ರಾಯಚೂರು: ಕಾಫಿ ಡೇ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಿವೃತ್ತ ಡಿಐಜಿ ಅಶೋಕ ಮಲ್ಹೋತ್ರಾ ನೀಡಿರುವ ವರದಿಯಲ್ಲಿ ಅನೇಕ ಭ್ರಷ್ಟರ ಮತ್ತು ಭ್ರಷ್ಟತನದ ಉಲ್ಲೇಖವಿಲ್ಲ. ಹೀಗಾಗಿ ಈ ಕುರಿತಂತೆ ಸಮಗ್ರ ತನಿಖೆ ನಡೆಸುಂತೆ ಎಂದು ಸಮಾಜ ಪರಿವರ್ತನಾ ಸಂಸ್ಥೆಯ ಎಸ್.ಆರ್.ಹಿರೇಮಠ ಒತ್ತಾಯಿಸಿದರು.
ಸ್ಥಳೀಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಕ್ರಿಮಿನಲ್ಸ್ಗಳನ್ನು ಬೆಳೆಸಿದ್ದಕ್ಕೆ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಕಾಫಿ ಡೇ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ, ಸಿಬಿಐ ಮುಖ್ಯಸ್ಥರು ಸೇರಿ 10 ಜನರಿಗೆ ದಾಖಲೆಗಳ ಸಮೇತ ಪತ್ರ ಬರೆಯಲಾಗಿದೆ. ಎಸ್.ಎಂ.ಕೃಷ್ಣ ತಮ್ಮ ಇಬ್ಬರು ಪುತ್ರಿಯರು ಮತ್ತು ಅಳಿಯಂದಿರ ಮೂಲಕ ಸಾವಿರಾರು ಕೋಟಿ ರೂ. ಅವ್ಯವಹಾರ ನಡೆಸಿದ್ದಾರೆ.
ಕಾಫಿ ಡೇನ 3,535 ಕೋಟಿ ರೂ. ಹಾಗೂ 49 ಸಬ್ಸಿಡಿಗಳಿಂದ ಖಾಸಗಿ ಕಂಪನಿಗಳಿಗೆ ಹಣ ನೀಡಲಾಗಿದೆ. ಎಸ್.ಎಂ.ಕೃಷ್ಣ ಮಗಳು ಮಾಳವಿಕಾ ಹೆಗ್ಡೆ, ಅಳಿಯ ಉಮೇಶ, ನಿತೀನ್ ಭಾಗವತ್, ಬಾಲಕೃಷ್ಣ ಇನ್ನಿತರರು ಆಸ್ತಿಗಳ ಬಗ್ಗೆ ತನಿಖೆ ನಡೆಸಬೇಕು ಎಂದರು. ಸಂಘಟನೆ ಪದಾಧಿಕಾರಿಗಳಾದ ಜಾನ್ವೆಸ್ಲಿ, ಮೋಹನರಾವ್ ಕಾಡ್ಲೂರು, ಖಾಜಾ ಅಸ್ಲಂ ಅಹ್ಮದ್ ಉಪಸ್ಥಿತರಿದ್ದರು.