ಚಿಕ್ಕಮಗಳೂರು: ಮಹಿಳಾ ಕುರಿಗಾರರಿಗೆ ಆರ್ಥಿಕ ಚೈತನ್ಯ ನೀಡುವ ಸಲುವಾಗಿ ಕುರಿಮಿತ್ರ ಹೆಸರಲ್ಲಿ ಸಂಘಗಳನ್ನು ರಚಿಸಿ, ಅವರಿಗೆ ಇದುವರೆಗೆ ಒಂದು ಕೋಟಿ ರೂ. ಸಾಲ ಸೌಲಭ್ಯ ನೀಡಲಾಗಿದೆ ಎಂದು ಜಿಲ್ಲಾ ಕುರಿ ಮತ್ತು ಉಣ್ಣೆ ಸಹಕಾರ ಸಂಘದ ಅಧ್ಯಕ್ಷ ಎ.ಎನ್.ಮಹೇಶ್ ತಿಳಿಸಿದರು.
ನಗರದ ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಕುರಿ ಮತ್ತು ಉಣ್ಣೆ ಸಹಕಾರ ಸಂಘದ 5ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಸಂಘ ಆರಂಭವಾಗಿ 5 ವರ್ಷಗಳಾಗಿದ್ದು, ಅಸಂಘಟಿತ ಕುರಿಗಾರರಿಗೆ ಭದ್ರತೆ ನೀಡುವುದು ಮುಖ್ಯ ಉದ್ದೇಶ. ಕುರಿ ಸಾಕಣೆೆಯನ್ನೇ ಮುಖ್ಯ ಕಸುಬು ಮಾಡಿಕೊಂಡಿರುವವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಆಧುನಿಕ ರೀತಿಯ ಸಾಕಣೆ ತರಬೇತಿ ನೀಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ 50 ಸಾವಿರ ಅಸಂಘಟಿತ ಕುರಿಗಾರರಿದ್ದು, 10 ಲಕ್ಷಕ್ಕೂ ಹೆಚ್ಚು ಕುರಿ ಸಾಕಣೆ ಮಾಡುತ್ತಿದ್ದಾರೆ. ಸಂಘ, ಸರ್ಕಾರ ಹಾಗೂ ಕುರಿ ಅಭಿವೃದ್ಧಿ ನಿಗಮದಿಂದ ಹೆಚ್ಚಿನ ಅನುದಾನ ನಿರೀಕ್ಷೆಯಲ್ಲಿದ್ದರೂ ಸರ್ಕಾರದ ಸ್ಪಂದನೆ ನಿರೀಕ್ಷಿಸಿದ ಮಟ್ಟದಲ್ಲಿಲ್ಲ ಎಂದು ದೂರಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಕುರಿ ಅಕಾಲಿಕ ಮೃತಪಟ್ಟರೆ 5 ಸಾವಿರ ರೂ. ನೀಡುತ್ತಿದ್ದುದನ್ನು ಇಂದಿನ ಸರ್ಕಾರ ನಿಲ್ಲಿಸಿದೆ. ಈ ಯೋಜನೆ ಪುನಃ ಆರಂಭವಾಗಬೇಕು. ಕುರಿಗಾರರನ್ನು ಅಸಂಘಟಿತ ಕಾರ್ವಿುಕ ವಲಯಕ್ಕೆ ಸೇರಿಸಿ ಎಲ್ಲ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.
ಕುರಿ ಮಾಂಸ ಮಾರಾಟ ಮಳಿಗೆ ಆರಂಭಕ್ಕೆ ಚಿಂತನೆ: ಕುರಿಗಾರರಿಗೆ ಮಾರುಕಟ್ಟೆ ಸೌಲಭ್ಯ ಅಗತ್ಯ. ಮಾಂಸ, ಚರ್ಮ ಹಾಗೂ ಕುರಿಗೊಬ್ಬರಕ್ಕೆ ಉತ್ತಮ ಮಾರುಕಟ್ಟೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಾಂಸ ಮಾರಾಟ ಮಳಿಗೆ ತೆರೆಯಲು ಸಂಘ ಉದ್ದೇಶಿಸಿದೆ ಎಂದು ಎ.ಎನ್.ಮಹೇಶ್ ತಿಳಿಸಿದರು. ಸದ್ಯದಲ್ಲೇ ರೈತರಿಂದ ಕುರಿ ಗೊಬ್ಬರ ಖರೀದಿಸಿ ಅದನ್ನು ಸಿದ್ಧ ಮಾದರಿಗೆ ಒಳಪಡಿಸಿ ಗ್ರಾಹಕರಿಗೆ ಯೋಗ್ಯ ಬೆಲೆಯಲ್ಲಿ ವಿತರಿಸಲು ಸಿದ್ಧತೆ ನಡೆಸಲಾಗಿದೆ. ವಿಶೇಷವಾಗಿ ಕೈತೋಟಗಳಿಗೆ 5 ಕೆಜಿ ಕುರಿ ಗೊಬ್ಬರವನ್ನು ತಾಂತ್ರಿಕ ವಿಶೇಷತೆಗಳೊಂದಿಗೆ ಸಿದ್ಧಪಡಿಸಲಾಗುವುದು. ಇದಕ್ಕಾಗಿ ನಬಾರ್ಡ್ ನೆರವು ನೀಡಲಿದೆ. ಸದ್ಯ ಸಹಕಾರ ಸಂಘದಲ್ಲಿ 1600 ಸದಸ್ಯರಿದ್ದು ಸಂಘ ಲಾಭದಲ್ಲಿ ಮುನ್ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸದಸ್ಯರಿಂದ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಗಡೀಹಳ್ಳಿ ಪರಮೇಶ್ವರಪ್ಪ ಮಾತನಾಡಿ, ಸದಸ್ಯರೆಲ್ಲರೂ ಸೇರಿ ಸಂಘದ ಆರ್ಥಿಕ ಉನ್ನತಿಗಾಗಿ ಹಾಗೂ ಕುರಿಗಾರರ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ತಿಳಿಸಿದರು.
ಸಿಇಒ ಎಚ್.ಮನು 2019-20ನೇ ಸಾಲಿನ ಲೆಕ್ಕ ಪತ್ರ ಮಂಡಿಸಿದರು. ಸಂಘದ ನಿರ್ದೇಶಕರಾದ ರಮೇಶ್, ಪುಟ್ಟೇಗೌಡ, ಶ್ರುತಿ, ಗೀತಾಬಾಯಿ, ಕೆ.ಸಿ.ಕೆಂಗೇಗೌಡ, ಜ್ಞಾನಚಂದ್ರ, ಜಿ. ಈಶ್ವರಪ್ಪ, ಜನಸ್ವಂದನ ಡೆವಲಪ್ವೆುಂಟ್ ಸೊಸೈಟಿ ಅಧ್ಯಕ್ಷ ಎಸ್.ಆರ್.ಸತೀಶ್, ನಿರ್ದೇಶಕ ಎಸ್.ಬಿ.ರಾಮಚಂದ್ರಪ್ಪ, ತಾಪಂ ಸದಸ್ಯ ಡಿ.ಎಲ್.ಬಸವರಾಜ್ ಇದ್ದರು.