ಬೆಂಗಳೂರು: ಇತ್ತಿಚಿನದಿನಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕೆಲವು ಕಂಪನಿಗಳು ಉದ್ಯೋಗಿಗಳನ್ನು ತೆಗೆದು ಹಾಕುತ್ತಿದೆ. ಕೆಲವೊಮ್ಮ ಸಂಸ್ಥೆ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದಾಗ ಕೆಲವರು ಬೇರೆ ಉದ್ಯೋಗ ಅರಸಲು ಶುರು ಮಾಡಿದರೆ ಮತ್ತೆ ಕೆಲವರು ಕೆಲಸದಿಂದ ತೆಗೆದು ಹಾಕಿದ ಕಂಪನಿಗೆ ಬುದ್ದಿ ಕಲಿಸಲು ಸೇಡಿನ ದಾರಿ ಹಿಡಿಯುತ್ತಾರೆ. ಅದೇ ರೀತಿ ಕೆಲಸದಿಂದ ತೆಗೆದಿದ್ದಕ್ಕೆ ಕೋಪಗೊಂಡ ಯುವತಿ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಟಿ.ಸಿ.ಎಸ್ ಕಂಪನಿಗೆ ಹುಸಿ ಬಾಂಬ್ ಕರೆ ಮಾಡಿದ್ದಾಳೆ.
ನಡೆದಿದ್ದೇನು?: ಕಂಪನಿಗೆ ಹುಸಿ ಬಾಂಬ್ ಕರೆ ಬರುತ್ತಿದ್ದಂತೆ ಉದ್ಯೋಗಿಗಳು ಕಂಪನಿಯಿಂದ ಹೊರಬಂದಿದ್ದು, ಕೂಡಲೇ ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳ ಸ್ಥಳಕ್ಕೆ ಆಗಮಿಸಿ ಮೂಲೆ-ಮೂಲೆ ಜಾಲಾಡಿದ ನಂತರ ಇದೊಂದು ಹುಸಿ ಬಾಂಬ್ ಕರೆ ಎಂದು ಖಚಿತವಾಗಿದೆ.
ಬೆಳಗಾವಿ ಮೂಲದ ಯುವತಿ ಟಿ.ಸಿ.ಎಸ್ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದು, ಇತ್ತೀಚಿಗೆ ಕೆಲಸದಿಂದ ತೆಗೆಯಲಾಗಿತ್ತು. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗೆ ಯುವತಿ ಕ್ಯಾಬ್ ಚಾಲಕನನ್ನು ಪರಿಚಯ ಮಾಡಿಕೊಂಡಿದ್ದಳು. ಪರಿಚಿತ ಕ್ಯಾಬ್ ಚಾಲಕನಿಗೆ ಕುಡಿದ ಮತ್ತಿನಲ್ಲಿ ಯುವತಿ ಕರೆ ಮಾಡಿ ಕಂಪನಿಯ ಬಿ ಬ್ಲಾಕ್ನಲ್ಲಿ ಬಾಂಬ್ ಇದೆ ಎಂದಿದ್ದಾಳೆ. ಇದರಿಂದ ಗಾಭರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿದಾಗ ಇದೊಂದು ಹುಸಿ ಬಾಂಬ್ ಕರೆ ಎಂದು ತಿಳಿದುಬಂದಿದೆ.
ಪೊಲೀಸರ ತಪಾಸಣೆ ವೇಳೆ ಯುವತಿ ಕರೆ ಮಾಡಿರುವುದು ಕನ್ಫರ್ಮ್ ಆಗಿದ್ದು, ಯುವತಿಯನ್ನ ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ.