ಚಿತ್ರದುರ್ಗ: ನಗರದ ಭೋವಿ ಗುರುಪೀಠದಲ್ಲಿ ಗುರುವಾರ ರಾಜರ್ಷಿ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮ ಸಾನ್ನಿಧ್ಯ ವಹಿಸಿದ್ದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವ ಬಂದಿದೆ, ರಾಜರ್ಷಿ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಮತ್ತೊಮ್ಮೆ ಹುಟ್ಟಿಬಂದರೆ ರಾಜಪ್ರಭುತ್ವವೇ ಬರಲಿ ಅನ್ನಿಸುವಂಥ ಆಡಳಿತವನ್ನು ಕೊಟ್ಟಿದ್ದಾರೆ ಎಂದು ತಿಳಿಸಿದರು.
ಸಮಾಜಮುಖಿ ಕಾರ್ಯಗಳಿಗೆ ಅವರಿಗೆ ಅವರೇ ಸರಿಸಾಟಿ. ಅವರಿಂದಾಗಿ ಶೋಷಿತರಿಗೆ ಅಕ್ಷರ ಸ್ವಾತಂತ್ರೃ ಲಭ್ಯವಾಯಿತು. ಮೀಸಲು ಸೌಲಭ್ಯದೊಂದಿಗೆ ಶೋಷಿತರ ಅಭಿವೃದ್ಧಿಗೆ ಕಾರಣರಾದರು. ಅನೇಕ ಸಾಮಾಜಿಕ ಅನಿಷ್ಠಗಳನ್ನು ತೊಡೆದು ಹಾಕಲು ಕಾಯ್ದೆಗಳನ್ನು ಜಾರಿಗೊಳಿಸಿದ ಮಹಾತ್ಮರು ಎಂದು ಬಣ್ಣಿಸಿದರು.
ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ, ಭೋವಿ ಮಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ನಿರ್ದೇಶಕ ಮೋಹನ್, ಭೋವಿ ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿ ಎಚ್.ಲಕ್ಷ್ಮಣ್, ಪ್ರಮುಖರಾದ ಮಂಜುನಾಥ್, ಕಾಳಘಟ್ಟ ಹನುಮಂತಪ್ಪ, ಚಂದ್ರಪ್ಪ, ಷಣ್ಮುಖಪ್ಪ, ಇಂಜಿನಿಯರ್ ಗೋಪಾಲ್ ಮತ್ತಿತರರು ಇದ್ದರು.