ಚಿತ್ರದುರ್ಗ: ಕರೊನಾ ಸೋಂಕು ಹಿನ್ನೆಲೆಯಲ್ಲಿ ನಗರದ ಕೋವಿಡ್ ಆಸ್ಪತ್ರೆ ದಾಖಲಾಗಿ ಚೇತರಿಸಿಕೊಂಡಿರುವ ಇಬ್ಬರನ್ನು ಗುರುವಾರ ಡಿಸ್ಚಾರ್ಜ್ ಮಾಡಲಾಗಿದೆ.
ಚೆನ್ನೈನಿಂದ ಉತ್ತರ ಪ್ರದೇಶಕ್ಕೆ ಈಚರ್ ವಾಹನದಲ್ಲಿ ವಲಸೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಚಾಲಕ (1630) ಹಾಗೂ ಮುಂಬೈನಿಂದ ಚಿತ್ರದುರ್ಗಕ್ಕೆ ಆಗಮಿಸಿದ್ದ ಮಹಿಳೆಯನ್ನು (ಪಿ-2895) ಆಸ್ಪತ್ರೆಗೆ ದಾಖಲಿಸಿದ್ದು, ಅವರನ್ನೀಗ ಬಿಡುಗಡೆ ಮಾಡಲಾಗಿದೆ, ಸದ್ಯಕ್ಕೆ ಆಸ್ಪತ್ರೆಯಲ್ಲಿ ನಾಲ್ವರು ರೋಗಿಗಳಿದ್ದಾರೆ.
ವೈದ್ಯರ ಹಾಗೂ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ಮತ್ತು ಸಹಕಾರಕ್ಕೆ ಮಹಿಳೆ ಕೃತಜ್ಞತೆ ಸಲ್ಲಿಸಿದರು.
ಉತ್ತರ ಪ್ರದೇಶಕ್ಕೆಂದು ತೆರಳುತ್ತಿದ್ದ 58 ಜನರನ್ನು ಮೇ 15ರಂದು ಚಳ್ಳಕೆರೆ ಗಡಿ ನಾಗಪ್ಪನಹಳ್ಳಿ ಗೇಟ್ ಚೆಕ್ಪೋಸ್ಟ್ನಲ್ಲಿ ತಡೆದು ಅಲ್ಲಿಯ ಬಿಸಿಎಂ ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಮೇ 22ರಂದು ಚಾಲಕನಿಗೆ, ಮೇ 26, 28ರಂದು ಇದೇ ಗುಂಪಿನ 26 ಜನರಲ್ಲಿ ಹಾಗೂ ಮೇ 25ರಂದು ಮುಂಬೈನಿಂದ ಬಂದಿದ್ದ ಬೆಂಗಳೂರಲ್ಲಿ ಮಹಿಳೆಯ ಗಂಟಲು ದ್ರವದ ಪರೀಕ್ಷೆಯಲ್ಲಿ ಸೋಂಕಿರುವುದು ದೃಢಪಟ್ಟಿತ್ತು.
ಚಳ್ಳಕೆರೆಯಲ್ಲಿದ್ದ 57 ಮಂದಿ ಪೈಕಿ, ಮೊದಲೇ ನೆಗೆಟಿವ್ ಬಂದಿದ್ದ ಹಾಗೂ ಪಾಸಿಟಿವ್ ಇದ್ದು ನಂತರ ಚೇತರಿಸಿ ಕೊಂಡಿರುವ 34 ಹಾಗೂ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಆದ ಚಾಲಕ ಸಹಿತ 35 ವಲಸೆ ಕಾರ್ಮಿಕರನ್ನು ಶುಕ್ರವಾರ ಬಸ್ನಲ್ಲಿ ಬೆಂಗಳೂರಿಗೆ ಕಳಿಸಲಾಗುವುದು, ಉಳಿದವರು ಕ್ವಾರಂಟೈನ್ ಕೇರ್ ಸೆಂಟರ್ನಲ್ಲೇ ಇರುತ್ತಾರೆ ಎಂದು ಡಿಎಚ್ಒ ಡಾ.ಸಿ.ಎಲ್.ಪಾಲಾಕ್ಷ ತಿಳಿಸಿದರು.
ಡಿಎಸ್ ಡಾ.ಎಚ್.ಜೆ.ಬಸವರಾಜಪ್ಪ, ಕೋವಿಡ್ ಆಸ್ಪತ್ರೆ ನೋಡಲ್ ಅಧಿಕಾರಿ ಡಾ.ಪ್ರಕಾಶ್, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ತುಳಸಿ ರಂಗನಾಥ್, ವೈದ್ಯಕೀಯ ಸಿಬ್ಬಂದಿ ಮಲ್ಲಣ್ಣ, ನೇತ್ರಾವತಿ ಮತ್ತಿತರರು ಇದ್ದರು.