ಚಿತ್ರದುರ್ಗ:ಬೆಂಗಳೂರು ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಲಕ್ಷಾಂತರ ರೂ.ಮೌಲ್ಯದ ನಗ ಮತ್ತು ನಗದು ಕಳವು ಮಾಡಿ ಬೆಂಗಳೂರಿಂದ ಮುಂಬಯಿಗೆ ಪರಾರಿಯಾಗಲು ಯತ್ನಿಸಿದ್ದ ಆರೋಪಿಗಳಿಬ್ಬರನ್ನು ಚಿತ್ರದುರ್ಗ ಪೊಲೀಸರು, ಕೃತ್ಯ ನಡೆದ ಕೆಲವು ಗಂಟೆಗಳಲ್ಲಿ ವಶಕ್ಕೆ ಪಡೆಯವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ನೀಲಸಂದ್ರದ ಮನೆಯೊಂದರಲ್ಲಿ ಮಂಗಳವಾರ,50 ಲಕ್ಷ ರೂ.ನಗದು ಹಾಗೂ ಅಂದಾಜು 11 ಲಕ್ಷ ರೂ.ಮೌಲ್ಯದ ಬಂಗಾರದೊಡವೆ ಕಳವು ಮಾಡಿಕೊಂಡು ಖಾಸಗಿ ಬಸ್ಸಿನಲ್ಲಿ ಮುಂಬಯಿಗೆ ಪ್ರಯಾಣಿಸುತ್ತಿದ್ದ ಬೆಂಗಳೂರು ಮೂಲದ ಆರೋಪಿಗಳಿಬ್ಬ ರನ್ನು ಚಿತ್ರದುರ್ಗದಲ್ಲಿ ಬುಧವಾರ ಬೆಳಗಿನ ಜಾವ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೃತ್ಯದ ಕುರಿತಂತೆ ದೂರು ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿಯ ಜಾಡು ಹಿಡಿದು ಕೂಡಲೇ ಆರೋಪಿಗಳ ಬೆನ್ನು ಬಿದ್ದಿದ್ದ ಅ ಶೋಕನಗರ ಪೊಲೀಸರು,ಖಾಸಗಿ ಬಸ್ಸಿನ ಚಾಲಕನಿಗೆ ದೂರವಾಣಿ ಕರೆ ಮಾಡಿ ಕೂಡಲೇ ಸಮೀಪದ ಠಾಣೆ ಬಳಿ ಬಸ್ಸು ನಿಲ್ಲಿಸುವಂತೆ ಸೂಚಿಸಿ,ಚಿತ್ರದುರ್ಗ ಪೊಲೀಸರಿಗೂ ಮಾಹಿತಿ ಕೊಟ್ಟಿದ್ದಾರೆ.
ಅವರ ಸೂಚನೆಯಂತೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಬಳಿ ಚಾಲಕ ಬಸ್ಸನ್ನು ನಿಲ್ಲಿಸುತ್ತಿದ್ದಂತೆ ಕಾರ್ಯಾಚರಣೆಗಿಳಿದ ಪಿಐ ಸುನೀಲ್ ಕುಮಾರ್ ನೇತೃತ್ವದ ಗ್ರಾಮಾಂತರ ಠಾಣೆ ಪೊಲೀಸರ ತಂಡ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು ಅಶೋಕ ನಗರ ಪೊಲೀಸರಿಗೆ ಒಪ್ಪಿ ಸಿದೆ.ಹಿರಿಯೂರು ಡಿವೈಎಸ್ಪಿ ಎಸ್.ಚೈತ್ರಾ ಕಾರ್ಯಾಚರಣೆಯಲ್ಲಿ ಇದ್ದರು.