ರಬಕವಿ-ಬನಹಟ್ಟಿ: ಮಹಿಳಾ ಸಬಲೀಕರಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೊಡುಗೆ ಅಪಾರವಾಗಿದೆ. ಕೇವಲ ಉಚಿತ ಯೋಜನೆಗಳ ಸಲುವಾಗಿ ದೇಶಕ್ಕೆ ಹಾನಿಯಾಗುವವರನ್ನು ಆಡಳಿತಕ್ಕೆ ತರಬೇಡಿ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ರಾಜ್ಯ, ರಾಷ್ಟ್ರ ನಿಭಾಯಿಸುವಷ್ಟು ಶಕ್ತಿ ಹೊಂದಿರುವ ಮಹಿಳೆ ಸ್ವಾತಂತ್ರೃ ಸಂಗ್ರಾಮದಲ್ಲೂ ತಮ್ಮದೇ ಆದ ಕೊಡುಗೆ ನೀಡಿರುವುದು ಗಮನೀಯ ಎಂದರು.
ಪ್ರತಿಯೊಂದು ವೃತ್ತಿಗೂ ನಿಗದಿತ ಸಮಯ ನಿಗದಿಯಾಗಿರುತ್ತದೆ. ಆದರೆ ಗೃಹಿಣಿಗೆ ಮಾತ್ರ ಸಮಯದ ಪರಿಮಿತಿಯೇ ಇರುವುದಿಲ್ಲ. ಬೆಳಗ್ಗೆ ಎದ್ದು ಬಾಗಿಲು ತೆರೆಯುವುದರಿಂದ ರಾತ್ರಿ ಮನೆ ಬಾಗಿಲು ಮುಚ್ಚುವವರೆಗೂ ಎಲ್ಲಾ ಜವಾಬ್ದಾರಿ ಆಕೆಯ ಮೇಲೆ ಇರುತ್ತದೆ. ಹೀಗಾಗಿ ಗೃಹಿಣಿಯ ಸಂಬಳ ಎಷ್ಟು ಎಂದು ಅಳೆಯಲು ಸಾಧ್ಯವಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಪುರುಷನಷ್ಟೇ ಸಮಾನವಾಗಿರುವ ಮಹಿಳೆಯರು, ಸ್ವಾಭಿಮಾನಿ ಬದುಕು ಸಾಗಿಸುತ್ತಿರುವುದು ವಿಶೇಷ ಎಂದರು.
ನಗರಸಭೆ ಮಾಜಿ ಅಧ್ಯಕ್ಷೆ ಅನುರಾಧಾ ಹೊರಟ್ಟಿ ಮಾತನಾಡಿ, ಸಾಮಾಜಿಕ ಹಿತದೃಷ್ಟಿಯಿಂದ, ದೇಶದ ಸದೃಢತೆ ಭಾವನೆಯಿಂದ ಈ ಬಾರಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕಿದೆ. ಇಚ್ಛಾಶಕ್ತಿಯಿಂದ ಸಾಧನೆ ಬೆನ್ನಟ್ಟಿದಾಗ ಮಾತ್ರ ಕಷ್ಟ ಎದುರಿಸಿ ಮುನ್ನುಗ್ಗಿ ಯಶಸ್ಸು ಪಡೆಯಬಹುದು ಎಂದರು.
ನಂದಾತಾಯಿ ಸಾನ್ನಿಧ್ಯ ವಹಿಸಿದ್ದರು. ಡಾ. ಅನಂತಮತಿ ಎಂಡೋಳಿ, ವಿದ್ಯಾ ಸವದಿ, ಮೀನಾಕ್ಷಿ ಸವದಿ, ಸುವರ್ಣಾ ಕೊಪ್ಪದ, ಸುವರ್ಣಾ ಆಸಂಗಿ, ಸ್ನೇಹಲ್ ಅಂಗಡಿ, ಸಾವಿತ್ರಿ ಪಾಟೀಲ, ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಟ, ಶ್ರೀಶೈಲ ಬೀಳಗಿ, ಪವಿತ್ರಾ ತುಕ್ಕಣ್ಣ ಇತರರಿದ್ದರು. ವೈಷ್ಣವಿ ಬಾಗೇವಾಡಿ, ವಿದ್ಯಾ ದಭಾಡಿ, ಗೌರಿ ಮಿಳ್ಳಿ, ರತ್ನಾ ಕೊಳಕಿ, ಜಯಶ್ರೀ ಬಾಗೇವಾಡಿ, ದುರ್ಗವ್ವ ಹರಿಜನ, ರೇಖಾ ಕೊರತೆ ಇತರರಿದ್ದರು.