ಶಿವಮೊಗ್ಗ: ರಾಜಕಾರಣದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಹಠ, ಛಲ ಮತ್ತು ಸ್ಪಷ್ಟ ಗುರಿ ಇದ್ದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಗೋಹತ್ಯೆ ನಿಷೇಧ ಮಾಡಿದ್ದಕ್ಕೆ ನಗರದಲ್ಲಿ ಭಾನá-ವಾರ ರೈತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಮುಂದಿನ ಎರಡೂವರೆ ವರ್ಷ ನಿರಂತರವಾಗಿ ಕೆಲಸ ಮಾಡಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕಿದೆ ಎಂದರು.
ಸಂಘ ಪರಿವಾರದ ಜಗನ್ನಾಥರಾವ್ ಜೋಶಿ, ಬಾಬೂರಾವ್ ದೇಶಪಾಂಡೆ ಸೇರಿ ಅನೇಕ ಹಿರಿಯರ ಪರಿಶ್ರಮದಿಂದ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. 35ರಿಂದ 40 ವರ್ಷಗಳ ಹಿಂದಿನಿಂದ ಪಕ್ಷ ಕಟ್ಟಿ ಬೆಳೆಸಲು ಕಾರಣಕರ್ತರಾದವರನ್ನು ನೋಡುವ ಮತ್ತು ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿದೆ. ಹಿರಿಯರ ನಿರೀಕ್ಷೆ ಮತ್ತು ಅಪೇಕ್ಷೆಗೆ ತಕ್ಕಂತೆ ಸರಿದಾರಿಯಲ್ಲಿ ನಡೆದು ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲಾಗುವುದು ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಮಾತನಾಡಿ, ಹತ್ತಾರು ವರ್ಷಗಳಿಂದ ಹಲವು ವಿಚಾರಧಾರೆಗಳ ನಡುವೆ ಗೋಹತ್ಯೆ ನಿಷೇಧ ಮಸೂದೆ ಜಾರಿಗೊಳಿಸಲಾಗಿದೆ. ಭೂಮಿ, ಹೆತ್ತವಳು ಹಾಗೂ ಗೋವು ಭಾರತೀಯರ ಮೂರು ಮಾತೆಯರು ಎಂಬುದನ್ನು ಆರ್ಎಸ್ಎಸ್ ಕಲಿಸಿದೆ. ಸಂಘದ ವಿಚಾರಧಾರೆಗಳನ್ನು ಪಾಲನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಗೋಹತ್ಯೆ ನಿಷೇಧ ಆಗಬೇಕೆಂಬುದು ಹಲವು ದಶಕಗಳ ಕನಸಾಗಿತ್ತು. ಅದನ್ನು ಬಿ.ಎಸ್.ಯಡಿಯೂರಪ್ಪ ಸಿಎಂ ಆಗುತ್ತಿದ್ದಂತೆ ಈಡೇರಿಸಿದ್ದಾರೆ. ಬಿಜೆಪಿ ವಿಶೇಷ ಸಭೆ ನಡೆಸುತ್ತಿರುವ ಸಂದರ್ಭದಲ್ಲಿ ಗೋಮಾತೆ ಮತ್ತು ಸಂಘ ಪರಿವಾರದ ಹಿರಿಯರನ್ನು ಸನ್ಮಾನಿಸಲಾಗುತ್ತಿದೆ. ಬಿಜೆಪಿಗೆ ಹಿರಿಯರ ಮಾರ್ಗದರ್ಶನ ಅಗತ್ಯವಿದ್ದು ಸರ್ವವ್ಯಾಪಿಯಾಗಿ ಪಕ್ಷ ಮತ್ತಷ್ಟು ಸಂಘಟನೆ ಆಗಬೇಕಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಚಾಲಕ ಎಂ.ಬಿ.ಭಾನುಪ್ರಕಾಶ್, ದೊಡ್ಡ ಅಡಿಗಲ್ಲಿನ ಮೇಲೆ ನಾವೆಲ್ಲರೂ ನಿಂತಿದ್ದೇವೆ. ಅಡಿಗಲ್ಲು ಇದೀಗ ಬೃಹತ್ ಸೌಧವಾಗಿ ಬೆಳೆದಿದೆ. ದೊಡ್ಡವರಾಗಿ ಬೆಳೆದ ಮೇಲೆ ಕೆಲವರಿಗೆ ಅಡಿಗಲ್ಲಿನ ನೆನಪು ಆಗಲ್ಲ. ಆದರೆ ಬಿಜೆಪಿ ಎಂದಿಗೂ ಆ ಕೆಲಸ ಮಾಡುವುದಿಲ್ಲ. ಸೌಧವನ್ನು ಅಲ್ಲಾಡಿಸುವ ಬದಲು ಮತ್ತಷ್ಟು ಗಟ್ಟಿಗೊಳಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕಿದೆ ಎಂದು ಹೇಳಿದರು.
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಚಿವರಾದ ಕೆ.ಎಸ್.ಈಶ್ವರಪ್ಪ, ಪ್ರಭು ಚೌಹಾಣ್, ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ, ಭಗವಂತ ಖೂಬಾ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಇದ್ದರು.