ಬೆಂಗಳೂರು: ಕರ್ನಾಟಕಕ್ಕೆ ಸಂಬಂಧಿಸಿದ ಜಲವಿವಾದದ ಕುರಿತು ಪ್ರಧಾನಿ ಮೋದಿ ಅವರನ್ನು ಸರ್ವಪಕ್ಷ ನಿಯೋಗ ಭೇಟಿಯಾಗಲು ನಿರ್ಧರಿಸಿದ್ದು, ಈ ವಿಚಾರವಾಗಿ ಸಹಕಾರ ನೀಡಲು ಮುಖಂಡರು ಒಪ್ಪಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಸಿಎಂ ಮಳೆ ಕೊರತೆಯಿಂದಾಗಿ ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ಸಂಕಷ್ಟ ಎದುರಾಗಿದೆ. ಸಾಮಾನ್ಯ ಜಲವರ್ಷದಲ್ಲಿ ನೀರು ಹಂಚಿಕೆಯ ಕುರಿತು ತೀರ್ಮಾನ ಆಗಿದೆಯೇ ಹೊರತು ಸಂಕಷ್ಟದ ಸಮಯದಲ್ಲಿ ಅಲ್ಲ. ಈ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಸುದೀರ್ಘವಾಗಿ ವಾದ ಮಂಡಿಸುವಂತೆ ರಾಜ್ಯದ ವಕೀಲರಿಗೆ ಸಲಹೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸಂಕಷ್ಟದ ದಿನಗಳು ಎದುರಾಗಿವೆ
67 ಟಿಎಂಸಿ ಸಂಗ್ರಹಿಸುವ ಮೇಕೆದಾಟು ಯೋಜನೆ ಜಾರಿಗೆ ತಂದರೆ ಸಂಕಷ್ಟದ ಸಮಯದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸಬಹುದು. ಆದರೆ, ಈ ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧಿಸುತ್ತಿದೆ. ಈ ವಿಚಾರವಾಗಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಸಂಕಷ್ಟ ಹಂಚಿಕೆ ಸೂತ್ರದ ಕುರಿತು ಚರ್ಚೆಯಾಗಬೇಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿಯಲ್ಲಿ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ; ಸಂಸದ ಬಚ್ಚೇಗೌಡ ಅಸಮಾಧಾನ
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ 2018ರಲ್ಲಿ ಸುಪ್ರೀಂ ಕೋರ್ಟ್ ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಸ್ಥಾಪನೆ ಮಾಡಲಾಗಿದೆ. ಪ್ರಾಧಿಕಾರ ಈವರೆಗೂ 22 ಹಾಗೂ ನಿಯಂತ್ರಣ ಸಮಿತಿ 84 ಸಭೆಗಳನ್ನು ನಡೆಸಿದೆ. ಈ ಎರಡು ಸಮಿತಿಗಳ ರಚನೆಯಾದ ಬಳಿಕ ನೀರಿನ ವಿಚಾರವಾಗಿ ರಾಜ್ಯಕ್ಕೆ ಸಂಕಷ್ಟದ ದಿನಗಳು ಎದುರಾಗಿವೆ ಎಂದಿದ್ದಾರೆ.
ನಾವು ವಾಸ್ತವಾಂಶವನ್ನು ಪ್ರಾಧಿಕಾರದ ಮುಂದಿಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಮಳೆ ಕೊರತೆಯಿಂದಾಗಿ ಬೆಳೆಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರು ಬಿಡಲು ಆಗಿಲ್ಲ. ಕುಡಿಯಲು ನೀರು ಬೇಕಾಗುತ್ತದೆ ಎಂಬ ವಿಚಾರವನ್ನು ಪ್ರಾಧಿಕಾರಕ್ಕೆ ತಿಳಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನದಿ ನೀರು ಹಂಚಿಕೆ ಕುರಿತು ತಿಳಿಸಿದ್ದಾರೆ.