ನವದೆಹಲಿ: ಅನ್ನಭಾಗ್ಯಕ್ಕಾಗಿ ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವೆ ಉಂಟಾಗಿರುವ ಸಂಘರ್ಷ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಈ ನಿಟ್ಟಿನಲ್ಲಿ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ, ಭಾರತೀಯ ಆಹಾರ ನಿಗಮದ ಅಧಿಕಾರಿಗಳು ಜತೆಯಾಗಿ ತುರ್ತು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
ಇಂದು ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ (ಡಿಎಫ್ಪಿಡಿ) ಕಾರ್ಯದರ್ಶಿ ಸಂಜೀವ್ ಚೋಪ್ರಾ ಮತ್ತು ಭಾರತೀಯ ಆಹಾರ ನಿಗಮದ ಸಿಎಂಡಿ ಅಶೋಕ್ ಕುಮಾರ್ ಮೀನಾ ಜಂಟಿ ಸುದ್ದಿಗೋಷ್ಠಿ ನಡೆಸಿ ಕೆಲವು ಸ್ಪಷ್ಟನೆಗಳನ್ನು ನೀಡಿದರು.
ಅಕ್ಕಿ ವಿತರಣೆಗೆ ಸಂಬಂಧಿಸಿದಂತೆ ದೇಶದಲ್ಲಿ ತಪ್ಪು ಸಂದೇಶ ರವಾನೆಯಾಗುತ್ತಿದೆ. ಈ ನಿಟ್ಟಿನಲ್ಲಿ ತುರ್ತು ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಬೇಕಾಗಿ ಬಂದಿದೆ ಎಂದು ಡಿಎಫ್ಪಿಡಿ ಕಾರ್ಯದರ್ಶಿ ಹೇಳಿದರು. ಅಕ್ಕಿಯ ವಿಚಾರದಲ್ಲಿ ನಾವು ಯಾವಾಗಲೂ ಇಡೀ ದೇಶದ 140 ಕೋಟಿ ಜನರ ಹಿತವನ್ನು ನೋಡಿ ನಿರ್ಧರಿಸುತ್ತೇವೆ ಹೊರತು ಯಾವುದೇ ಒಂದು ವರ್ಗ/ರಾಜ್ಯದ ಹಿತಾಸಕ್ತಿಯಿಂದ ನಿರ್ಧಾರ ತಳೆಯವುದಿಲ್ಲ ಎಂದರು.
ಇದನ್ನೂ ಓದಿ: ಸದನದಲ್ಲಿ ಪ್ರತಿಧ್ವನಿಸಿದ ‘ವಿಜಯವಾಣಿ’ ವರದಿ; ಕುವೆಂಪು ವಿವಿ ಕರ್ಮಕಾಂಡ ತನಿಖೆಗೆ ಆಗ್ರಹ
ದೇಶದಲ್ಲಿ ಈಗಾಗಲೇ 2 ವರ್ಷಗಳಿಂದ ಅಕ್ಕಿಯ ಕೊರತೆ ಇದೆ. ಹವಾಮಾನ ವೈಪರೀತ್ಯದಿಂದಾಗಿ ಬರುವ ಅಕ್ಕಿಯೂ ಕಡಿಮೆ ಇರಲಿದೆ. ಇನ್ನು ಗೋಧಿಯ ಕೊರತೆ ಕೂಡ ಇರುವುದರಿಂದ ಗೋಧಿ ಬದಲಿಗೆ ಅಕ್ಕಿ ನೀಡಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಅಕ್ಕಿಯ ಕೊರತೆ ಜಾಸ್ತಿ ಇದೆ. ಹೀಗಿರುವಾಗ ಇರುವ ದಾಸ್ತಾನನ್ನು ನಾವು ಚಿಲ್ಲರೆ ಮಾರಾಟದ ದರ ಹೊಂದಾಣಿಕೆಗಾಗಿ ಬಳಸಬೇಕೋ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಎಜಿಕೆವೈ)ಗೆ ಬಳಸಬೇಕೇ? ಎಂದು ಪ್ರಶ್ನಿಸಿದ ಅವರು, ಸದ್ಯದ ದಾಸ್ತಾನು ಬಳಕೆಗೆ ದೇಶದ 140 ಕೋಟಿ ಜನರ ಹಿತಾಸಕ್ತಿ ಹಿನ್ನೆಲೆಯಲ್ಲಿ ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಒಂದು ವರ್ಷದ ಅಂತರ.. ಅದೇ ಜಾಗ.. ಒಂದೇ ಥರದಲ್ಲಿ ಸಂಬಂಧಿಕರಿಬ್ಬರ ಸಾವು!
ಇದೇ ವಿಚಾರವಾಗಿ ಇತ್ತೀಚೆಗೆ 17 ರಾಜ್ಯಗಳ ಆಹಾರ ಸಚಿವರ ಸಭೆ ನಡೆಸಲಾಗಿದ್ದು, ಅಲ್ಲಿ ಒಂದು ರಾಜ್ಯ ಹೊರತಾಗಿ ಬೇರೆ ಎಲ್ಲ ರಾಜ್ಯಗಳ ಸಚಿವರು ಇದಕ್ಕೆ ಒಪ್ಪಿದ್ದಾರೆ ಎಂದು ಅವರು ಕರ್ನಾಟಕ ಎಂಬುದನ್ನು ಹೆಸರಿಸದೇ ಉಲ್ಲೇಖಿಸಿದರು. ಹದಿನೇಳು ರಾಜ್ಯಗಳ ಪೈಕಿ ಅರುಣಾಚಲಪ್ರದೇಶ, ಅಸ್ಸಾಂ, ಬಿಹಾರ್, ಜಾರ್ಖಂಡ್, ಒಡಿಶಾ, ತಮಿಳುನಾಡು, ಉತ್ತರಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಗುಜರಾತ್, ಆಂಧ್ರಪ್ರದೇಶ, ಪುದುಚೇರಿ, ನಾಗಲ್ಯಾಂಡ್, ಮಣಿಪುರ, ಮಹಾರಾಷ್ಟ್ರ, ಹರ್ಯಾಣಗಳ ಸಚಿವರು ಪ್ರಸಕ್ತ ನಿರ್ಧಾರಕ್ಕೆ ಒಪ್ಪಿದ್ದಾರೆ ಎಂದರು.
ಒಂದೇ ಹಗ್ಗದಲ್ಲಿ ಕೊನೆಯಾಯ್ತು ಯೋಧನ ಪತ್ನಿ-ಪುತ್ರಿಯ ಬದುಕು: ಮಗಳೊಂದಿಗೆ ನೇಣು ಬಿಗಿದುಕೊಂಡ ತಾಯಿ!