More

    ಸೇನಾನಿಗಳ ಸೇವೆ ಶ್ಲಾಘನೀಯ – ಶಾಸಕ ಮಹಾದೇವಪ್ಪ ಯಾದವಾಡ

    ರಾಮದುರ್ಗ: ಮಾನವ ಕುಲಕ್ಕೆ ಕಂಟಕವಾಗಿ ಪರಿಣಮಿಸಿದ ಕರೊನಾ ಸೋಂಕಿನಿಂದ ವಿಶ್ವ ತಲ್ಲಣಗೊಂಡಿದೆ. ಅತಹ ಮಹಾಮಾರಿ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಕರೊನಾ ಸೇನಾನಿಗಳಿಗೆ ಸನ್ಮಾನಿಸಿ ಅವರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಸಂತಸ ತಂದಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದ್ದಾರೆ.


    ಪಟ್ಟಣದ ಪುರಸಭೆ ಆವರಣದಲ್ಲಿ ಸೋಮವಾರ ಕರೊನಾ ಸೇನಾನಿಗಳನ್ನು ಸನ್ಮಾನ ಮಾಡುವ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡು ಮಾತನಾಡಿದರು. ಪಟ್ಟಣದ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ. ಅದನ್ನರಿತು ಪೌರ ಕಾರ್ಮಿಕರಿಗೆ ಸತ್ಕಾರ ಮಾಡಿ ಅವರ ಸೇವೆಯನ್ನು ಪ್ರೋತ್ಸಾಹಿಸುವ ಸಲುವಾಗಿ ನನ್ನ ಹುಟ್ಟು ಹಬ್ಬದ ಪ್ರಯುಕ್ತ ಪಟ್ಟಣದ ಎಲ್ಲ ಪೌರ ಕಾರ್ಮಿಕರನ್ನು ಗೌರವಿಸುತ್ತಿದ್ದೇವೆ. ಸೇನಾನಿಗಳ ಪರಿಶ್ರಮದಿಂದ ನನ್ನ ಕ್ಷೇತ್ರದಲ್ಲಿ ಸೋಂಕಿತರ ಪ್ರಮಾಣ ನಿಯಂತ್ರಣದಲ್ಲಿದೆ ಎಂದರು.


    ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದು, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಕರೊನಾ ಸೋಂಕು ನಿಯಂತ್ರಣಕ್ಕೆ ಉತ್ತಮ ಮಾರ್ಗವಾಗಿದೆ. ಪ್ರತಿಯೊಬ್ಬರೂ ಈ ಸಂರಕ್ಷಣಾ ಉಪಾಯ ತಪ್ಪದೆ ಪಾಲಿಸಬೇಕು ಎಂದು ಸಲಹೆ ನೀಡಿದರು. ಪಟ್ಟಣದ ವಿವಿಧ ಇಲಾಖೆಯ ಅಧಿಕಾರಿಗಳು, ವಿಧಾನಸಭಾ ಉಪಸಭ್ಯಾಧ್ಯಕ್ಷ ಆನಂದ ಮಾಮನಿ, ಬಿಜೆಪಿ ತಾಲೂಕು ಘಟಕ, ಶಾಸಕ ಮಹಾದೇವಪ್ಪ ಯಾದವಾಡ ಅಭಿಮಾನಿ ಬಳಗದಿಂದ ಶಾಸಕರನ್ನು ಸನ್ಮಾನಿಸಿ, ಸತ್ಕರಿಸಲಾಯಿತು.


    ಶಾಸಕರಿಂದ ಸನ್ಮಾನ: ನಂತರ ತಮ್ಮ ಕಾರ್ಯಾಲಯದಲ್ಲಿ ಪತ್ರಕರ್ತರು, ಪಟ್ಟಣದ ತಾಪಂ ಸಭಾ ಭವನದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ತಾಲೂಕು ಆಸ್ಪತ್ರೆಯ ವೈದ್ಯರು, ನರ್ಸ್‌ಗಳು, ಕಂದಾಯ ಇಲಾಖೆ ಸಿಬ್ಬಂದಿ, ತಹಸೀಲ್ದಾರ್ ಸೇರಿ ಕರೊನಾ ಸೋಂಕು ತಡೆಗೆ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ವಿವಿಧ ಇಲಾಖೆಯ ಅಧಿಕಾರಿಗಳನ್ನು ಶಾಸಕರು ಹಾಗೂ ಅವರ ಅಭಿಮಾನಿ ಬಳಗದ ವತಿಯಿಂದ ಸತ್ಕರಿಸಲಾಯಿತು.


    ಬಳಿಕ ರಾಮದುರ್ಗ ಪುರಸಭೆ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಜನ್ಮದಿನ ಆಚರಣೆ ಸಮಾರಂಭದಲ್ಲಿ ಯುವ ಧುರೀಣ ಮಲ್ಲಣ್ಣ ಯಾದವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ವತಿಯಿಂದ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಸತ್ಕರಿಸಲಾಯಿತು ಜಿಲ್ಲಾ ಪಂಚಾಯಿತಿ ಸದಸ್ಯ ಮಾರುತಿ ತುಪ್ಪದ, ಪುರಸಭೆ ಮುಖ್ಯಾಧಿಕಾರಿ ಮಠದ, ಬಿಜೆಪಿ ಮಂಡಲಾಧ್ಯಕ್ಷ ರಾಜೇಶ ಬೀಳಗಿ,ಬಿ.ಎಫ್.ಬಸಿಡೋಣಿ, ಜಿ.ಜಿ.ಪಾಟೀಲ, ಬಿ.ಎಂ.ತುಪ್ಪದ, ಎಂ.ಎಂ.ಅತ್ತಾರ, ಆರ್.ನಾಗರಾಜ, ಪುರಸಭೆ ಸದಸ್ಯರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಇದ್ದರು.

    ಮಹಾಮಾರಿ ಕರೊನಾ ಸಂಕಷ್ಟದ ನಡುವೆಯೂ ತಮ್ಮ ಜೀವದ ಹಂಗು ತೊರೆದು ಶ್ರಮಿಸುತ್ತಿರುವ ಕರೊನಾ ಸೇನಾನಿಗಳ ಕಾರ್ಯ ಮೆಚ್ಚುವಂತದ್ದು. ಅವರಿಗೆ ಸರ್ಕಾರ ಹಾಗೂ ವೈಯಕ್ತಿಕವಾಗಿ ನೆರವು ನೀಡಲಾಗುವುದು. ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಮಾದರಿ ಕ್ಷೇತ್ರ ನಿರ್ಮಾಣಕ್ಕೆ ಶ್ರಮಿಸಲಾಗುವುದು.
    | ಮಹಾದೇವಪ್ಪ ಯಾದವಾಡ ಶಾಸಕರು ರಾಮದುರ್ಗ ಮತಕ್ಷೇತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts