| ಮಂಜು ಕೊಟಗುಣಸಿ ಬೆಂಗಳೂರು
ಗಡಿಯಲ್ಲಿ ಉಗ್ರರ ವಿರುದ್ಧ ಹೋರಾಡಿದ ಆತ, ಸೇನೆಯಿಂದ ನಿವೃತ್ತನಾಗುತ್ತಾನೆ. ಹಾಗಂತ ತನ್ನ ಕೆಲಸ ಮುಗಿಯಿತೆಂದು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಗಡಿಯ ಹೊರಗಿನ ಉಗ್ರರನ್ನು ಸದೆಬಡಿದಂತೆ ದೇಶದೊಳಗಿನ ದುಷ್ಟರ ಸಂಹಾರಕ್ಕೂ ಪ್ರಯತ್ನಿಸುತ್ತಾನೆ. ಚಾಣಾಕ್ಷತನದಿಂದ ಕುಳಿತಲ್ಲಿಯೇ ಒಂದೊಂದೇ ಪ್ರಕರಣ ಬೇಧಿಸುತ್ತಾನೆ. ಈ ಆಂತರಿಕ ಹೋರಾಟವನ್ನು ಆತ ಹೇಗೆ ನಿಭಾಯಿಸುತ್ತಾನೆ, ಅದರಲ್ಲಿ ಆತ ಜಯಿಸುತ್ತಾನೆಯೇ? ಆ ರೋಚಕ ಕಹಾನಿಯೇ ‘ರಾಜತಂತ್ರ’!
ಇಡೀ ಸಿನಿಮಾದಲ್ಲಿ ಪ್ರಸ್ತುತ ಸ್ಥಿತಿಗತಿಯ ಆಳವನ್ನು ತೋರಿಸುವ ಕೆಲಸವನ್ನು ನಿರ್ದೇಶಕರು ಮಾಡಿದ್ದಾರೆ. ಭ್ರಷ್ಟ ರಾಜಕೀಯ ವ್ಯವಸ್ಥೆಯಿಂದ ಹಿಡಿದು, ಡ್ರಗ್ ಮಾಫಿಯಾ, ಭಯೋತ್ಪಾದನೆ, ಅಕ್ರಮ ಗಣಿಗಾರಿಕೆ, ಚಿನ್ನ, ಗನ್ ಸಾಗಾಟ ಹೀಗೆ ಹಲವು ಆಯಾಮಗಳನ್ನು ಚಿತ್ರದಲ್ಲಿ ಬೆರೆಸಿದ್ದಾರೆ. ಇವೆಲ್ಲದರ ಜತೆಗೆ ಡ್ರಗ್ ಪೆಡ್ಲರ್ ಆಗಿರುವ ಯುವಕನಿಗೆ ಸೇನೆಯ ಕಡೆ ಒಲವು ಮೂಡಿಸುವುದು, ಸಮೃದ್ಧ ಕೃಷಿ ಜಮೀನು ಕಳೆದುಕೊಂಡು ಮಾಫಿಯಾದ ಕೈಗೊಂಬೆಯಾದವನನ್ನು ಮರಳಿ ಕೃಷಿಯತ್ತ ಕಳುಹಿಸುವುದು ಹೀಗೆ ಹಲವು ಸ್ತರಗಳನ್ನೂ ಚಿತ್ರದಲ್ಲಿ ಟಚ್ ಮಾಡಿದ್ದಾರೆ ನಿರ್ದೇಶಕರು. ಸಾಮಾಜಿಕ ಕಳಕಳಿಯೇ ಈ ಚಿತ್ರದ ಪ್ರಧಾನ ಅಂಶವಾಗಿರುವುದರಿಂದ, ಅದರ ಹಿನ್ನೆಲೆಯಲ್ಲಿಯೇ ಕಥೆ ಸುತ್ತುತ್ತದೆ.
ನಿವೃತ್ತ ಆರ್ವಿು ಅಧಿಕಾರಿ ಕ್ಯಾಪ್ಟನ್ ರಾಜಾರಾಮ್ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಹೆಚ್ಚು ಕಷ್ಟಪಡದೆ ಸಲೀಸಾಗಿ ಪಾತ್ರವನ್ನು ಪೋಷಣೆ ಮಾಡಿದ್ದಾರೆ. ವಿಶೇಷ ಏನೆಂದರೆ, ಅವರನ್ನೇ ಗಮನದಲ್ಲಿಟ್ಟುಕೊಂಡು ಈ ಕಥೆ ಹೆಣೆಯಲಾಗಿರುವುದರಿಂದ ಅವರ ಇಮೇಜ್ಗೆ ಮತ್ತು ಸದ್ಯದ ದೈಹಿಕ ಸ್ಥಿತಿಗೆ ಎಲ್ಲಿಯೂ ಚ್ಯುತಿ ಬರದಂತೆ ನಿರ್ದೇಶಕ ಪಿವಿಆರ್ ಸ್ವಾಮಿ ಗೊಗರದೊಡ್ಡಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಆಂತರಿಕ ಯುದ್ಧದಲ್ಲಿ ಚಾಣಾಕ್ಷ ಚದುರಂಗದ ಆಟಗಾರನಂತೆ ರಾಜತಂತ್ರದಲ್ಲಿ ರಾಘಣ್ಣ ಗೋಚರಿಸುತ್ತಾರೆ.
ಕುತೂಹಲಕರವಾಗಿಯೇ ನೋಡಿಸಿಕೊಂಡು ಹೋಗುವ ಕಥೆಯನ್ನು ಜೆ.ಎಂ ಪ್ರಹ್ಲಾದ್ ಸೊಗಸಾಗಿಯೇ ಬರೆದಿದ್ದಾರೆ ನಿಜ. ಆದರೆ, ಆ ಕಥೆಗೆ ತಕ್ಕಂತೆ ಮೇಕಿಂಗ್ ಬಡವಾಗಿದೆ. ಎಲ್ಲವೂ ಅಸಹಜ ಎನ್ನುವಂತೆ ಭಾಸವಾಗುತ್ತದೆ. ಇನ್ನುಳಿದಂತೆ ಹಿಂದೆಂದೂ ಕಾಣಿಸಿದ ರೀತಿಯಲ್ಲಿ ರಾಘವೇಂದ್ರ ರಾಜಕುಮಾರ್ ಎನರ್ಜಿಟಿಕ್ ಆಗಿ ‘ರಾಜತಂತ್ರ’ದಲ್ಲಿ ಕ್ಯಾಪ್ಟನ್ ಪಾತ್ರ ಮಾಡಿದ್ದಾರೆ. ಭ್ರಷ್ಟ ರಾಜಕಾರಣಿಯಾಗಿ ಹಿರಿಯ ನಟ ದೊಡ್ಡಣ್ಣ ಇಡೀ ಚಿತ್ರವನ್ನು ತೂಗಿಸಿಕೊಂಡು ಹೋಗಿದ್ದಾರೆ. ಉಳಿದಂತೆ ಬಹುತೇಕ ಹೊಸ ಪ್ರತಿಭೆಗಳನ್ನೇ ನಿರ್ದೇಶಕರು ಆಯ್ದುಕೊಂಡು ಅವರಿಂದಲೇ ನಟನೆ ಅಭಿವ್ಯಕ್ತಿಸಿದ್ದಾರೆ.
- ಚಿತ್ರ: ರಾಜತಂತ್ರ
- ನಿರ್ಮಾಣ: ವಿಶ್ವಂ ಡಿಜಿಟಲ್ ಮೀಡಿಯಾ
- ನಿರ್ದೇಶನ: ಪಿವಿಆರ್ ಸ್ವಾಮಿ ಗೊಗರದೊಡ್ಡಿ
- ತಾರಾಗಣ: ರಾಘವೇಂದ್ರ ರಾಜಕುಮಾರ್, ದೊಡ್ಡಣ್ಣ, ಭವ್ಯಾ, ನೀನಾಸಂ ಅಶ್ವತ್ಥ