ಕೊವಿಡ್-19 ಟ್ರ್ಯಾಕ್ ಮಾಡಲು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಆರೋಗ್ಯ ಸೇತು ಆ್ಯಪ್ನಿಂದ ಸಾರ್ವಜನಿಕರ ಖಾಸಗಿ ಮಾಹಿತಿಗಳು ಸೋರಿಕೆ ಆಗುತ್ತದೆ ಎಂದು ಇತ್ತೀಚೆಗಷ್ಟೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದರು.
ಆರೋಗ್ಯ ಸೇತು ಆ್ಯಪ್ ಒಂದು ಆಧುನಿಕ ಕಣ್ಗಾವಲು ವ್ಯವಸ್ಥೆ. ಸರ್ಕಾರ ಇದರ ಅಭಿವೃದ್ಧಿ, ಕಾರ್ಯಾಚರಣೆಯ ಹೊರಗುತ್ತಿಗೆಯನ್ನು ಖಾಸಗಿ ಸಂಸ್ಥೆಗೆ ನೀಡಿದೆ. ಇದರಲ್ಲಿ ಸಾರ್ವಜನಿಕರ ಖಾಸಗಿ ಮಾಹಿತಿಗಳು, ಡೇಟಾಗಳು ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬ ಪ್ರಶ್ನೆ ಹುಟ್ಟುತ್ತದೆ. ತಂತ್ರಜ್ಞಾನ ನಮ್ಮನ್ನು ಸುರಕ್ಷಿತ ಆಗಿಡುತ್ತದೆ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ನಾಗರಿಕರನ್ನು ಅವರ ಒಪ್ಪಿಗೆಯಿಲ್ಲದೆ ನಿಗಾವಣೆಯಲ್ಲಿಡುವ ಮೂಲಕ ಭಯಕ್ಕೆ ದೂಡಬಾರದು ಎಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಆರೋಗ್ಯ ಸೇತು ಆ್ಯಪ್ನಿಂದ ಖಾಸಗಿತನಕ್ಕೆ ಧಕ್ಕೆ: ರಾಹುಲ್ ಗಾಂಧಿ ಆತಂಕ; ಬಿಜೆಪಿ ತೀಕ್ಷ್ಣ ಪ್ರತ್ಯುತ್ತರ
ರಾಹುಲ್ ಗಾಂಧಿಯವರ ಟ್ವೀಟ್ಗೆ ಪ್ರತ್ಯುತ್ತರ ನೀಡಿದ್ದ ಬಿಜೆಪಿ, ಯಾರೂ ಹೆದರಬೇಕಿಲ್ಲ. ಆರೋಗ್ಯ ಸೇತು ಆ್ಯಪ್ನಲ್ಲಿ ಎಲ್ಲರ ಮಾಹಿತಿಗಳೂ ಭದ್ರವಾಗಿರುತ್ತವೆ. ಸೋರಿಕೆಯಾಗುವುದಿಲ್ಲ ಎಂದು ಭರವಸೆ ನೀಡಿತ್ತು.
ಆದರೆ ನಿನ್ನೆ ರಾತ್ರಿ ಫ್ರೆಂಚ್ ಹ್ಯಾಕರ್ ರಾಬರ್ಟ್ ಬ್ಯಾಪ್ಟಿಸ್ಟ್ ಎಂಬುವರು ಟ್ವೀಟ್ ಮಾಡುವ ಮೂಲಕ, ಭಾರತದ ಆರೋಗ್ಯ ಸೇತು ಆ್ಯಪ್ನಲ್ಲಿ ಡೇಟಾ ಸೆಕ್ಯೂರಿಟಿಗೆ ಸಂಬಂಧಪಟ್ಟ ಸಮಸ್ಯೆ ಇದೆ ಎಂದು ಹೇಳಿದ್ದರು.
ಎಲಿಯಟ್ ಆಲ್ಡರ್ಸನ್ ಎಂಬ ಹೆಸರಿನಲ್ಲಿರುವ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಆರೋಗ್ಯ ಸೇತು ಆ್ಯಪ್ನ್ನು ಟ್ಯಾಗ್ ಮಾಡಿ ಸರಣಿ ಟ್ವೀಟ್ ಮಾಡಿದ್ದ ಫ್ರೆಂಚ್ ಹ್ಯಾಕರ್ ರಾಬರ್ಟ್ ಬ್ಯಾಪ್ಟಿಸ್ಟ್, ಆರೋಗ್ಯ ಸೇತು ಆ್ಯಪ್ನಲ್ಲಿ ಭದ್ರತೆಗೆ ಸಂಬಂಧಪಟ್ಟ ಸಮಸ್ಯೆ ಕಂಡುಬರುತ್ತಿದೆ. 90 ಮಿಲಿಯನ್ ಭಾರತೀಯರ ಖಾಸಗಿ ಮಾಹಿತಿಗಳು ಅಪಾಯದಲ್ಲಿದೆ. ಸಂಬಂಧಪಟ್ಟವರು ನನ್ನನ್ನೊಮ್ಮೆ ವೈಯಕ್ತಿಕವಾಗಿ ಸಂಪರ್ಕಿಸಬಹುದಾ ಎಂದು ಪ್ರಶ್ನೆ ಮಾಡಿದ್ದರು. ಹಾಗೇ ರಾಹುಲ್ ಗಾಂಧಿ ಹೇಳಿದ್ದು ಸರಿಯಾಗಿದೆ ಎಂದೂ ಉಲ್ಲೇಖಿಸಿದ್ದರು.
ಇದನ್ನೂ ಓದಿ: ಆರೋಗ್ಯ ಸೇತು ಆ್ಯಪ್ ಇಲ್ಲದಿದ್ದರೆ ಜೈಲು ಸೇರಬೇಕಾಗುತ್ತೆ ಎಚ್ಚರ….!
ಆ ಟ್ವೀಟ್ ಮಾಡಿ ಕೆಲವೇ ಹೊತ್ತಲ್ಲಿ ಇನ್ನೊಂದು ಟ್ವೀಟ್ ಮಾಡಿದ್ದ ಹ್ಯಾಕರ್, ನಾನು ಟ್ವೀಟ್ ಮಾಡಿದ 49 ನಿಮಿಷಗಳ ನಂತರ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (Indian CERT) ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರ ನನ್ನನ್ನು ಸಂಪರ್ಕಿಸಿತ್ತು. ಸಮಸ್ಯೆಯನ್ನು ಅವರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದರು.
ಆರೋಗ್ಯಸೇತುವಿನಲ್ಲಿ ಭದ್ರತೆಗೆ ಸಂಬಂಧಪಟ್ಟಂತೆ ಸಮಸ್ಯೆ ಇದೆ ಎಂದಿರುವ ಹ್ಯಾಕರ್, ಅದೇನೆಂದು ಬಹಿರಂಗಪಡಿಸಿಲ್ಲ.
ಈಗ ರಾಬರ್ಟ್ ಬ್ಯಾಪ್ಟಿಸ್ಟ್ ಅವರ ಟ್ವೀಟ್ಗಳಿಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದೆ. ಆರೋಗ್ಯ ಸೇತು ಆ್ಯಪ್ನಲ್ಲಿ ಸಾರ್ವಜನಿಕರ ಮಾಹಿತಿ ಸುರಕ್ಷಿತವಲ್ಲ ಎಂದಿರುವ ಹ್ಯಾಕರ್ಗೆ ಉತ್ತರಿಸಿರುವ ಕೇಂದ್ರ, ಯಾವುದೇ ಡೇಟಾ ಆಗಲೀ, ಖಾಸಗಿ ಮಾಹಿತಿಗಳ ಸೋರಿಕೆಯಾಗಲೀ ಕಂಡುಬಂದಿಲ್ಲ. ಭದ್ರತಾ ನಿಯಮ ಉಲ್ಲಂಘನೆಯಾಗಿಲ್ಲ ಎಂದಿದೆ.
ಇದನ್ನೂ ಓದಿ: ನಿಮ್ಮ ಸಮೀಪದಲ್ಲಿರೋ ಕರೊನಾ ಸೋಂಕಿತನ ಬಗ್ಗೆ ಎಚ್ಚರಿಸಲಿದೆ ಕೇಂದ್ರ ಸರ್ಕಾರದ ನೂತನ ‘ಆರೋಗ್ಯ ಸೇತು’ ಆ್ಯಪ್!
ಆರೋಗ್ಯ ಸೇತು ಆ್ಯಪ್ನ ಯಾವುದೇ ಬಳಕೆದಾರನ ವೈಯಕ್ತಿಕ ಮಾಹಿತಿಗಳು ಅಪಾಯದಲ್ಲಿವೆ ಎಂಬುದನ್ನು ಈ ಎಥಿಕಲ್ ಹ್ಯಾಕರ್ ಸಾಬೀತು ಮಾಡಿಲ್ಲ. ನಾವು ನಮ್ಮ ಆ್ಯಪ್ನ್ನು ನಿರಂತರವಾಗಿ ಪರಿಶೀಲನೆ ಮಾಡುತ್ತಿದ್ದೇವೆ ಮತ್ತು ಅಪ್ಗ್ರೇಡ್ ಮಾಡುತ್ತಿದ್ದೇವೆ. ಯಾರೊಬ್ಬರ ಡೇಟಾ, ಖಾಸಗಿ ಮಾಹಿತಿಗಳು ಸೋರಿಕೆಯಾಗುವುದಿಲ್ಲ ಎಂದು ಆರೋಗ್ಯ ಸೇತು ಟೀಂ ಭರವಸೆ ಕೊಡುತ್ತದೆ ಎಂದು ಸರ್ಕಾರ ಹೇಳಿದೆ.
ಅಲ್ಲದೆ, ಫ್ರೆಂಚ್ನ ಎಥಿಕಲ್ ಹ್ಯಾಕರ್ ನಮ್ಮನ್ನು ಎಚ್ಚರಿಸಿದ್ದಕ್ಕೆ ಧನ್ಯವಾದ. ಯಾವುದೇ ಬಳಕೆದಾರ ಆ್ಯಪ್ನಲ್ಲಿ ಸಮಸ್ಯೆ ಇದೆ ಎಂದು ಹೇಳಿದರೆ ಖಂಡಿತ ಶೀಘ್ರವೇ ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದೆ. ಹಾಗೇ ನಿಮ್ಮ ಬೆಂಬಲ ನಮಗೆ ಇರಲಿ ಎಂದು ಫ್ರೆಂಚ್ ಹ್ಯಾಕರ್ಗೆ ಹೇಳಿದೆ.
ಅದಾದ ಬಳಿಕ ಮತ್ತೆ ಟ್ವೀಟ್ ಮಾಡಿರುವ ರಾಬರ್ಟ್ ಬ್ಯಾಪ್ಟಿಸ್ಟ್, ಆರೋಗ್ಯ ಸೇತು ಬಗ್ಗೆ ಇಂದು (ಮೇ 6) ಇನ್ನೂ ಹೆಚ್ಚಿನ ವಿವರ ಹೇಳುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್)
ಇದನ್ನೂ ಓದಿ: ಆರೋಗ್ಯ ಸೇತು ಆ್ಯಪ್ ಇಲ್ಲದೆ ದೆಹಲಿಗೆ ಪ್ರವೇಶ ಕೊಡಬೇಡಿ; ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಸಲಹೆ