ಚಿತ್ರದುರ್ಗ: ನುಸುಳುಕೋರರಿಗೆ ಕಡಿವಾಣ ಹಾಕಬೇಕೆಂಬ ನೆಪದಲ್ಲಿ ಕೇಂದ್ರ ಜಾರಿಗೊಳಿಸಿರುವ ಸಿಎಎ ಜನವಿರೋಧಿ ಆಗಿದ್ದು, ಇದರ ವಿರುದ್ಧದ ಹೋರಾಟ ದೇಶಾದ್ಯಂತ ನಿರಂತರವಾಗಿರಲಿದೆ ಎಂದು ಬಹುಜನ ಕ್ರಾಂತಿ ಮೋರ್ಚಾ ರಾಷ್ಟ್ರೀಯ ಸಂಯೋಜಕ ದೆಹಲಿಯ ಮಾ.ವಾಮನ್ ಮೇಶ್ರಾಮ್ ಹೇಳಿದರು.
ಸಿಎಎ, ಎನ್ಆರ್ಸಿ, ಎನ್ಪಿಆರ್ ಮತ್ತು ಎಲೆಕ್ಟ್ರಾನಿಕ್ ವಿರೋಧಿಸಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹೊರಟಿರುವ ಪರಿವರ್ತನಾ ಯಾತ್ರೆ ಅಂಗವಾಗಿ ತರಾಸು ರಂಗಮಂದಿರಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದರು.
ಪಾಕಿಸ್ತಾನದಲ್ಲಿ ಹಿಂದುಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂಬುದು ಬಿಜೆಪಿ ಕಟ್ಟುತ್ತಿರುವ ಸುಳ್ಳು. ಈ ಮೂಲಕ ಭಾರತದಲ್ಲಿ ಸಂಘರ್ಷ ಉಂಟು ಮಾಡಲು ಪ್ರಯತ್ನ ನಡೆಸುತ್ತಿದೆ ಎಂದು ದೂರಿದರು.
ಆಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾ ನುಸುಳುಕೋರರ ತಡೆ ಸಿಎಎ ಉದ್ದೇಶ, ಇದರಿಂದ ಮುಸ್ಲಿಮರಿಗೆ ತೊಂದರೆ ಆಗದೆಂಬ ಬಿಜೆಪಿ ನಾಯಕರ ಮಾತು ಸುಳ್ಳು. ಈ ಕಾಯ್ದೆಯಿಂದ ಅಹಿಂದ ವರ್ಗ, ಆದಿವಾಸಿಗಳು, ಬುಡಕಟ್ಟು ಸಮುದಾಯದವರು ತೊಂದರೆಗೆ ಸಿಲುಕಲಿದ್ದಾರೆ ಎಂದು ಹೇಳಿದರು.
ಇವಿಎಂ ಮತ ಯಂತ್ರಗಳಿಂದಾಗಿಯೇ ಬಿಜೆಪಿ 2ನೇ ಬಾರಿಗೆ ಅಧಿಕಾರ ಹಿಡಿದಿದೆ. ಇವಿಎಂನಿಂದ ಪಾರದರ್ಶಕವಾಗಿ ಚುನಾವಣೆ ನಡೆಸಲಾಗದು. ಇದನ್ನು ವಿರೋಧಿಸಿ ದೇಶದಲ್ಲಿ ಜನ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಂಸದ ಪಿ.ಕೋದಂಡರಾಮಯ್ಯ ಮಾತನಾಡಿ, ಸಿಎಎ ಜಾರಿಗೊಳಿಸಿದ ಕೇಂದ್ರದ ನಿರ್ಧಾರ ಜನ ವಿರೋಧಿ ಆಗಿದೆ ಎಂದು ಹೇಳಿದರು.
ಸಿಎಎ ಅನುಷ್ಟಾನಕ್ಕೆ ಅವಕಾಶ ಕೊಡುವುದಿಲ್ಲವೆಂದು ದಲಿತ ಮುಖಂಡ ಬೆಂಗಳೂರಿನ ಭಾಸ್ಕರ್ ಪ್ರಸಾದ್ ಸಾರಿದರು.
ವಕೀಲ ಸಿ.ಶಿವುಯಾದವ್, ಹೊಸದಿಲ್ಲಿಯ ನಿಶಾಮಿಶ್ರ ಮಾತನಾಡಿದರು. ಪ್ರೊ.ಸಿ.ಕೆ.ಮಹೇಶ್, ಮುರುಘ ರಾಜೇಂದ್ರ ಒಡೆಯರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಟಿಪ್ಪುಸುಲ್ತಾನ್ ಅಭಿಮಾನಿಗಳ ವೇದಿಕೆ ಅಧ್ಯಕ್ಷ ಟಿಪ್ಪುಖಾಸಿಂ ಆಲಿ, ವಕೀಲ ಮಹಮದ್ ಸಾಧಿಕ್ ವುಲ್ಲಾ, ಟಿ.ಶಫಿವುಲ್ಲಾ ಇದ್ದರು. ಮೈಸೂರು ಉರಿಲಿಂಗಪೆದ್ದ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.