ಚಿತ್ರದುರ್ಗ: ಸಮಯ ಪಾಲನೆ ಹಾಗೂ ತರಗತಿ ನಿರ್ವಹಣೆ ಕೌಶಲವನ್ನು ಶಿಕ್ಷಕರು ಮೈಗೂಡಿಸಿಕೊಳ್ಳಬೇಕು ಎಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ತಿಳಿಸಿದರು.
ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ಪ್ರೌಢಶಾಲೆ ಇಂಗ್ಲಿಷ್ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ದಲ್ಲಿ ಮಾತನಾಡಿದರು.
ತರಗತಿಯಲ್ಲಿ ನಿರ್ಬಂಧ, ಸ್ವಾತಂತ್ರ್ಯ ಎರಡೂ ಮಿತಿಯಲ್ಲಿರಬೇಕು. ಕಲಿಕೆ ವಾತಾವರಣವನ್ನು ಶಿಕ್ಷಕರೇ ನಿರ್ಮಿಸಬೇಕು ಎಂದರು.
ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದರೆ ಅದು ಅವರ ತಪ್ಪಲ್ಲ. ಪಾಠ ಮಾಡುವ ಶಿಕ್ಷಕರು ಪರಾಮರ್ಶೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮಕ್ಕಳ ಬಗ್ಗೆ ನಕಾರಾತ್ಮಕವಾಗಿ ಮಾತನಾಡಬೇಡಿ ಎಂದು ತಿಳಿಸಿದರು.
ಯಾವುದೇ ಭಾಷೆ ಶಿಕ್ಷಕರಾಗಲಿ, ಅವರು ಭಾಷೆ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರಬೇಕು. ಶಿಕ್ಷಕರು ಒಂದು ವಿಷಯದಲ್ಲಿ ನಿಪುಣರಾದರೆ, ವಿದ್ಯಾರ್ಥಿಗಳು ಕೂಡ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.
ಜಿಪಂ ಸಿಇಒ ಸಿ.ಸತ್ಯಭಾಮಾ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ನಿತ್ಯ ಇಂಗ್ಲಿಷ್ ಕಲಿಸಿದರೆ ಭಾಷೆ ಮೇಲಿನ ಭಯ ದೂರವಾಗುತ್ತದೆ. ಜತೆಗೆ ನಿತ್ಯ ಪತ್ರಿಕೆ ಓದುವುದನ್ನು ರೂಢಿಸಬೇಕು ಎಂದು ಹೇಳಿದರು.
ಗ್ರಾಮೀಣ ಮಕ್ಕಳು ಹಿಂಜರಿಕೆ ಸ್ವಭಾವ ಬಿಟ್ಟು ಇಂಗ್ಲಿಷ್ ಮಾತನಾಡಬೇಕು. ಮಕ್ಕಳು ತಪ್ಪು ಮಾಡಿದಾಗ ಶಿಕ್ಷಕರು ತಪ್ಪು ತಿದ್ದುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಕೆ.ಅನಂತ್, ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ, ರೋಟರಿ ಕ್ಲಬ್ ಅಧ್ಯಕ್ಷ ಪಿ.ಬಿ.ಶಿವರಾಮ್, ಚಿತ್ರದುರ್ಗ ಫೋರ್ಟ್ ರೋಟರಿ ಕ್ಲಬ್ ಅಧ್ಯಕ್ಷ ಸಿ.ಎಸ್.ಶಿವಕುಮಾರ್, ವನಿತಾ ಶಂಕರಮೂರ್ತಿ ಉಪಸ್ಥಿತರಿದ್ದರು.