ಬೆಂಗಳೂರು: ಲಾಕ್ಡೌನ್ನಿಂದ ಸಂಕಷ್ಟಪಡುತ್ತಿರುವ 1 ಲಕ್ಷಕ್ಕೂ ಅಧಿಕ ಕಾರ್ಮಿಕರನ್ನು ಅವರ ಊರುಗಳಿಗೆ ಕಳಿಸಿಕೊಟ್ಟಿದ್ದೇವೆ. ಎಲ್ಲ ವರ್ಗದವರಿಗೂ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಆದರೂ ಜನರ ನೆರವಿಗೆ ಬಂದಿದ್ದೇವೆ. ಹಾಗೇ ಕರೊನಾ ಸಂಕಷ್ಟ ಪರಿಹಾರಕ್ಕಾಗಿ 1610 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡುತ್ತಿದ್ದೇವೆ ತಿಳಿಸಿದರು. ದೇಶದಲ್ಲಿ ಯಾವ ರಾಜ್ಯದಲ್ಲೂ ಇಷ್ಟು ಪ್ಯಾಕೇಜ್ ಬಿಡುಗಡೆ ಮಾಡಿಲ್ಲ ಎಂದು ಸಿಎಂ ಹೇಳಿದರು.
ಇದನ್ನೂ ಓದಿ: ಯಡಿಯೂರಪ್ಪಗೆ ಸಿದ್ದು, ಎಚ್ಡಿಕೆ, ದೇವೇಗೌಡರ ಸಲಹೆ
ಕಳೆದ ಮೂರು ದಿನಗಳಿಂದ ಲಾಕ್ಡೌನ್ನಲ್ಲಿ ಸಡಿಲಿಕೆ ಮಾಡಲಾಗಿದೆ. ಆದರೆ ಅದನ್ನು ದುರುಪಯೋಗ ಮಾಡಿಕೊಳ್ಳಬೇಡಿ. ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲೇಬೇಕು ಎಂದು ಒತ್ತಾಯ ಮಾಡಿದ್ದರು. ಅವರ ಸಂಕಷ್ಟ ಅರಿತು ಬಸ್, ರೈಲು ವ್ಯವಸ್ಥೆ ಮಾಡಲಾಯಿತು ಎಂದು ಹೇಳಿದರು.
ಹೂವು ಬೆಳೆಗಾರರು 11687 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹೂವು ಹಾಳಾಗಿದ್ದು ಅವರಿಗೆ ತೀವ್ರ ನಷ್ಟವಾಗಿದೆ. ಹಾಗಾಗಿ ಪ್ರತಿ ಹೆಕ್ಟೇರ್ಗೆ 25 ಸಾವಿರ ರೂ. ಪರಿಹಾರ ನೀಡಲು ತೀರ್ಮಾನಿಸಿದ್ದೇವೆ. ಇನ್ನು ತರಕಾರಿ, ಹಣ್ಣು ಬೆಳೆಗಾರರೂ ಕೂಡ ನಷ್ಟದಲ್ಲಿದ್ದಾರೆ. ಅವರಿಗೂ ಪ್ಯಾಕೇಜ್ ಘೋಷಣೆ ಮಾಡಲಾಗುವುದು. ಈ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಆರೋಗ್ಯ ಸೇತು ಆ್ಯಪ್ನ ಬೆನ್ನುಬಿದ್ದಿರುವ ಫ್ರೆಂಚ್ ಹ್ಯಾಕರ್..; ಹೆದರಬೇಡಿ ಎನ್ನುತ್ತಿದೆ ಕೇಂದ್ರ ಸರ್ಕಾರ
ಲಾಕ್ಡೌನ್ನಿಂದಾಗಿ ಕ್ಷೌರಿಕರು, ಅಗಸರು ಒಂದೂವರೆ ತಿಂಗಳಿನಿಂದ ಕೆಲಸ ಮಾಡಿಲ್ಲ. ಅವರಿಗೆ ಆದಾಯ ಇಲ್ಲ. ಹಾಗಾಗಿ 60 ಸಾವಿರ ಅಗಸರು, 2.36 ಲಕ್ಷ ಕೌರಿಕರಿಗೆ ಒಂದು ಬಾರಿಗೆ ಐದು ಸಾವಿರ ರೂ., 7.75 ಲಕ್ಷ ಆಟೋ, ಟ್ಯಾಕ್ಸಿ ಚಾಲಕರಿಗೆ ಐದು ಸಾವಿರ ರೂ.ಪರಿಹಾರ ನೀಡಲಾಗುವುದು ಎಂದು ಸಿಎಂ ಭರವಸೆ ನೀಡಿದರು.
2 ತಿಂಗಳ ವಿದ್ಯುತ್ ಬಿಲ್ ಮನ್ನಾ
ಅತಿ ಸಣ್ಣ ಹಾಗೂ ಮದ್ಯಮ ಉದ್ಯಮಿಗಳ ಕೈಗಾರಿಕೆಗಳ 2 ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಲಾಗುವುದು. ಬೃಹತ್ ಕೈಗಾರಿಕೆಗಳ ವಿದ್ಯುತ್ ಬಿಲ್ ಪಾವತಿಯನ್ನು ಎರಡು ತಿಂಗಳಿಗೆ ಮುಂದೂಡಲಾಗುವುದು. ನಿಗದಿತ ಸಮಯದಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡುವ ಗ್ರಾಹಕರಿಗೆ ಶೇ.1ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
ಇದನ್ನೂ ಓದಿ: ಕರೊನಾ ವೈರಸ್ ಅನ್ನು ಬಹು ಬೇಗನೆ ಕೊಲ್ಲುವ ಸಾಮರ್ಥ್ಯ ಸೂರ್ಯನ ಬೆಳಕಿದೆ: ಯುಎಸ್ ವಿಜ್ಞಾನಿಗಳು
1 ಲಕ್ಷ ರೂಪಾಯಿ ಸಾಲ ಕಟ್ಟಿರುವ ನೇಕಾರರಿಗೆ ಅದನ್ನು ವಾಪಸ್ ಕೊಡುತ್ತೇವೆ. ಹಾಗೇ 15 ಲಕ್ಷ ಕಟ್ಟಡ ಕಾರ್ಮಿಕರಿಗೆ ಈಗಾಗಲೇ 2 ಸಾವಿರ ರೂ.ಪರಿಹಾರ ನೀಡಿದ್ದು, ಮತ್ತೆ 3 ಸಾವಿರ ರೂ.ಹೆಚ್ಚುವರಿಯಾಗಿ ನೀಡುತ್ತೇವೆ ಎಂದು ಭರವಸೆ ನಿಡಿದರು.