ಪುಣೆ: ಪುಣೆ ನಗರದ ಖಡ್ಕಿ ಎನ್ನುವಲ್ಲಿ 27 ವರ್ಷದ ಹೋಟೆಲ್ ಮಾಲಿಕನೊಬ್ಬ ಗ್ರಾಹಕರನ್ನು ಆಕರ್ಷಿಸಲು ಆಹಾರ ಪದಾರ್ಥಗಳ ಜೊತೆಗೆ ಉಚಿತವಾಗಿ ಸೂಪ್ ನೀಡುತ್ತಿದ್ದ. ಇಷ್ಟಕ್ಕೇ ಸಿಟ್ಟಿಗೆದ್ದ ಅಕ್ಕಪಕ್ಕದಲ್ಲಿ ವ್ಯಾಪಾರ ಮಾಡುವ ಸ್ಪರ್ಧಿಗಳು ಆತನ ತಲೆಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ.
ಸೋಮವಾರ ಸಂಜೆ ಖಡ್ಕಿಯ ಚೌಪಾಟಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ಮಂಗಳವಾರ ಖಡ್ಕಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ದಾಲಿಗೆ ಒಳಗಾದವರನ್ನು ರಾಮಕೃಪಾಲ್ ಪಾಲ್ ಎಂದು ಗುರುತಿಸಿದ್ದಾರೆ.
ಖಡ್ಕಿ ಚೌಪಾಟಿಯಲ್ಲಿ ಉಪಾಹಾರ ಗೃಹವನ್ನು ಹೊಂದಿರುವ ಪಾಲ್ ಇತ್ತೀಚೆಗೆ ಗ್ರಾಹಕರನ್ನು ಸೆಳೆಯಲು ಆಹಾರ ಪದಾರ್ಥಗಳ ಜೊತೆಗೆ ಉಚಿತ ಸೂಪ್ ನೀಡಲು ಪ್ರಾರಂಭಿಸಿದ್ದರು. ಅವರ ಇಬ್ಬರು ಪ್ರತಿಸ್ಪರ್ಧಿಗಳಾದ ಸಿದ್ಧಾರ್ಥ್ ಭಲೇರಾವ್ ಮತ್ತು ದಿಗ್ವಿಜಯ್ ಗಜರೆ, ರಾಮಕೃಪಾಲ್ರ ಈ ನಡೆ ತಮ್ಮ ವ್ಯವಹಾರದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆಕ್ಷೇಪಿಸಿದ್ದರು. ಇಬ್ಬರು ಆರೋಪಿಗಳು ಈ ಆಫರ್ ನಿಲ್ಲಿಸುವಂತೆ ಪಾಲ್ಗೆ ಕೇಳುತ್ತಿದ್ದರು. ಆದರೆ ಇದನ್ನು ರಾಮಕೃಪಾಲ್ ಅದನ್ನು ಮುಂದುವರೆಸಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಸಿದ್ಧಾರ್ಥ್ ಹಾಗೂ ದಿಗ್ವಿಜಯ್ ಗಜರೆ ಪಾಲ್ ಜೊತೆ ಜಗಳವಾಡಿದ್ದಾರೆ. ನಂತರ ಅವರಿಬ್ಬರು ಸೇರಿ ಆತನಿಗೆ ಥಳಿಸಿದ್ದಾರೆ. ನಂತರ ಹರಿತವಾದ ಚಾಕುವಿನಿಂದ ಆತನ ತಲೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪಾಲ್ ಅವರಿಗೆ ಆಳವಾದ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೀಗ ಪೊಲೀಸರು ಇಬ್ಬರು ಶಂಕಿತರಿಗಾಗಿ ಹುಡುಕಾಟವನ್ನು ಪ್ರಾರಂಭಿಸಿದ್ದು ಈ ಬಗ್ಗೆ ಖಡ್ಕಿ ಪೊಲೀಸ್ ಠಾಣೆಯ ಪ್ರಭಾರಿ ಹಿರಿಯ ಇನ್ಸ್ಪೆಕ್ಟರ್ ವಿಷ್ಣು ಗುರುವಾರ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)