ದೇವದುರ್ಗ: ಮಣಿಪುರದಲ್ಲಿ ಬುಡಕಟ್ಟು ಸಮುದಾಯವನ್ನು ಟಾರ್ಗೇಟ್ ಮಾಡಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಪಟ್ಟಣದ ಮಿನಿವಿಧಾನಸೌಧ ಮುಂದೆ ಸಿಐಟಿಯು, ಕೆಪಿಅರ್ಎಸ್ ಹಾಗೂ ಕೂಲಿಕಾರರ ಸಂಘಟನೆಗಳು ಮಂಗಳವಾರ ಪ್ರತಿಭಟನೆ ನಡೆಸಿದವು.
ಮಣಿಪುರ ರಾಜ್ಯದಲ್ಲಿ ಜರುಗಿದ ಹಿಂಸಾಚಾರ ನಿಯಂತ್ರಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಮೂರೂ ತಿಂಗಳಿನಿಂದ ಹಿಂಸಾಚಾರ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಕಣ್ಮುಚಿ ಕುಳಿತಿದೆ. ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರನ್ನು ಇತ್ತೀಚೆಗೆ ನಗ್ನಗೊಳಿಸಿ ಮೆರವಣಿಗೆ ಮಾಡುವುದಲ್ಲದೆ ಅವರ ಮೇಲೆ ಅತ್ಯಾಚಾರ ಮಾಡಿರುವುದು ದೇಶವೇ ತಲೆ ತಗ್ಗಿಸುವಂಥ ಹೇಯಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮಣಿಪುರ ಮಹಿಳೆಯರಿಗೆ ರಕ್ಷಣೆ ನೀಡಿ
ಕೂಡಲೇ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಹಿಂಸಾಚಾರ ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಖಡಕ್ ಸೂಚನೆ ನೀಡಬೇಕು. ಹಿಂಸಾಚಾರ ಕೃತ್ಯ ನಡೆಸಿದ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನುಕ್ರಮ ಜರುಗಿಸಬೇಕು. ಕುಕಿ ಬುಡಕಟ್ಟು ಸಮುದಾಯಕ್ಕೆ ಸೂಕ್ತ ಭದ್ರತೆ ಒಗಿಸುವ ಜತೆಗೆ ಜನರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ತಾಲೂಕು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ, ಜನವಾದಿ ಮಹಿಳಾ ಸಂಘಟನೆ ತಾಲೂಕು ಅಧ್ಯಕ್ಷೆ ಶಕುಂತಲಾ ದೇಸಾಯಿ, ಪ್ರಾಂತರೈತ ಸಂಘದ ತಾಲೂಕು ಅಧ್ಯಕ್ಷ ನರಸಣ್ಣ ನಾಯಕ, ಮುಖಂಡರಾದ ಸಂಗಮೇಶ ಮೂಲಿಮನಿ, ರಮಾದೇವಿ, ಮರಿಯಮ್ಮ, ಲಕ್ಷ್ಮೀ, ಚಂದ್ರಕಲಾ, ಶ್ರೀಲೀಲಾ, ಫರ್ವಿನಾ, ಹನುಮಂತ ಗುರಿಕಾರ, ಮೌನೇಶ, ಶಬ್ಬೀರ್, ಲಿಂಗಣ್ಣ ಮಕಾಶಿ ಇತರರಿದ್ದರು.