ಹೊಸಪೇಟೆ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಎಸ್ಯುಸಿಐ (ಸಿ) ವಿಜಯನಗರ ಘಟಕ ಗುರುವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಸಂಘಟನೆ ಮುಖಂಡ ಡಾ.ಪ್ರಮೋದ್ ಮಾತನಾಡಿ, ರಾಜ್ಯ, ಕೇಂದ್ರ ಸರ್ಕಾರ ಬೆಲೆ ನಿಯಂತ್ರಿಸುವಲ್ಲಿ ವಿಫಲವಾಗಿವೆ. ಬಂಡವಾಳಶಾಹಿ ಪರ ನಿಯಮಗಳನ್ನು ಜಾರಿಗೊಳಿಸಿ ಜನಸಾಮಾನ್ಯರು ಬೀದಿಗೆ ಬೀಳುವಂತೆ ಮಾಡಿವೆ. ಅಡುಗೆ ಅನಿಲ ದರ ಏರಿಸಿ ಮಧ್ಯಮ ವರ್ಗಕ್ಕೆ ಆರ್ಥಿಕ ಹೊರೆ ಹೇರಿವೆ. ಕೂಲಿ ಮೊತ್ತ ಏರದಿದ್ದರೂ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿವೆ. ಇದರಿಂದ ಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ದೂರಿದರು.
ಮುಖಂಡ ಪಂಪಾಪತಿ ಮಾತನಾಡಿ, ಗಣಿಬಾಧಿತ ಪ್ರದೇಶಗಳಿಗೆ ಡಿಎಂಎಫ್, ಆರ್ ಆ್ಯಂಡ್ ಆರ್ ಫಂಡ್ ಹೆಸರಲ್ಲಿ ಸಾಕಷ್ಟು ಹಣವಿದ್ದರೂ, ಜನರ ಸೌಲಭ್ಯಗಳನ್ನು ಉತ್ತಮಪಡಿಸುವ ಹಾಗೂ ಅವರಿಗೆ ಬದುಕು ಕಟ್ಟಿಕೊಡುವ ಮತ್ತು ಕೃಷಿ ಪುನಶ್ಚೇತನ ಕಾರ್ಯಕ್ಕೆ ಬಳಕೆಯಾಗುತ್ತಿಲ್ಲ ಎಂದ ದೂರಿದರು. ಬೆಲೆ ಏರಿಕೆ ತಡೆ, ಎಲ್ಪಿಜಿ ಸಬ್ಸಿಡಿ ರದ್ದತಿ ಹಿಂಪಡೆಯುವುದು, ತೈಲದ ಮೇಲಿನ ಸೆಸ್ ಕಡಿತ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಾ.19ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಹೋರಾಟ ಸಂಘಟಿಸಲಾಗಿದೆ ಎಂದು ತಿಳಿಸಿದರು. ಬಳಿಕ ಶಿರಸ್ತೇದಾರ್ ರಮೇಶ್ಗೆ ಮನವಿ ಸಲ್ಲಿಸಿದರು. ಎಸ್ಯುಸಿಐ (ಸಿ) ಸದಸ್ಯರಾದ ಅಂಜಿನಿ, ಶಿವಮ್ಮ, ಶಾಂತಮ್ಮ, ಗಿರಿಜಮ್ಮ, ನಾಗರತ್ನಮ್ಮ ಇತರರಿದ್ದರು.