ನವದೆಹಲಿ: ವಿಮಾನ ನಿಲ್ದಾಣದಲ್ಲಿ ನಟಿ ಹಾಗೂ ನೃತ್ಯಕಲಾವಿದೆ ಸುಧಾ ಚಂದ್ರನ್ ಅವರಿಗೆ ಉಂಟಾದ ಅನಾನುಕೂಲಕ್ಕಾಗಿ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್(ಸಿಐಎಸ್ಎಫ್) ಕ್ಷಮೆ ಕೋರಿದೆ. ಈ ಬಗ್ಗೆ ಕೇಂದ್ರೀಯ ಭದ್ರತಾ ಪಡೆಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೇಳಿಕೆ ನೀಡಿದ್ದು, ಸಂಬಂಧಪಟ್ಟ ಮಹಿಳಾ ಅಧಿಕಾರಿಯು ಏತಕ್ಕಾಗಿ ಸುಧಾರ ಕೃತಕ ಕಾಲನ್ನು ತೆಗೆಸಿದರು ಎಂದು ಪರಿಶೀಲಿಸುವುದಾಗಿ ಹೇಳಿದೆ.
ಅಪಘಾತದಿಂದಾಗಿ ಕಾಲು ಕಳೆದುಕೊಂಡ ಸುಧಾ ಚಂದ್ರನ್, ಪ್ರಾಸ್ಥೆಟಿಕ್ ಲಿಂಬ್ ಅರ್ಥಾತ್ ಕೃತಕ ಕಾಲಿನ ಸಹಾಯದಿಂದ ನೃತ್ಯ ಮತ್ತು ನಟನೆಯ ಬದುಕಿಗೆ ಮರಳಿ ಇತಿಹಾಸ ರಚಿಸಿದವರು. ಆದರೆ ಪ್ರತಿ ಬಾರಿ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಅಧಿಕಾರಿಗಳು ತಮ್ಮ ಕೃತಕ ಕಾಲನ್ನು ಬಿಚ್ಚಿ ತೋರಿಸಲು ಕೇಳುತ್ತಾರೆ. ಇದರಿಂದ ಹಿಂಸೆ ಮತ್ತು ನೋವುಂಟಾಗುತ್ತಿದೆ ಎಂದು ಸುಧಾ ಗುರುವಾರ ಸಂಜೆ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಸಂದೇಶ ಪೋಸ್ಟ್ ಮಾಡಿದ್ದರು.
View this post on Instagram
“ನನ್ನ ಕಾಲಿನ ಮೇಲೆ ಇಟಿಡಿ ಪರೀಕ್ಷೆ(ಸ್ಫೋಟಕ ವಸ್ತು ಪತ್ತೆ ಮಾಡುವ ಪರೀಕ್ಷೆ) ಮಾಡಿ ಎಂದು ಎಷ್ಟು ಮನವಿ ಮಾಡಿದರೂ ಸಿಐಎಸ್ಎಫ್ ಅಧಿಕಾರಿಗಳು ಕೇಳುವುದಿಲ್ಲ. ಪ್ರಧಾನಿ ಮೋದಿಯವರೇ, ದೇಶದಲ್ಲಿ ಏನು ನಡೆಯುತ್ತಿದೆ ನೋಡಿ. ಇದು ಒಬ್ಬ ಮಹಿಳೆ ಮತ್ತೊಬ್ಬ ಮಹಿಳೆಯನ್ನು ನಡೆಸಿಕೊಳ್ಳುವ ರೀತಿಯೇ?” ಎಂದು ಭಾವುಕವಾಗಿ ಪ್ರಶ್ನಿಸಿದ್ದರು. ಸುಧಾರ ಈ ಪೋಸ್ಟ್ ಮಾಧ್ಯಮದಲ್ಲಿ ಮತ್ತು ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಈ ವಿಚಾರದಲ್ಲಿ ಸ್ಪಷ್ಟನೆ ನೀಡಿರುವ ಸಿಐಎಸ್ಎಫ್, ಶ್ರೀಮತಿ ಸುಧಾ ಚಂದ್ರನ್ ಅವರಿಗಾದ ಅನಾನುಕೂಲಕ್ಕೆ ‘ಸಾರಿ’ ಹೇಳಿದೆ.
We will examine why the lady personnel concerned requested Ms. Sudhaa Chandran to remove the prosthetics. We assure Ms.Sudhaa Chandran that all our personnel will be sensitised again on the protocols so that no inconvenience is caused to travelling passengers. 2/2
— CISF (@CISFHQrs) October 22, 2021
“ಪ್ರೋಟೋಕಾಲ್ ಪ್ರಕಾರ ಅಸಾಮಾನ್ಯ ಪರಿಸ್ಥಿತಿಗಳಲ್ಲಿ ಮಾತ್ರ ಪ್ರೋಸ್ಥೆಟಿಕ್ಸ್ಅನ್ನು ಪರಿಶೀಲನೆಗಾಗಿ ತೆಗೆಸಲಾಗುತ್ತದೆ. ಸಂಬಂಧಿತ ಮಹಿಳಾ ಅಧಿಕಾರಿಯು ಏತಕ್ಕಾಗಿ ಸುಧಾ ಅವರನ್ನು ಪ್ರೋಸ್ಥೆಟಿಕ್ಸ್ ತೆಗೆಯಲು ಕೇಳಿಕೊಂಡರು ಎಂಬುದನ್ನು ನಾವು ಪರಿಶೀಲಿಸುತ್ತೇವೆ. ಇನ್ನು ಮುಂದೆ ಯಾವುದೇ ಪ್ರಯಾಣಿಕರಿಗೆ ಈ ರೀತಿಯ ಅನಾನುಕೂಲವಾಗದಂತೆ ನಮ್ಮ ಸಿಬ್ಬಂದಿಯನ್ನು ಮತ್ತೆ ಸೆಂಸಿಟೈಸ್ ಮಾಡಲಾಗುವುದು” ಎಂದು ಸಿಐಎಸ್ಎಫ್ ಹೇಳಿದೆ. (ಏಜೆನ್ಸೀಸ್)
‘ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ’ ಎಂದ ಮಾಜಿ ಸಿಎಂ
ರಸ್ತೆ ಗುಂಡಿಗಳ ವಿರುದ್ಧ ಎಎಪಿ ಕಾರ್ಯಪಡೆ, ವಾಟ್ಸಾಪ್ ಸಹಾಯವಾಣಿ