ಚಿತ್ರದುರ್ಗ: ಕುಂಚ ಬ್ರಹ್ಮ ಪಿ.ಆರ್.ತಿಪ್ಪೇಸ್ವಾಮಿ ಅವರು ಕಲೆಗಾಗಿ ಜೀವನ ಮುಡಿಪಿಟ್ಟಿದ್ದರು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್ಬಾಬು ಅಭಿಪ್ರಾಯಪಟ್ಟರು.
ಹಿರಿಯೂರು ತಾಲೂಕಿನ ಹರ್ತಿಕೋಟೆಯ ಪಿ.ಆರ್.ತಿಪ್ಪೇಸ್ವಾಮಿ ಸ್ಮಾರಕ ಬಳಿ ಶನಿವಾರ ಕಸಾಪ, ಕುಂಚ ಬ್ರಹ್ಮ ಪಿ.ಆರ್.ಟಿ. ಕಲಾವೇದಿಕೆ, ಕನಕ ಗೆಳೆಯರ ಬಳಗದ ಆಶ್ರಯದಲ್ಲಿ ಏರ್ಪಡಿಸಿದ್ದ ಪಿ.ಆರ್.ತಿಪ್ಪೇಸ್ವಾಮಿ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿರಂತರ ಪ್ರಯತ್ನ, ಪರಿಶ್ರಮದಿಂದ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇವರ ಸಾಧನೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ ಎಂದರು.
ವಿಜಯವಾಣಿ ಸಹ ಸಂಪಾದಕ ರುದ್ರಣ್ಣ ಹರ್ತಿಕೋಟೆ ಮಾತನಾಡಿ, ಕುಂಚಬ್ರಹ್ಮ ಪಿ.ಆರ್.ತಿಪ್ಪೇಸ್ವಾಮಿ ಅವರು ಚಿತ್ರಕಲೆಯೊಂದಿಗೆ ಸಾಹಿತ್ಯ, ಜಾನಪದ ಈ ಮೂರು ಕ್ಷೇತ್ರಗಳಲ್ಲಿ ಅತ್ಯಂತ ಹೆಸರು ಮಾಡಿದವರು ಎಂದು ಹೇಳಿದರು.
ಮೈಸೂರು ಮಾನಸ ಗಂಗೋತ್ರಿಯಲ್ಲಿ ವಸ್ತು ಸಂಗ್ರಹಾಲಯ, ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಂಜೂಷಾ ವಸ್ತು ಸಂಗ್ರಹಾಲಯ ಸ್ಥಾಪಿಸಿದ್ದಾರೆ. ಹೋರಾಟಗಾರ ಕೆಂಚಪ್ಪ, ಕಲಾವಿದ ಕಂಡ ಫ್ರಾನ್ಸ್, ಕಲಾವಿದ ನೆನಪುಗಳು ಸೇರಿ ಅನೇಕ ಕೃತಿಗಳನ್ನು ಬರೆದಿದ್ದಾರೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಮಾತನಾಡಿ, ಪಿ.ಆರ್.ತಿಪ್ಪೇಸ್ವಾಮಿ ಅವರು ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿ ನಾಡಿಗೆ ಅನೇಕ ಕೊಡುಗೆಗಳನ್ನು ನೀಡಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿವೆ ಎಂದರು.
ವೇದಿಕೆ ಅಧ್ಯಕ್ಷ ನಿರಂಜನಮೂರ್ತಿ, ವಾಣಿ ಸಕ್ಕರೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಧರಣೇಂದ್ರಯ್ಯ, ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಗೋವಿಂದಪ್ಪ, ನಿಕಟಪೂರ್ವ ಅಧ್ಯಕ್ಷ ಜಿ.ಧನಂಜಯ ಕುಮಾರ್, ತಾಲೂಕು ಘಟಕದ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ, ಗೌರವ ಕಾರ್ಯದರ್ಶಿ ನಿಜಲಿಂಗಪ್ಪ ಇತರರಿದ್ದರು.
ಕಲಾವಿದರಾದ ಗೋಪಿ ನಾಯಕ್, ಮಲ್ಲೇಶ್, ಚಂದ್ರಶೇಖರ್, ವೀರೇಂದ್ರ, ನಿರಂಜನ ಮೂರ್ತಿ, ಕಂದಿಕೆರೆ ಶಿವಕುಮಾರ್ ಮುಂತಾದವರನ್ನು ಸನ್ಮಾನಿಸಲಾಯಿತು.