ಗುಳೇದಗುಡ್ಡ: ಪಟ್ಟಣದ ಡಿವಿಜನ್ ನಂ.5ರಲ್ಲಿನ ಬಸವೇಶ್ವರ ದೇವಸ್ಥಾನದಿಂದ ನಗರದ ಚೌಬಜಾರಿನ ಮುಖ್ಯರಸ್ತೆವರೆಗೆ ಕಾಂಕ್ರಿಟ್ ರಸ್ತೆ ನಿರ್ಮಿಸಲು ರಸ್ತೆ ಅಗೆದು, ಕಡಿಹಾಕಿ ಅರ್ಧಕ್ಕೆ ನಿಲ್ಲಿಸಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಕೂಡಲೇ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಪುರಸಭೆ ಸದಸ್ಯ ಉಮೇಶ ಹುನಗುಂದ ಅವರೊಂದಿಗೆ ನಿವಾಸಿಗಳು ಪುರಸಭೆಗೆ ಗುರವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಮಕ್ಕಳು ಅಂಗನವಾಡಿ, ಶಾಲೆಗೆ ಹೋಗಬೇಕಾದರೆ ಬಿದ್ದು ಕೈಕಾಲುಗಳಿಗೆ ಗಾಯಗೊಂಡಿದೆ. ಹಿರಿಯ ನಾಗರಿಕರೂ ಬಿದ್ದು ಗಾಯಗೊಂಡ ಘಟನೆಗಳು ನಡೆದಿವೆ. ಹೀಗೆ ರಸ್ತೆ ಅಗೆದು ಒಂದೂವರೆ ತಿಂಗಳಾದರೂ ರಸ್ತೆ ಪೂರ್ಣಗೊಳಿಸಿಲ್ಲ. ಕೂಡಲೇ ರಸ್ತೆ ನಿರ್ಮಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಭಿಯಂತರ ಎ.ಪಿ.ಬೆಳಕೋಡ ಹಾಗೂ ಪುರಸಭೆ ಕಿರಿಯ ಅಭಿಯಂತರ ವಿ.ಎಸ್. ಚವಡಿ, ಮುಖ್ಯಾಧಿಕಾರಿ ಕ್ರುದ್ದೀನ ಹುಲ್ಲಿಕೇರಿ ಪ್ರತಿಭಟನಾಕಾರರ ಮನವೊಲಿಸಿ ರಸ್ತೆ ಕಾಮಗಾರಿ ಸ್ಥಳಕ್ಕೆ ಹೋಗಿ ಕಾಮಗಾರಿ ವೀಕ್ಷಿಸಿದರು. ನಾಳೆಯಿಂದಲೇ ಕಾಮಗಾರಿ ಮರು ಆರಂಭಗೊಳ್ಳುವುದು, ಆದಷ್ಟು ಬೇಗ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸುವುದಾಗಿ ತಿಳಿಸಿದರು.
ಒಳಚರಂಡಿ ಚೇಂಬರ್ ಮೇಲಕ್ಕೆತ್ತರಿಸಿ ಕಾಮಗಾರಿ ಮಾಡುವಂತೆ ಪ್ರತಿಭಟನಾಕರರು ಅಧಿಕಾರಿಗಳಿಗೆ ಆಗ್ರಹಿಸಿದರು. ಅಲ್ಲದೆ, ರಸ್ತೆ ಪಕ್ಕದಲ್ಲಿನ ಸಾರ್ವಜನಿಕ ಮೂತ್ರಾಲಯ ತುಂಬಿ ಹರಿಯುತ್ತಿದ್ದು, ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪುರಸಭೆ ಸದಸ್ಯ ಉಮೇಶ ಹುನಗುಂದ, ವಿಜಯ ಕವಿಶೆಟ್ಟಿ, ಸಂತೋಷ ತಿಪ್ಪಾ, ಮಲ್ಲು ಸುರಪುರ, ಶಿವಾನಂದ ಮಳಿಮಠ, ವಿರುಪಾಕ್ಷ ಮೆಂತೆದ, ಮಧುಸೂದನ ರಾಂದಡ, ಮುತ್ತು ಮೊರಬದ, ವಿಶ್ವನಾಥ ತಿಪ್ಪಾ, ರಾಜು ಹರ್ತಿ, ರಾಜು ಮುರನಾಳ, ನಾರಾಯಣ ದೇವಗಿರಿಕರ, ಶ್ಯಾಮಸುಂದರ ಭಜಂತ್ರಿ ಮತ್ತಿತರರು ಇದ್ದರು.