೆ ಕೆಸಿಆರ್ಒ ಸದಸ್ಯ ಎಚ್.ಸಿ.ರಾಘವೇಂದ್ರ ಸಲಹೆ ನೀಡಿದರು.
ಇಲ್ಲಿನ ಹಕ್ಕಿಪಿಕ್ಕಿ ಕಾಲನಿಯ ಶ್ರೀ ತುಳಜಾಭವಾನಿ ದೇವಸ್ಥಾನ ಬಳಿ ಮಂಗಳವಾರ ಸಂಜೆ ಬಳ್ಳಾರಿಯ ಚಿಗುರು ಕಲಾತಂಡದಿಂದ ಬಾಲಕಾರ್ಮಿಕ ಪದ್ಧತಿ, ಕಿಶೋರ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ 1986ರ ಕುರಿತು ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ಮಗುವನ್ನು ಶಾಲೆಗೆ ದಾಖಲಿಸಬೇಕು. ಎಲ್ಲ ಮಕ್ಕಳಿಗೂ ಶಿಕ್ಷಣದೊಂದಿಗೆ ಮಕ್ಕಳ ಹಕ್ಕುಗಳು ಲಭಿಸಬೇಕಿದೆ. ಮಕ್ಕಳ ಸಮಸ್ಯೆಗಳಿದ್ದರೆ 1098ಗೆ ಕರೆ ಮಾಡಿ ತಿಳಿಸಬೇಕು ಎಂದರು.
ಅಲೆಮಾರಿ, ಅರೆಅಲೆಮಾರಿ ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯ ಎಚ್.ಪಿ.ಶಿಕಾರಿ ರಾಮು ಮಾತನಾಡಿ, ಬೀದಿ ನಾಟಕ ಮೂಲಕ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಮಕ್ಕಳ ಹಕ್ಕುಗಳನ್ನು ರಕ್ಷಿಸುವಲ್ಲಿ ಜನಸಮುದಾಯವು ಕೈಜೋಡಿಸಬೇಕಿದೆ ಎಂದರು.
ಬೀದಿ ನಾಟಕ ಮೂಲಕ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಸೇರ್ಪಡೆ, ಕಿಶೋರ ಕಾರ್ಮಿಕ ನಿಷೇಧ ಕಾಯ್ದೆ, ಮಕ್ಕಳ ಹಕ್ಕುಗಳ ರಕ್ಷಣೆ, ಬಾಲ್ಯ ವಿವಾಹ ನಿಷೇಧ ಕುರಿತು ಜಾಗೃತಿ ಮೂಡಿಸಲಾಯಿತು. ಬೀದಿ ನಾಟಕ ಕಲಾತಂಡದ ಕಲಾವಿದರಾದ, ಎಸ್.ಎಂ.ಹುಲುಗಪ್ಪ, ಬಿ.ಆನಂದ್, ಎಚ್.ಜಿ.ಸುಂಕಪ್ಪ, ಹೇಮಂತರಾಜ್, ಧನಂಜಯ್, ಅಶ್ವಿನಿ ಇತರರು ಇದ್ದರು.