ಚಿತ್ರದುರ್ಗ: ಕೆಲವರಲ್ಲಿ ಪ್ರಚಾರದ ಹುಚ್ಚು ಹೆಚ್ಚಾಗುತ್ತಿದೆ. ತಕ್ಷಣ ಮುಖ್ಯವಾಹಿನಿಗೆ ಬರುವ ಹಿನ್ನೆಲೆಯಲ್ಲಿ ಏನೇನೂ ಮಾತನಾಡುತ್ತಾರೆ. ಅಮೂಲ್ಯ ಕೂಡ ಈ ವರ್ಗಕ್ಕೆ ಸೇರಿದ ಹುಡುಗಿ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅಭಿಪ್ರಾಯಪಟ್ಟರು.
ಜಿಲ್ಲಾ ಮುಸ್ಲಿಂ ಅಡ್ವೊಕೇಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಸಿಎಎ ವಿರೋಧಿಸಿ ಡಿಸಿ ಕಚೇರಿ ಬಳಿ ನಡೆಸುತ್ತಿರುವ ಧರಣಿ ಸೋಮವಾರ 22ನೇ ದಿನ ಪೂರೈಸಿ 23ನೇ ದಿನಕ್ಕೆ ಕಾಲಿಟ್ಟ ವೇಳೆ ಮಾತನಾಡಿದರು.
ವಿದ್ಯಾರ್ಥಿನಿ ಅಮೂಲ್ಯ ಕೂಗಿದ ಪಾಕ್ ಪರ ಘೋಷಣೆಯನ್ನು ಒಪ್ಪಲಾಗದು. ಇದು ದಿಢೀರ್ ಪ್ರಚಾರಕ್ಕೆ ಬರುವ ಹಪಾಹಪಿ ಆಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು, ಪ್ರಜ್ಞಾವಂತರು ಯುವ ಪೀಳಿಗೆ, ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಮಾಜಿ ಶಾಸಕ ಎ.ವಿ.ಉಮಾಪತಿ, ಅಹಿಂದ ಬಳಗ ಅಧ್ಯಕ್ಷ ಮುರುಘ ರಾಜೇಂದ್ರ ಒಡೆಯರ್, ಟ್ರಸ್ಟ್ ಅಧ್ಯಕ್ಷ ಎಚ್.ನೇಮತ್ವುಲ್ಲಾ, ವಕೀಲರಾದ ನೂರುಲ್ಲಾ ಹಸನ್,ನೂರ್ಬೇಗಂ, ಮಹಮದ್ ಸಾಧಿಕ್ವುಲ್ಲಾ, ಜುಲ್ಪೀಕರ್, ಟಿಪ್ಪುಖಾಸಿಂ ಆಲಿ, ಸೇರಿದಂತೆ ವಕೀಲರು ಪ್ರತಿಭಟನೆಯಲ್ಲಿ ಇದ್ದರು.