ಚಿತ್ರದುರ್ಗ: ಚಿತ್ರದುರ್ಗದ ಮಹಿಳೆಯೊಬ್ಬರಿಗೆ ಕರೊನಾ ಸೋಂಕು ತಗುಲಿರುವುದು ಶುಕ್ರವಾರ ದೃಢಪಟ್ಟಿದ್ದು, ಅವರನ್ನು ಶನಿವಾರ ಸಂಜೆ ನಗರದ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಸಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.
ಆದರೆ, ಈ ಪ್ರಕರಣವನ್ನು ಆರೋಗ್ಯ ಇಲಾಖೆ ಬೆಂಗಳೂರಿಗೆ ಸೇರಿಸಿದ್ದರಿಂದಾಗಿ ಜಿಲ್ಲೆಯಲ್ಲಿ ಸೋಂಕು ತಗುಲಿದವರ ಸಂಖ್ಯೆ 39ಕ್ಕೆ ಸೀಮಿತವಾಗಿದೆ, ಇವರಲ್ಲಿ 9 ಮಂದಿ ಚೇತರಿಸಿಕೊಂಡಿದ್ದಾರೆ.
ಲಾಕ್ಡೌನ್ ಮೊದಲೇ ಮುಂಬೈಗೆ ತೆರಳಿದ್ದ ಈ ಮಹಿಳೆ (36) ಮೇ 25ರಂದು ವಿಮಾನದ ಮೂಲಕ ಬೆಂಗಳೂರಿಗೆ ಬಂದಿದ್ದಾರೆ. ಅಲ್ಲಿ ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಆದರೆ, ಫಲಿತಾಂಶ ಬರುವುದರೊಳಗೆ ಅವರು ಕ್ಯಾಬ್ನಲ್ಲಿ ಚಿತ್ರದುರ್ಗಕ್ಕೆ ಬಂದಿದ್ದರು.
ಮೇ 29ರಂದು ಸಂಜೆ ಪಾಸಿಟಿವ್ ಇರುವುದು ದೃಢಪಟ್ಟಿದೆ. ಆದರೆ, ಆರೋಗ್ಯ ಇಲಾಖೆ ಅಧಿಕಾರಿಗಳು ಇಲ್ಲಿಯ ಅಧಿಕಾರಿಗಳಿಗೆ ಮೇ 30ರಂದು ಮಾಹಿತಿ ನೀಡಿದ್ದು, ಕೂಡಲೇ ಸ್ಥಳೀಯ ಅಧಿಕಾರಿಗಳು ಸೋಂಕಿತ ಮಹಿಳೆಯನ್ನು ಅವರ ನಿವಾಸದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅವರಿರುವ ಅಪಾರ್ಟ್ಮೆಂಟ್ನ್ನು ಕಂಟೆನ್ಮೆಂಟ್ ರೆನ್ ಎಂದು ಪರಿಗಣಿಸಿ, ಅಲ್ಲಿರುವ ಎಲ್ಲ ನಿವಾಸಿಗಳಿಗೆ ಹೊರಗೆ ಬರದಂತೆ ಸೂಚಿಸಲಾಗಿದೆ. ಪ್ರಾಥಮಿಕ ಸಂಪರ್ಕಕಿತರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.