ಬೆಂಗಳೂರು: ಸಿಎಂ ಬಿಎಸ್ವೈ ವಿರುದ್ಧ ಈಶ್ವರಪ್ಪ ದೂರು ನೀಡಿರುವ ಕುರಿತು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅಸಮಧಾನ ವ್ಯಕ್ತಪಡಿಸಿದ್ದಾರೆ.
ನಾವೆಲ್ಲಾ ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಗ್ರಾಮೀಣಾಭಿವೃದ್ದಿ ಅನುದಾನ ಬಿಡುಗಡೆಗೆ ಮನವಿ ಮಾಡಿದ್ದೆವು. ಹಾಗಾಗಿ ಸಿಎಂ ಅನುದಾನ ಬಿಡುಗಡೆ ಮಾಡಿದ್ದಾರೆ. ಆದರೆ, ಈಶ್ವರಪ್ಪ ಹೇಳಿದಂತೆ ಸಿಎಂ ಹಸ್ತಕ್ಷೇಪ ಮಾಡಿಲ್ಲ ಎಂದರು.
ಏನೇ ಸಮಸ್ಯೆ ಇದ್ದರೂ ನಾಲ್ಕು ಗೋಡೆ ಮಧ್ಯೆ ಕುಳಿತು ಬಗೆಹರಿಸಿಕೊಳ್ಳಬೇಕು. ಅದು ಬಿಟ್ಟು ರಾಜ್ಯಪಾಲರಿಗೆ, ಪ್ರಧಾನಿಗೆ ದೂರು ಕೊಡುವುದು ಸರಿಯಲ್ಲ. ಉಪಚುನಾವಣೆ ಸಂದರ್ಭದಲ್ಲಿ ಈ ರೀತಿ ಆದರೆ ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗುತ್ತದೆ ಎಂದು ಹೇಳಿದರು.
ಹಾಗಾಗಿ ನಾಲ್ಕು ಗೋಡೆ ಮಧ್ಯೆ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದು ಸಚಿವ ಕೆ. ಎಸ್. ಈಶ್ವರಪ್ಪಗೆ ಸಲಹೆ ನೀಡಿದರು. ನಾಯಕತ್ವ ಬದಲಾವಣೆಗೆ ಇದು ಮುನ್ನುಡಿ ಅಲ್ಲ. ಈಗಾಗಲೇ ಈಶ್ವರಪ್ಪ ಅವರು ಯಡಿಯೂರಪ್ಪರೇ ಸಿಎಂ ಆಗಿರುತ್ತಾರೆ ಎಂದು ಹೇಳಿದ್ದಾರೆ. ಕಾರಣ ಈಶ್ವರಪ್ಪ ದೂರಿಗೂ ನಾಯಕತ್ವ ಬದಲಾವಣೆಗೂ ಯಾವುದೇ ಸಂಬಂಧ ಇಲ್ಲ ಎಂದರು.
ನಮ್ಮಲ್ಲಿ ಯಾವುದೇ ಗುಂಪುಗಳಿಲ್ಲ. ನಾವೆಲ್ಲರೂ ಒಂದಾಗಿದ್ದೇವೆ, ಒಗ್ಗಾಟ್ಟಾಗಿಯೇ ಇದ್ದೇವೆ ಎಂದು ತಿಳಿಸಿದರು. ಯಡಿಯೂರಪ್ಪನವರೇ ಮುಂದಿನ 2 ವರ್ಷಗಳ ಕಾಲ ಸಿಎಂ ಆಗಿರುತ್ತಾರೆ. ಇದರಲ್ಲಿ ಯಾರಿಗೂ ಯಾವುದೇ ಅನುಮಾನ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈಶ್ವರಪ್ಪ ಈ ರೀತಿ ಮಾಡಿದ್ದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದರು. ಸಿಎಂ ಯಡಿಯೂರಪ್ಪರ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹಿಸಿರುವ ಕುರಿತು, ಕಾಂಗ್ರೆಸ್ ನವರಿಗೆ ಪ್ರಶ್ನಿಸಲು ಈ ಬಗ್ಗೆ ಏನು ನೈತಿಕತೆ ಇದೆ ಎಂದು ಕಿಡಿಕಾರಿದರು.
ದೇಶ ಹಾಗೂ ರಾಜ್ಯದಲ್ಲಿ ಭ್ರಷ್ಟಾಚಾರ ಅಂದರೆ ಅದು ಕಾಂಗ್ರೆಸ್ ನಲ್ಲಿ. ನೀರಿನಿಂದ ಹೊರಗೆ ಬಂದ ಮೇಲೆ ಮೀನು ಒದ್ದಾಡುವಂತಹ ಸ್ಥಿತಿ ಕಾಂಗ್ರೆಸ್ ಗೆ ಬಂದಿದೆ ಎಂದು ಟೀಕಿಸಿದರು. ಕಾಂಗ್ರೆಸ್ ನಲ್ಲಿ A ಯಿಂದ Z ವರೆಗೂ ಎಲ್ಲರು ಖುರ್ಚಿಗಾಗಿ ಕಿತ್ತಾಡುತ್ತಿದ್ದಾರೆ. ಅವರು ನಮ್ಮ ಬಗ್ಗೆ ಏನು ಹೇಳೋದು ಎಂದು ಕೈ ನಾಯಕರಿಗೆ ತಿರುಗೇಟು ನೀಡಿದರು.
ಬಿಜೆಪಿ ಸಂಸದೆ, ನಟಿ ಕಿರಣ್ ಖೇರ್ ಜನತೆ ಮುಂದೇಕೆ ಕಾಣಿಸಿಕೊಳ್ಳುತ್ತಿಲ್ಲ? ಪಕ್ಷ ನೀಡಿದೆ ನೋಡಿ ಈ ಉತ್ತರ…