ಚಿತ್ರದುರ್ಗ: ಕರೊನಾ ವೈರಾಣುವಿಗೆ ಸಂಬಂಧಿಸಿದಂತೆ ಜಿಲ್ಲೆಗೆ ವಿದೇಶಗಳಿಂದ ಬಂದಿರುವ ಹಾಗೂ ಸೋಂಕಿತರ ಸಂಪರ್ಕಕ್ಕೆ ಬಂದಿರುವ ಸಾಧ್ಯತೆ ಶಂಕೆ ಮೇರೆಗೆ 43 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ.
ಮುಂಜಾಗ್ರತಾ ಕ್ರಮವಾಗಿ ಅವರಿಗೆ ಮನೆಯಲ್ಲಿಯೇ 14 ದಿನ ಪ್ರತ್ಯೇಕವಾಗಿ ಇರುವಂತೆ ಸೂಚಿಸಿದ್ದು, ಜಿಲ್ಲೆಯಲ್ಲಿ ಈವರೆಗೂ ಯಾರಲ್ಲೂ ಸೋಂಕು ಕಂಡುಬಂದಿಲ್ಲವೆಂದು ಡಿಸಿ ಆರ್.ವಿನೋತ್ಪ್ರಿಯಾ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಮಾತನಾಡಿ, ಹಿರಿಯೂರು ತಾಲೂಕು ವಾಣಿವಿಲಾಸ ಸಾಗರ ಜಲಾಶಯ, ಚಿತ್ರದುರ್ಗ ಕೋಟೆ, ಚಂದ್ರವಳ್ಳಿ ಸೇರಿದಂತೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಕರೊನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯವಿದ್ದು, 1077 ಟೋಲ್ ಫ್ರೀ ನಂಬರ್ನ ಸಹಾಯವಾಣಿ ಪ್ರಾರಂಭಿಸ ಲಾಗಿದೆ ಎಂದರು.
ದುಬಾರಿ ಬೆಲೆಯ ವಿರುದ್ಧ ಕ್ರಮ: ಜಿಲ್ಲೆಯಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಜರ್ಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸುವುದಾಗಿ ಡಿಸಿ ಹೇಳಿದರು. ಎಂಆರ್ಪಿಗಿಂತ ಹೆಚ್ಚಿನ ಬೆಲೆಗೆ ಮಾರುವಂತಿಲ್ಲ. ತಹಸೀಲ್ದಾರರು ಮೆಡಿಕಲ್ ಸ್ಟೋರ್ಗಳಿಗೆ ದಿಢೀರ್ ಭೇಟಿ ನೀಡಿ ಪರಿ ಶೀಲಿಸಬೇಕೆಂದರು. ಆದಷ್ಟು ಎಲ್ಲರೂ ಮನೆಯಲ್ಲಿಯೇ ಉಳಿದರೆ ಒಳ್ಳೆಯದೆಂದರು.
ಜಿಲ್ಲೆಯಲ್ಲಿ ಹಕ್ಕಿಜ್ವರ ಇಲ್ಲ: ಜಿಲ್ಲೆಯಲ್ಲಿ ಹಕ್ಕಿ ಜ್ವರ ಕಂಡುಬಂದಿಲ್ಲವಾದರೂ ತೀವ್ರ ನಿಗಾ ವಹಿಸುವುದು ಅಗತ್ಯವಾಗಿದೆ ಎಂದು ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಕೃಷ್ಣಪ್ಪ ಅವರು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ಪೌಲ್ಟ್ರಿಫಾರಂಗಳ ಸ್ವಚ್ಛತೆ, ಗಡಿ ಭಾಗದಲ್ಲಿ ಚೆಕ್ಪೋಸ್ಟ್ ಸ್ಥಾಪಿಸಿ, ಹೊರ ಜಿಲ್ಲೆಗಳ ಕೋಳಿ ಸಾಗಾಣಿಕೆ ವಾಹನಗಳನ್ನು ಪರಿಶೀಲಿಸಬೇಕೆಂದರು.
ಜಿಪಂ ಅಧ್ಯಕ್ಷೆ ಜಿ.ಎಂ.ವಿಶಾಲಾಕ್ಷಿ ನಟರಾಜ್, ಎಡಿಸಿ ಸಿ.ಸಂಗಪ್ಪ, ಎಸ್ಪಿ ಜಿ.ರಾಧಿಕಾ, ಎಸಿ ವಿ.ಪ್ರಸನ್ನ, ಡಿಎಚ್ಒ ಡಾ.ಸಿ.ಎಲ್.ಪಾಲಾಕ್ಷ, ಡಿಎಸ್ ಡಾ.ಎಚ್.ಜೆ.ಬಸವರಾಜಪ್ಪ, ನಗರಾಭಿವೃದ್ಧಿ ಕೋಶದ ಇಇ ಕಾಳಪ್ಪ, ತಹಶೀಲ್ದಾರ್ಗಳು, ತಾಪಂ ಇಒಗಳಿದ್ದರು.
ಮೇಲುದುರ್ಗದ ದೇವರಿಗೂ ದಿಗ್ಭಂಧನ: ಚಿತ್ರದುರ್ಗದ ಕೋಟೆಗೆ ಕರೊನಾ ದಿಗ್ಭಂಧನ ವಿಧಿಸಿದೆ. ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಮಾ.17ರಿಂದ 31ವರೆಗೆ ವೀಕ್ಷಕರಿಗೆ ಕೋಟೆ ಪ್ರವೇಶ ನಿಷೇಧಿಸಲಾಗಿದೆ. ವಾಯು ವಿಹಾರಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಹಿನ್ನೆಲೆ ಮೇಲು ದುರ್ಗದಲ್ಲಿರುವ ಶ್ರೀ ಏಕನಾಥೇಶ್ವರಿ ಮೊದಲಾದ ದೇವಾಲಯಗಳ ಭಕ್ತರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂತಿರುಗುತ್ತಿದ್ದಾರೆ.