ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾಮದಲ್ಲಿ ರೈತರ ಗದ್ದೆಗಳಿಗೆ ಹೋಗುವ ಕಾಲುದಾರಿಯನ್ನು ಅತಿಕ್ರಮಣ ಮಾಡಿರುವುದನ್ನು ತಹಸೀಲ್ದಾರ್ ಶಂಕರ ಗೌಡಿ ಮಂಗಳವಾರ ತೆರವುಗೊಳಿಸಿದರು.
ಬಾಚಣಕಿ ಗ್ರಾಮದ ಸನಂ. 33ರಲ್ಲಿ ರೈತರ ಗದ್ದೆಗಳಿಗೆ ಹೋಗುವ ಕಾಲುದಾರಿಯಿದ್ದು, ಈ ದಾರಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದರು. ಇದರಿಂದ ಮುಂದಿನ ಗದ್ದೆಗಳಿಗೆ ಹೋಗುವ ರೈತರಿಗೆ ಸಮರ್ಪಕವಾದ ದಾರಿಯಿಲ್ಲದೆ ಪರದಾಡುವಂತಾಗಿತ್ತು. ಈ ಕುರಿತು ರೈತರು ತಹಸೀಲ್ದಾರ್ ಶಂಕರ ಗೌಡಿ ಅವರಿಗೆ ದೂರು ಸಲ್ಲಿಸಿದ್ದರು. ಪರಿಣಾಮವಾಗಿ ಮಂಗಳವಾರ ಪಿಎಸ್ಐ ಯಲ್ಲಾಲಿಂಗ ಕುನ್ನೂರ ಹಾಗೂ ಸಿಬ್ಬಂದಿಗಳ ಭದ್ರತೆಯ ನಡುವೆ ಬಾಚಣಕಿ ಗ್ರಾಮಕ್ಕೆ ತೆರಳಿ ರಸ್ತೆ ಒತ್ತುವರಿ ತೆರವು ಕಾರ್ಯ ನಡೆಸಿದರು.