More

    ಜ್ಞಾನ, ವಾತ್ಸಲ್ಯ, ವೈರಾಗ್ಯದ ಸಂಗಮ; ಇಂದು ದತ್ತ ಜಯಂತಿ

    | ವಿನೋದ್ ಕಾಮತ್ ಸನಾತನ ಸಂಸ್ಥೆ

    ಹಿಂದೊಮ್ಮೆ ಭೂತಲದ ಮೇಲೆ ಸ್ಥೂಲ ಮತ್ತು ಸೂಕ್ಷ್ಮ ರೂಪಗಳಲ್ಲಿ ಆಸುರಿ ಶಕ್ತಿಗಳ ಪ್ರಮಾಣ ಹೆಚ್ಚಾಗಿತ್ತು. ಅವುಗಳನ್ನು ದೈತ್ಯ ಎಂದು ಕರೆಯಲಾಗು ತ್ತಿತ್ತು. ದೇವತೆಗಳು ಆ ಆಸುರಿ ಶಕ್ತಿಗಳನ್ನು ನಾಶಗೊಳಿಸು ವುದಕ್ಕಾಗಿ ಮಾಡಿದ ಎಲ್ಲ ಪ್ರಯತ್ನಗಳೂ ವಿಫಲವಾದವು. ಆಗ ಬ್ರಹ್ಮದೇವನ ಆದೇಶಕ್ಕನುಸಾರ ದತ್ತ ದೇವರು ವಿವಿಧ ಕಡೆಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಅವತಾರ ತಳೆಯಬೇಕಾಗಿ ಬಂತು. ತದನಂತರ ದೈತ್ಯರ ನಾಶವಾಯಿತು. ಆ ದಿನವನ್ನೇ ದತ್ತಜಯಂತಿ ಎಂದು ಆಚರಿಸುತ್ತಾರೆ. ದತ್ತಜಯಂತಿಯನ್ನು ಆಚರಿಸುವ ಕುರಿತು ಶಾಸ್ತ್ರೋಕ್ತವಾದ ವಿಧಿಯು ಎಲ್ಲಿಯೂ ಕಾಣ ಸಿಗುವುದಿಲ್ಲ. ಸಾಮಾನ್ಯವಾಗಿ ಏಳು ದಿನಗಳ ಕಾಲ ಗುರುಚರಿತ್ರೆಯ ಪಾರಾಯಣವನ್ನು ಮಾಡುವ ಪದ್ಧತಿಯಿದೆ. ಇದನ್ನೇ ‘ಗುರುಚರಿತ್ರ ಸಪ್ತಾಹ’ ಎನ್ನುತ್ತಾರೆ. ಮಹಾರಾಷ್ಟ್ರದಲ್ಲಿ ಔದುಂಬರ, ನರಸೋಬಾವಾಡಿ ಹಾಗೂ ಕರ್ನಾಟಕದಲ್ಲಿ ದೇವಲ್ ಗಾಣಗಾಪುರ ಈ ದತ್ತಕ್ಷೇತ್ರಗಳಲ್ಲಿ ಈ ಉತ್ಸವಕ್ಕೆ ವಿಶೇಷ ಮಹತ್ವ ಇದೆ. ತಮಿಳುನಾಡಿನಲ್ಲಿಯೂ ದತ್ತ ಜಯಂತಿಯನ್ನು ಆಚರಿಸುವ ಪದ್ಧತಿಯಿದೆ. ದತ್ತಜಯಂತಿಯಂದು ಕೆಲವೆಡೆ ದತ್ತಯಾಗವನ್ನು ಮಾಡಲಾಗುತ್ತದೆ.

    ದತ್ತಜಯಂತಿಯ ದಿನದಂದು ಪೃಥ್ವಿಯ ಮೇಲೆ ಶ್ರೀದತ್ತತತ್ತ್ವವು ಇತರ ದಿನಗಳ ತುಲನೆಗಿಂತ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ದಿನದಂದು ದತ್ತನ ನಾಮಜಪಾದಿ ಉಪಾಸನೆ ಗಳನ್ನು ಮನಃಪೂರ್ವಕವಾಗಿ ಮಾಡಿದರೆ ದತ್ತತತ್ತ್ವದ ಹೆಚ್ಚು ಲಾಭ ಪಡೆಯಲು ಸಹಾಯ ವಾಗುತ್ತದೆ. ಆದ್ದರಿಂದ ಈ ದಿನದಂದು ‘ಶ್ರೀಗುರುದೇವ ದತ್ತ’ ಈ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.

    ಪ್ರತಿಯೊಂದು ದೇವೆತೆಗೂ ವಿಶಿಷ್ಟ ಕಾರ್ಯವಿರುತ್ತದೆ. ಹೇಗೆ ಗಣಪತಿ ಬುದ್ಧಿಯ ದೇವನೋ, ಸರಸ್ವತಿ ವಿದ್ಯೆಯ ದೇವಿಯೋ ಹಾಗೆಯೇ ಶ್ರೀ ದತ್ತಗುರುವು ಪೂರ್ವಜರಿಗೆ ಸದ್ಗತಿಯನ್ನು ಕೊಡುವ ದೇವನಾಗಿದ್ದಾನೆ. ಹಿಂದಿನ ಕಾಲದಲ್ಲಿ ಜನರು ಶ್ರಾದ್ಧಪಕ್ಷಗಳನ್ನು, ಆಧ್ಯಾತ್ಮಿಕ ಸಾಧನೆಯನ್ನು ಮಾಡುತ್ತಿದ್ದರು. ಆದರೆ ಪ್ರಸ್ತುತ ಹೆಚ್ಚಿನ ಜನರು ಶ್ರಾದ್ಧಪಕ್ಷಾದಿಗಳನ್ನಾಗಲಿ, ಸಾಧನೆಯನ್ನಾಗಲಿ ಮಾಡದಿರುವ ಕಾರಣ ಹೆಚ್ಚಿನ ಜನರಿಗೆ ಪೂರ್ವಜರ ಲಿಂಗದೇಹಗಳಿಂದ/ಸೂಕ್ಷ್ಮ ದೇಹಗಳಿಂದ ತೊಂದರೆಗಳಾಗುತ್ತವೆ. ದತ್ತ ದೇವರು ಪೂರ್ವಜರಿಗೆ ಸದ್ಗತಿಯನ್ನು ಕೊಟ್ಟು ಅವರ ಉದ್ಧಾರ ಮಾಡುತ್ತಾರೆ. ಆದ್ದರಿಂದ ದತ್ತಗುರುಗಳ ಉಪಾಸನೆಯಿಂದ ವ್ಯಕ್ತಿಗೆ ಆಗುತ್ತಿರುವ ಪೂರ್ವಜರ ತೊಂದರೆ ಕಡಿಮೆಯಾಗುತ್ತದೆ. ಅವರಿಗೆ ಸದ್ಗತಿ ಸಿಗುತ್ತದೆ.

    ದತ್ತಾತ್ರೇಯನಲ್ಲಿ ಜ್ಞಾನ, ವಾತ್ಸಲ್ಯ ಮತ್ತು ವೈರಾಗ್ಯ ಇವುಗಳ ಸೊಗಸಾದ ಸಂಗಮವಿರುವುದು: ಭಗವಾನ್ ದತ್ತಾತ್ರೇಯರೆಂದರೆ ‘ಬ್ರಹ್ಮ-ವಿಷ್ಣು-ಮಹೇಶ್ವರ’ ಈ ತ್ರಿಮೂರ್ತಿಗಳ ರೂಪ. ಬ್ರಹ್ಮದೇವರು ಜ್ಞಾನಸ್ವರೂಪ, ಶ್ರೀವಿಷ್ಣುವು ವಾತ್ಸಲ್ಯಸ್ವರೂಪ ಮತ್ತು ಶಿವನು ವೈರಾಗ್ಯಸ್ವರೂಪ. ಈ ತ್ರಿಮೂರ್ತಿಗಳು ಒಟ್ಟಿಗಿರುವ ರೂಪವಿರುವ ದತ್ತಾತ್ರೇಯನಲ್ಲಿ ಜ್ಞಾನ, ವಾತ್ಸಲ್ಯ ಮತ್ತು ವೈರಾಗ್ಯ ಇವುಗಳ ಉತ್ತಮ ಸಂಗಮವಿದೆ. ಭಗವಾನ್ ದತ್ತಾತ್ರೇಯರಲ್ಲಿ ವೈರಾಗ್ಯವಿರುವುದರಿಂದ ಅವರು ಸಂನ್ಯಾಸಿಯಂತೆ ಜೀವನ ಕಳೆಯುತ್ತಾರೆ. ಅವರ ನಿವಾಸಸ್ಥಾನವೆಂದರೆ ಮೇರುಶಿಖರ. ಸಂಧ್ಯಾ ಹಾಗೂ ಇತರ ದಿನಕ್ರಮಗಳನ್ನು ಅವರು ಬೇರೆ ಬೇರೆ ಕಡೆಗಳಲ್ಲಿ ಮಾಡುತ್ತಾರೆ. ಅವರಲ್ಲಿ ವೈರಾಗ್ಯ ವೃತ್ತಿಯು ಪ್ರಬಲವಾಗಿರುವುದರಿಂದ ಅವರಿಗೆ ಯಾವುದೇ ಸ್ಥಾನದ ಮೋಹಬಂಧನವಿಲ್ಲ. ಹೀಗಾಗಿ ಅವರು ಸ್ವೇಚ್ಛಾವಿಹಾರಿಯಾಗಿದ್ದಾರೆ. ಜೀವನ್ಮುಕ್ತರಾಗಿರುವುದರಿಂದ ಅವರು ಬ್ರಹ್ಮಾಂಡದಲ್ಲಿ ಎಲ್ಲಿ ಬೇಕಾದರೂ ಮುಕ್ತವಾಗಿ ಸಂಚರಿಸುತ್ತಾರೆ. ಮೋಹಮಾಯೆಗಳಿಂದ ಅಲಿಪ್ತರಾಗಿದ್ದಾರೆ; ಆದರೆ ಅವರು ಭಕ್ತರ ಪ್ರೇಮದ ಮಾಯೆಯ ಬಂಧನದಲ್ಲಿದ್ದಾರೆ. ಭಕ್ತರು ಸ್ಮರಣೆ ಮಾಡಿದ ಕೂಡಲೇ ಪ್ರಕಟವಾಗುತ್ತಾರೆ. ಆದ್ದರಿಂದ ಅವರನ್ನು ಸ್ಮರ್ತಗಾಮಿ ಎನ್ನಲಾಗಿದೆ.

    ಭಗವಾನ್ ದತ್ತಾತ್ರೇಯರು ಸದ್ಗುರುಪದವಿಯಲ್ಲಿ ವಿರಾಜಮಾನರಾಗಿದ್ದಾರೆ. ಆದರೂ ವೃತ್ತಿಯಿಂದ ಸತತವಾಗಿ ಶಿಷ್ಯಾವಸ್ಥೆಯಲ್ಲಿರುತ್ತಾರೆ. ಶಿಷ್ಯನೆಂದರೆ ಸತತವಾಗಿ ಕಲಿಯುತ್ತಲೇ ಇರುವವನು. ತಮ್ಮ ಶಿಷ್ಯಾವಸ್ಥೆ ಯಿಂದಾಗಿಯೇ ಅವರು 24 ಗುಣಗುರುಗಳನ್ನು ಸ್ವೀಕರಿಸಿದರು; ಎಂದರೆ ಚಲ-ಅಚಲ ವಸ್ತುಗಳ ಗುಣಧರ್ಮಗಳನ್ನು ಗುರುರೂಪವಾಗಿ ಕಂಡರು. ದತ್ತಗುರುಗಳು ಪೃಥ್ವಿಯನ್ನು ಗುರುವೆಂದು ಸ್ವೀಕರಿಸಿದರು ಮತ್ತು ಪೃಥ್ವಿಯಂತೆ ಸಹನ ಶೀಲರೂ ಸಹಿಷ್ಣುವೂ ಆಗಿರಬೇಕು ಎಂಬ ಬೋಧನೆ ಪಡೆದರು. ವಾಯುವಿನಿಂದ ವಿರಕ್ತಿಯ ಬೋಧನೆಯನ್ನೂ, ನೀರಿನಿಂದ ಸ್ನೇಹಭಾವದ ಬೋಧನೆಯನ್ನೂ, ಅಗ್ನಿಯಿಂದ ಪಾವಿತ್ರ್ಯದ ಬೋಧನೆಯನ್ನೂ, ಸಮುದ್ರದಿಂದ ಪರೋಪಕಾರದ ಬೋಧನೆಯನ್ನೂ ಪಡೆದುಕೊಂಡರು. ಕ್ಷಮಾಶೀಲತೆ, ಭಕ್ತವಾತ್ಸಲ್ಯ ಇವು ದತ್ತಗುರುಗಳ ವೈಶಿಷ್ಟ್ಯಗಳಾಗಿವೆ.

    ದತ್ತಾತ್ರೇಯ ಗುರುಸ್ವರೂಪದಲ್ಲಿ ಪೂಜಿಸಲ್ಪಡುವ ಏಕಮೇವ ದೇವರು . ಶ್ರೀಪಾದ ಶ್ರೀವಲ್ಲಭ, ಶ್ರೀನೃಸಿಂಹ ಸರಸ್ವತಿ, ಶ್ರೀಮಾಣಿಕಪ್ರಭು, ಶ್ರೀಸ್ವಾಮಿ ಸಮರ್ಥ, ಶ್ರೀಸಾಯಿಬಾಬಾ, ಶ್ರೀ ಭಾಲಚಂದ್ರ ಮಹಾರಾಜ್ ಇವರೆಲ್ಲರೂ ದತ್ತಾತ್ರೇಯರ ಪ್ರಮುಖ ಅವತಾರಗಳು. ದತ್ತನಿಂದ ದೇಹದಲ್ಲಿನ ಏಳೂ ಚಕ್ರಗಳ ಶುದ್ಧಿಯಾಗಿ ಆಧ್ಯಾತ್ಮಿಕ ಉನ್ನತಿಯ ಮಾರ್ಗವು ಪ್ರಶಸ್ತವಾಗುತ್ತದೆ. ಆದ್ದರಿಂದ ದತ್ತನಿಗೆ ಏಳು ಪ್ರದಕ್ಷಿಣೆಗಳನ್ನು ಹಾಕಬೇಕು. ಸಪ್ತಾಹದಲ್ಲಿನ 7 ವಾರಗಳ ಪೈಕಿ ಗುರುವಾರ ದತ್ತನಿಗೆ ಸಂಬಂಧಿಸಿದ ವಾರವಾಗಿದೆ. ದತ್ತತತ್ತ್ವದ ಬಣ್ಣವು ಹಳದಿ. ಸಕ್ಕರೆ ಸೇರಿಸಿದ ಹಾಲು ಮತ್ತು ರವೆ ಸಜ್ಜಿಗೆ ದತ್ತನಿಗೆ ಪ್ರಿಯವಾದುದು. ಅವಧೂತ ಚಿಂತನ ಶ್ರೀ ಗುರುದೇವ ದತ್ತ ಮತ್ತು ಅಲಖ್ ನಿರಂಜನ್ ಇವು ದತ್ತನಿಗೆ ಸಂಬಂಧಿಸಿದ ಪ್ರಸಿದ್ಧ ಜಯಘೊಷಗಳು. ಮಾಹೂರ್, ಗಿರನಾರ್, ಕಾರಂಜಾ, ಔದುಂಬರ್, ನರಸೋಬಾವಾಡಿ, ದೇವಲ್ ಗಾಣಗಾಪುರ, ಕುರವಪುರ, ಪೀಠಾಪುರ, ವಾರಾಣಸಿ, ಶ್ರೀಶೈಲ, ಭಟ್ಟಗಾವ್, ಪಾಂಚಾಳೇಶ್ವರ ಇವು ದತ್ತನ ಕೆಲವು ಪ್ರಮುಖ ಕ್ಷೇತ್ರಗಳು. ದತ್ತನ ಎಲ್ಲ ಕ್ಷೇತ್ರಗಳೂ ಅತ್ಯಂತ ಜಾಗೃತವಾಗಿವೆ. ಈ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿದಾಗ ಹಲವಾರು ಭಕ್ತರಿಗೆ ಶಕ್ತಿಯ ಅನುಭೂತಿ ಬರುತ್ತದೆ.

    ನಾವು ದತ್ತಾತ್ರೇಯರ ಚಿತ್ರವನ್ನು ನೋಡಿದರೆ, ಅದರಲ್ಲಿ ಹಿಂದೆ ಹಸು ಮತ್ತು ಔದುಂಬರ ವೃಕ್ಷವಿದೆ ಮತ್ತು ಮುಂದೆ ನಾಲ್ಕು ಶ್ವಾನಗಳಿವೆ. ದತ್ತನ ಹಿಂದೆ ಇರುವ ಔದುಂಬರ ವೃಕ್ಷವು ದತ್ತನ ಪೂಜನೀಯ ರೂಪವಾಗಿದೆ; ಏಕೆಂದರೆ ಅದರಲ್ಲಿ ದತ್ತತತ್ತ್ವವು ಹೆಚ್ಚು ಪ್ರಮಾಣದಲ್ಲಿರುತ್ತದೆ. ಹಸು ಎಂದರೆ ಪೃಥ್ವಿ ಮತ್ತು ನಾಲ್ಕು ನಾಯಿಗಳೆಂದರೆ ನಾಲ್ಕು ವೇದಗಳು. ಇದರ ಅರ್ಥ ದತ್ತಾತ್ರೇಯರು ಜ್ಞಾನಸಂಪನ್ನರಾಗಿದ್ದಾರೆ. ದತ್ತಾತ್ರೇಯ ಭುಜದ ಮೇಲೆ ಒಂದು ಜೋಳಿಗೆ ಇರುತ್ತದೆ. ಅದು ಜೇನುನೊಣದ ಪ್ರತೀಕ. ಜೇನುನೊಣ ಹೇಗೆ ಬೇರೆಬೇರೆ ಕಡೆಗಳಿಗೆ ಹೋಗಿ ಜೇನನ್ನು ಸಂಗ್ರಹಿಸುತ್ತದೋ ಹಾಗೆಯೇ ದತ್ತಗುರುಗಳು ಮನೆಮನೆಗೆ ಹೋಗಿ ಭಿಕ್ಷೆಯನ್ನು ಸಂಗ್ರಹಿಸುತ್ತಾರೆ. ಭಿಕ್ಷೆ ಬೇಡುವುದರಿಂದ ಅಹಂ ಬೇಗೆನೆ ಕಡಿಮೆಯಾಗುತ್ತದೆ. ಆದ್ದರಿಂದ ಜೋಳಿಗೆಯು ಅಹಂ ನಷ್ಟವಾಗಿರುವುದರ ಪ್ರತೀಕವಾಗಿದೆ. ಕಮಂಡಲು ಹಾಗೂ ದಂಡ ಇವು ಸಂನ್ಯಾಸಿ ವೃತ್ತಿಯ ಪ್ರತೀಕಗಳಾಗಿವೆ.

    ಮೋದಿ ಉದ್ಘಾಟಿಸಿದ ಈ ಸುರಂಗ ಮಾರ್ಗದಲ್ಲಿ ಭಾನುವಾರ ಏನಾಯ್ತು ಗೊತ್ತಾ?!

    ಈ ಧರ್ಮಗುರುವಿಗೆ 130 ಪತ್ನಿಯರು, 203 ಮಕ್ಕಳು: ಇವರ ಕುತೂಹಲದ ಸ್ಟೋರಿ ಇಲ್ಲಿದೆ…

    VIDEO| ನಿತ್ಯ ಪೂಜೆ ವೇಳೆಗೆ ಬರುತ್ತೆ ಈ ಹಾವು! ಗಣಪತಿಗೆ ಪ್ರದಕ್ಷಿಣೆ ಹಾಕಿ ವಾಪಸ್​ ಹೋಗುತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts