ಚಿತ್ರದುರ್ಗ: ನಗರದ ಮೆದೇಹಳ್ಳಿ ರಸ್ತೆ ಅಯ್ಯಪ್ಪ ದೇವಾಲಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ 20ನೇ ವರ್ಷದ ಲಕ್ಷ ದೀಪೋತ್ಸವಕ್ಕೆ ತುಮಕೂರು ಶ್ರೀ ಅಯ್ಯಪ್ಪ ಸೇವಾ ಸಮಾಜಂ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ.ಶೇಖರ್ ಚಾಲನೆ ನೀಡಿದರು.
ಶಬರಿಮಲೆಯಲ್ಲಿ ಜ್ಯೋತಿ ದರ್ಶನದ ಮಾಹಿತಿ ತಿಳಿಯುತ್ತಿದ್ದಂತೆ ದೇವಾಲಯ ಮುಖ್ಯ ಸತೀಶ್ ಶರ್ಮಾ ಸಮ್ಮುಖದಲ್ಲಿ ಶೇಖರ್ ದೀಪ ಬೆಳಗಿಸಿದರು.
ಈ ವೇಳೆ ಮಾತನಾಡಿದ ಅವರು, ನಮ್ಮ ಧರ್ಮ, ಆಚರಣೆಗಳಿಗೆ ಕಾನೂನಿಂದ ತೊಡಕು ಆಗಬಾರದು. ಶಬರಿ ಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಕುರಿತ ವಿವಾದ ವಿವರಿಸಿದ ಅವರು, ಆಚರಣೆಗೆ ತೊಂದರೆ ಆದಾಗ ಕೇರಳದಲ್ಲಿ ಲಕ್ಷಾಂತರ ಅಯ್ಯಪ್ಪ ಸ್ವಾಮಿ ಭಕ್ತರು ಪ್ರತಿಭಟನೆ ನಡೆಸಿದರು. ಸಂಪ್ರದಾಯ ರಕ್ಷಣೆಗೆ ಶಬರಿ ಮಲೆ ಆಕ್ಷನ್ ಕೌನ್ಸಿಲ್ ರಚಿಸಲಾಗಿದೆ. ನಮ್ಮ ಸಮಾಜಂ ಕೂಡ ಕೈ ಜೋಡಿಸಿದೆ ಎಂದರು.
ನಗರದ ಹಿಂದು ಗಣಪತಿ ಸಮಿತಿ ಅಧ್ಯಕ್ಷ ಟಿ.ಬದ್ರಿನಾಥ್ ಮಾತನಾಡಿ, ಕಷ್ಟಗಳು ಎದುರಾದಾಗ ನಾವು ದೇವರ ಮೊರೆ ಹೋಗುತ್ತೇ ವೆ. ಆದರೆ, ದೇವರಿಗೆ ಅಸುರ ಶಕ್ತಿಗಳಿಂದ ತೊಂದರೆ ಆದಾಗ ಅದನ್ನು ಸಂಘಟಿತವಾಗಿ ನಾವೆಲ್ಲರೂ ಎದುರಿಸಬೇಕಿದೆ ಎಂದು ತಿಳಿಸಿದರು.
ಐತಿಹಾಸಿಕ ನಗರದಲ್ಲಿ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಈ ದೀಪೋತ್ಸವ ಕಾರ್ಯಕ್ರಮವನ್ನು ದಿ ಮರ್ಚೆಂಟ್ ಸೌಹಾರ್ದ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಲಕ್ಷ್ಮೀಕಾಂತ ರೆಡ್ಡಿ ಶ್ಲಾಘಿಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಟಿ.ಮಹಾಂತೇಶ್, ಗ್ರಾಪಂ ಅಧ್ಯಕ್ಷ ಉಜ್ಜಿನಿ ಸ್ವಾಮಿ, ದೇವರಾಜ ಅರಸು ಎಜಕೇಷನಲ್ ಸೊಸೈಟಿ ಸಿಇಒ ಎಂ.ಸಿ.ರಘುಚಂದನ್, ಡಾ.ಜಿ.ಸಿದ್ದಾರ್ಥ, ವೀರಶೈವ ಸಮಾಜದ ಅಧ್ಯಕ್ಷ ಎನ್.ಜಯಣ್ಣ, ಉದ್ಯಮಿಗಳಾದ ಯೋಗಿರಾಜ್,ಬಾಬುಲಾಲ್ ನಾಗರ್, ಪಟೇಲ್ ಶಿವಕುಮಾರ್ ಮತ್ತಿತರರು ಇದ್ದರು.
ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಶರಣಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಾವಿರಾರು ಭಕ್ತರು ಸರತಿಯಲ್ಲಿ ನಿಂತು ಸ್ವಾಮಿ ದರ್ಶನ ಪಡೆದರು.