More

    24 ಗಂಟೆಗಳಲ್ಲಿ ಪರಿಹಾರ ಹುಡುಕಿ: ಸರ್ಕಾರಕ್ಕೆ ಗಡುವು ನೀಡಿದ ಸುಪ್ರೀಂ

    ನವದೆಹಲಿ: ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶ(ಎನ್​ಸಿಆರ್)ದಲ್ಲಿನ ವಾಯು ಮಾಲಿನ್ಯವನ್ನು ನಿಯಂತ್ರಣಕ್ಕೆ ತರಲು 24 ಗಂಟೆಗಳೊಳಗೆ ಪರಿಹಾರೋಪಾಯ ಕಂಡುಹಿಡಿಯಿರಿ ಎಂದು ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್​ ಗಡುವು ನೀಡಿದೆ. ಇಂದು ದೆಹಲಿ ವಾಯು ಗುಣಮಟ್ಟದ ಬಗೆಗಿನ ಅರ್ಜಿಯ ವಿಚಾರಣೆ ನಡೆಸುತ್ತಾ, ಈ ವಿಚಾರವಾಗಿ ಸರ್ಕಾರಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ನ್ಯಾಯಾಲಯ ಅತೃಪ್ತಿ ಹೊರಹಾಕಿದೆ.

    ಕೇಂದ್ರ ಮತ್ತು ದೆಹಲಿ ಸರ್ಕಾರಗಳು 24 ಗಂಟೆಗಳೊಳಗೆ ಪರಿಹಾರ ಸೂಚಿಸದಿದ್ದಲ್ಲಿ, ಕೋರ್ಟ್​ ಈ ಬಗ್ಗೆ ಆದೇಶ ಹೊರಡಿಸಬೇಕಾಗುತ್ತದೆ ಎಂದ ನ್ಯಾಯಪೀಠ, “ನೀವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಅಂದರೆ ನಾವು ಅದನ್ನು ನಿಜ ಎಂದುಕೊಳ್ಳುತ್ತೇವೆ. ದೆಹಲಿಯ ಶಾಲೆಗಳನ್ನು (ಮಾಲಿನ್ಯದ ದೃಷ್ಟಿಯಿಂದ) ಮುಚ್ಚಲಾಗಿದೆ ಎಂದಿದ್ದಿರಿ. ಆದರೆ, ಚಿಕ್ಕ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ” ಎಂದು ಸಿಜೆಐ ಹೇಳಿದರು. ಮಾಲಿನ್ಯದಿಂದಾಗಿ ದೆಹಲಿಯ ವಾಯು ಪರಿಸರ ತೀವ್ರ ಸ್ಥಿತಿ ತಲುಪಿದ್ದು, ಈ ಹಿನ್ನೆಲೆಯಲ್ಲಿ 15 ದಿನಗಳು ಶಾಲೆಗಳನ್ನು ಬಂದ್ ಮಾಡಲಾಗಿತ್ತು. ನವೆಂಬರ್ 29 ರಿಂದ ತರಗತಿಗಳು ಪುನರಾರಂಭಗೊಂಡಿವೆ ಎನ್ನಲಾಗಿದೆ. ವಿಚಾರಣೆಯ ನಡುವೆ, “ಪ್ರಚಾರ ಮಾಡುವುದು ಬಿಟ್ಟರೆ, ಬೇರೇನು ಮಾಡಿದ್ದೀರಿ” ಎಂದೂ ನ್ಯಾಯಮೂರ್ತಿಗಳು ಉಭಯ ಸರ್ಕಾರಗಳನ್ನೂ ಕೇಳಿದರು.

    ಇದನ್ನೂ ಓದಿ: ಯಾರಾಗಲಿದ್ದಾರೆ ಆರ್​ಸಿಬಿ ಕ್ಯಾಪ್ಟನ್​? ಇಲ್ಲಿದೆ ನೋಡಿ ಅಭಿಮಾನಿಗಳು ಹಾಗೂ ವಿಶ್ಲೇಷಕರ ಲೆಕ್ಕಾಚಾರ!
    ಅರ್ಜಿದಾರರ ವಕೀಲ ವಿಕಾಸ್​ ಸಿಂಗ್​, ವಾಯು ಗುಣಮಟ್ಟವನ್ನು ನಿರ್ವಹಿಸಲಾಗುತ್ತಿದೆಯೇ ಎಂದು ಇನ್​​ಸ್ಪೆಕ್ಟ್​ ಮಾಡಲು ಟ್ಯಾಸ್ಕ್​ ಫೋರ್ಸ್ ರಚಿಸಬೇಕು. ಸೆಂಟ್ರಲ್​ ವಿಸ್ತಾ ಸೇರಿದಂತೆ ಎಲ್ಲಾ ನಿರ್ಮಾಣ ಕಾಮಗಾರಿಯ ಸ್ಥಳಿಗೆ ಭೇಟಿ ನೀಡಿ ಪರೀಕ್ಷೆ ನಡೆಯಬೇಕು. ತಕ್ಷಣವೇ ಮಾಲಿನ್ಯ ನಿರ್ಬಂಧಗಳನ್ನು ಪಾಲಿಸದ ಕಾರ್ಖಾನೆಗಳು ಮತ್ತು ನಿರ್ಮಾಣ ಸ್ಥಳಗಳನ್ನು ಮುಚ್ಚಿಸಬೇಕು ಎಂದು ಕೋರಿದರು.

    “ದೆಹಲಿಯ ಮಾಲಿನ್ಯದ ಮಟ್ಟ ಏರುತ್ತಲೇ ಇರುವುದರಿಂದ ಏನೂ ಪ್ರಯತ್ನ ನಡೆಯುತ್ತಿಲ್ಲ ಎಂದನಿಸುತ್ತದೆ. ನಾವು ನಮ್ಮ ಸಮಯ ವ್ಯರ್ಥ ಮಾಡುತ್ತಿದ್ದೇವೆ…. ನಿಮಗೆ(ಕೇಂದ್ರ ಮತ್ತು ದೆಹಲಿ ಸರ್ಕಾರಗಳು) 24 ಗಂಟೆಗಳನ್ನು ನೀಡುತ್ತೇವೆ. ಈ ಬಗ್ಗೆ ಗಂಭೀರ ದೃಷ್ಟಿ ಹರಿಸಿ, ಗಂಭೀರತೆಯಿಂದ ಒಂದು ಪರಿಹಾರ ರೂಪಿಸಿ” ಎಂದು ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್​ ಅವರನ್ನೊಳಗೊಂಡ ಪೀಠ ಹೇಳಿತು. (ಏಜೆನ್ಸೀಸ್)

    ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಥಳಿಸಿದ ಉಪನ್ಯಾಸಕ!

    ದೇಶಕ್ಕೆಲ್ಲಾ ಒಂದೇ ನೀತಿ! ಕೇಂದ್ರದ ಪ್ರಯಾಣ ನಿರ್ಬಂಧಗಳನ್ನು ತಕ್ಷಣ ಜಾರಿಗೊಳಿಸಲು ಮಹಾ ಸರ್ಕಾರಕ್ಕೆ ಸೂಚನೆ

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts