ಬೆಂಗಳೂರು: ಕಳೆದ ಎರಡು ತಿಂಗಳಿನಿಂದ ರವೀಂದ್ರ ಕಲಾಕ್ಷೇತ್ರ ಸೇರಿ ನಗರದ ಸರ್ಕಾರಿ ರಂಗ ಮಂದಿರಗಳು ಕಾರ್ಯಕ್ರಮಗಳಿಲ್ಲದೆ ಭಣಗುಡುತ್ತಿದ್ದು, ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದೆಡೆ ಸಭಾಂಗಣಗಳು ಬಾಡಿಗೆ ಇಲ್ಲದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಲಕ್ಷಾಂತರ ರೂ. ಆರ್ಥಿಕ ನಷ್ಟ ಉಂಟಾಗಿದೆ.
ಸದಾ ಒಂದಿಲ್ಲೊಂದು ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿದ್ದ ರಂಗಮಂದಿರಗಳಲ್ಲಿ ಲೋಕಸಭೆ ಚುನಾವಣೆ ನೀತಿಸಂಹಿತೆ ಹಿನ್ನೆಲೆ ಪೂರ್ವನಿಗದಿತ ಕಾರ್ಯಕ್ರಮಗಳು ರದ್ದಾಗಿವೆ. ಚುನಾವಣಾ ಲಿತಾಂಶ ಪ್ರಕಟಗೊಂಡು ನೀತಿಸಂಹಿತೆ ತೆರವುಗೊಳ್ಳುವವರೆಗೂ ಇದೇ ಸ್ಥಿತಿ ಮುಂದುವರಿಯಲಿದೆ.
ಖಾಸಗಿ ರಂಗಮಂದಿರಗಳಲ್ಲಿ ಬಾಡಿಗೆ ದರ ಹೆಚ್ಚಳ ಕಾರಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ರಂಗಮಂದಿರಗಳಿಗೆ ಬೇಡಿಕೆ ಹೆಚ್ಚಿತ್ತು. ವರ್ಷದ ಬಹುತೇಕ ದಿನಗಳೂ ರಂಗಮಂದಿರಗಳಿಗೆ ಬೇಡಿಕೆ ಇರುತ್ತಿತ್ತು. ಆದರೆ ಈ ವರ್ಷ ಬೇಡಿಕೆ ಇಲ್ಲವಾಗಿದ್ದು, ಇಲಾಖೆಗೆ ಲಕ್ಷಾಂತರ ರೂ. ನಷ್ಟವಾಗಿದೆ. ಕಳೆದ ವರ್ಷವೂ ಇದೇ ವೇಳೆ ವಿಧಾನಸಭೆ ಚುನಾವಣೆ ನೀತಿ ಸಂಹಿತೆಯಿಂದಾಗಿ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಜೂನ್ 2ನೇ ವಾರದ ನಂತರ ಬೇಡಿಕೆ ಹೆಚ್ಚಾಗಲಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿ.
ಹೊಸ ಕ್ಯಾಂಟೀನ್ ಆರಂಭ
ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಕ್ಯಾಂಟೀನ್ ಪುನರಾರಂಭವಾಗಿದ್ದು, ಕಳೆದ 15 ದಿನಗಳಿಂದ ‘ಶ್ರೀನಿಧಿ ಕೇಟರ್ಸ್’ ಕ್ಯಾಂಟೀನ್ ನಡೆಸುತ್ತಿದ್ದಾರೆ. ಜಿಎಸ್ಟಿಸಹಿತ ತಿಂಗಳಿಗೆ 59 ಸಾವಿರ ರೂ. ಬಾಡಿಗೆ ನಿಗದಿಪಡಿಸಲಾಗಿದ್ದು, ವಿದ್ಯುತ್, ನೀರಿನ ದರ ಪ್ರತ್ಯೇಕವಾಗಿದೆ. ‘ಸದ್ಯ ಕಲಾಕ್ಷೇತ್ರ ಸೇರಿ ಇಲ್ಲಿನ ರಂಗ ಮಂದಿರಗಳಲ್ಲಿ ಕಾರ್ಯಕ್ರಮಗಳು ನಡೆಯುತ್ತಿಲ್ಲವಾದ್ದರಿಂದ ವ್ಯಾಪಾರ ಆಗುತ್ತಿಲ್ಲ. ಜೂನ್ ನಂತರ ಗ್ರಾಹಕರು ಹೆಚ್ಚಾಗಬಹುದು’ ಎಂದು ಕ್ಯಾಂಟೀನ್ ಸಿಬ್ಬಂದಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.