ಚಳ್ಳಕೆರೆ: ಲಾಕ್ಡೌನ್ನಿಂದ ಆರ್ಥಿಕ ಸಮಸ್ಯೆಗೆ ಒಳಗಾಗಿರುವ ಗ್ರಾಮೀಣ ಭಾಗದ ಜಾನಪದ ಕಲಾವಿದರಿಗೆ ಸರ್ಕಾರ ಧನ ಸಹಾಯ ಮಾಡಬೇಕೆಂದು ಜಾನಪದ ಸಾಹಿತ್ಯ ಮತ್ತು ಗ್ರಾಮೀಣಾಭಿವೃದ್ಧಿ ಶಿಕ್ಷಣ ಟ್ರಸ್ಟ್ನ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ತಾಲೂಕು ಕಚೇರಿ ಶಿರಸ್ತೇದಾರ್ ಮಂಜುನಾಥ ಅವರಿಗೆ ಬುಧವಾರ ಮನವಿ ಸಲ್ಲಿಸಿದ ಪದಾಧಿಕಾರಿಗಳು, ಜಿಲ್ಲೆಯಲ್ಲಿ ವೃತ್ತಿನಿರತ ರಂಗಭೂಮಿ ಕಲಾವಿದರು ಸೇರಿ ತಮಟೆ, ಉರುಮೆ, ಗೊರವರ ಕುಣಿತ, ಬೀದಿ ನಾಟಕ ನೂರಾರು ಜಾನಪದ ಕಲಾವಿದರ ಬದುಕಿನ ನಿರ್ವಹಣೆ ಕಷ್ಟವಾಗಿದೆ.
ಹಿರಿಯ ಕಲಾವಿದರಿಗೂ ಇದುವರೆಗೂ ಸರ್ಕಾರದಿಂದ ಕೆಲ ಸೌಲಭ್ಯಗಳು ಸಿಕ್ಕಿಲ್ಲ. ಮಾಸಾಶನ ಸೌಲಭ್ಯ ಕೂಡ ದಕ್ಕುತ್ತಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲೆಯ ಕಲಾವಿದರನ್ನು ಗುರುತಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.
ಟ್ರಸ್ಟ್ ಅಧ್ಯಕ್ಷ ನಗರಂಗೆರೆ ಶ್ರೀನಿವಾಸ್, ರಾಜಪರಶುರಾಮನಾಯಕ, ಟಿ.ರಾಜು, ಎಂ.ಸಿ.ತಿಪ್ಪೇಸ್ವಾಮಿ, ಲಿಂಗರಾಜು ಇದ್ದರು.