ವಿಜಯವಾಡ: ವರ್ಷದ ಮೊದಲ ಹಬ್ಬ ಸಂಕ್ರಾಂತಿ ಬಂದರೆ ದೇಶದೆಲ್ಲೆಡೆ ಸುಗ್ಗಿಯ ಸಂಭ್ರಮ. ಕೃಷ್ಣಾ, ಏಲೂರು, ಪಶ್ಚಿಮ ಗೋದಾವರಿ, ಪೂರ್ವ ಗೋದಾವರಿ, ಡಾ.ಬಿ.ಆರ್.ಅಂಬೇಡ್ಕರ್ ಕೋಣಸೀಮಾ, ಕಾಕಿನಾಡ, ರಾಜಮಹೇಂದ್ರವರಂ, ಗುಂಟೂರು, ಪ್ರಕಾಶಂ, ನೆಲ್ಲೂರು ಮತ್ತಿತರ ಜಿಲ್ಲೆಗಳಲ್ಲಿ ಹುಂಜ ಕಾಳಗ ಹೆಚ್ಚಾಗಿ ಆಯೋಜಿಸುತ್ತಾರೆ.
ಇದನ್ನೂ ಓದಿ: ಹೂ ತುಂಬಿಕೊಂಡ ಮಾವು, ಭರಪೂರ ಬೆಳೆಯ ನಿರೀಕ್ಷೆಯಲ್ಲಿ ರೈತರು
ಈ ಕಾಳಗವನ್ನು ನಿಷೇಧಿಸಿ ಎಂದು ಹೈಕೋರ್ಟ್ ಆದೇಶ ನೀಡಿದ್ದರೂ ಸಂಕ್ರಾಂತಿ ಆಚರಣೆ ನೆಪದಲ್ಲಿ ಸ್ಥಳೀಯ ಮುಖಂಡರು ಮತ್ತು ಚುನಾಯಿತ ಪ್ರತಿನಿಧಿಗಳ ಬೆಂಬಲದೊಂದಿಗೆ ಸಂಘಟನಾ ಸಮಿತಿಗಳನ್ನು ರಚಿಸಿ ಸುವ್ಯವಸ್ಥಿತ ರೀತಿಯಲ್ಲಿ ಅಖಾಡ ಸ್ಥಾಪಿಸುತ್ತಾರೆ. ಈಗ ಆಂಧ್ರದಲ್ಲಿ ಅದರಲ್ಲೂ ಹುಂಜಗಳಿಗೆ ಬೇಡಿಕೆ ವಿಪರೀತ ಹೆಚ್ಚಾಗಿದೆ. ಕೋಳಿ ಕಾಳಗದ ಜಿದ್ದಾಜಿದ್ದಿ ಹೋರಾಟಕ್ಕೆ ಹುಂಜದ ಬೆಲೆ 2.50 ಲಕ್ಷ ರೂ. ಹೆಚ್ಚಳ ಕಂಡಿದೆ ಎಂದು ವರದಿಯಾಗಿದೆ.
ಕಾಲಿಗೆ ಕಟ್ಟಿದ ಪುಟಾಣಿ ಕತ್ತಿಯಿಂದ ಎದುರಾಳಿ ಹುಂಜವನ್ನು ಚುಚ್ಚಿ ಗಾಯಗೊಳಿಸಿ, ನಿತ್ರಾಣಗೊಳಿಸಿ ಅಂಕ ಗೆಲ್ಲುವ ಹುಂಜಕ್ಕೀಗ ಎಲ್ಲಿಲ್ಲದ ಬೇಡಿಕೆ.
ಆಂಧ್ರದ ಹುಂಜಗಳಿಗೆ ವಿದೇಶಿ ಹುಂಜಗಳು ಪೈಪೋಟಿ ನೀಡುತ್ತಿವೆ. ಥೈಲಾಂಡ್, ಫಿಲಿಪ್ಪೀನ್ಸ್ನಿಂದ ಕಳ್ಳಮಾರ್ಗದಲ್ಲಿ ತರಲಾದ ಹುಂಜಗಳಿಗೆ ಭಾರಿ ಬೇಡಿಕೆ ಬಂದಿದೆ. ಸದ್ಯ ಆಂಧ್ರದಲ್ಲಿ ಕೋಳಿಗಳಿಗೆ ‘ರಾಣಿ ಖೇತ್’ ಎಂಬ ಸಾಂಕ್ರಾಮಿಕ ಕಾಯಿಲೆ ಹರಡುತ್ತಿದೆ. ಇದರಿಂದ ಹುಂಜಗಳ ಬೇಡಿಕೆ ಹೆಚ್ಚಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಬಿಡುಗಡೆಯಾಗುತ್ತಿದ್ದಂತೆ ಜೈಲ್ ಗೇಟ್ನಲ್ಲಿ ಮತ್ತೆ ಕರವೇ ನಾರಾಯಣಗೌಡ ಅರೆಸ್ಟ್
ಹುಂಜಕ್ಕೆ ವಯಾಗ್ರಾ ಮಾತ್ರೆ?: ಕಾಳಗದ ಹುಂಜಗಳಿಗೆ ವಯಾಗ್ರಾ ಮಾತ್ರೆ ನೀಡಲಾಗುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಕೋಳಿ ಅಂಕದಲ್ಲಿ ಸುಧೀರ್ಘ ಕಾಲ ಹೋರಾಡಲು ಶಕ್ತಿ ಬರುವಂತೆ ಮಾಡಲು ಹುಂಜಗಳಿಗೆ ವಯಾಗ್ರಾ ಮಾತ್ರೆಯನ್ನೂ ನೀಡಲಾಗುತ್ತದೆ ಎನ್ನಲಾಗಿದೆ.
ಲಕ್ಷಾಂತರ ರೂಪಾಯಿ ಬೆಟ್ಟಿಂಗ್: ಕೋಳಿ ಕಾಳಗ ನಡೆಸದಂತೆ ನಿಷೇಧ ಹೇರಿದ್ದರೂ ಕೂಡ ಆಂಧ್ರಪ್ರದೇಶದ ಕೃಷ್ಣಾ, ಪ್ರಕಾಶಂ, ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಾದ್ಯಂತ ಕೋಳಿ ಕಾಳಗ ಆಯೋಜಿಸಲಾಗುತ್ತದೆ. ಹುಂಜಗಳ ಕಾದಾಟದಲ್ಲಿ ಜನರು ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ಕಟ್ಟುತ್ತಾರೆ. ಕೋಳಿಗಳಿಗೆ ಚಾಕು ಕಟ್ಟದೆ ಸಾಂಪ್ರದಾಯಿಕ ರೀತಿಯಲ್ಲಿ ಆಯೋಜಿಸಲಾಗಿದೆ ಎಂಬ ಷರತ್ತಿನ ಮೇಲೆ ಕೆಲವೆಡೆ ಪೊಲೀಸ್ ಅಧಿಕಾರಿಗಳು ಅನುಮತಿ ನೀಡುತ್ತಾರೆ ಎನ್ನಲಾಗಿದೆ,(ಏಜನ್ಸೀಸ್).