ಬೆಂಗಳೂರು: ಹೃದಯಾಘಾತದಿಂದ ನಿಧನಹೊಂದಿದ ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಅವರ ಅಂತಿಮ ಸಂಸ್ಕಾರಕ್ಕೆ ಕನಕಪುರ ರಸ್ತೆಯಲ್ಲಿರುವ ನೆಲಗುಳಿಯ ಧ್ರುವ ಸರ್ಜಾ ಅವರ ಬೃಂದಾವನ ಫಾರ್ಮ್ ಹೌಸ್ನಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಫಾರ್ಮ್ ಹೌಸ್ನ ಹೃದಯಭಾಗದಲ್ಲಿ ಜಾಗ ಗುರುತಿಸಲಾಗಿದ್ದು, ಅಂತ್ಯಸಂಸ್ಕಾರಕ್ಕೆ ತಯಾರಿ ಮಾಡಲಾಗುತ್ತಿದೆ.
ಧ್ರುವ ಸರ್ಜಾ ಕೆಲ ವರ್ಷಗಳಿಂದಷ್ಟೇ ಬೃಂದಾವನ ಫಾರ್ಮ್ ಹೌಸ್ ಖರೀದಿಸಿದ್ದರು. ತಮ್ಮನ ಈ ಕೆಲಸಕ್ಕೆ ಚಿರು ಸಹ ಮೆಚ್ಚುಗೆ ವ್ಯಕ್ತಪಡಿಸಿ, ಆ ಫಾರ್ಮ್ಹೌಸ್ನಲ್ಲೇ ಒಂದಷ್ಟು ದಿನಗಳನ್ನು ಕಳೆದಿದ್ದರು. ಸಿನಿಮಾ ಶೂಟಿಂಗ್ ಬಿಡುವಿನ ವೇಳೆಯಲ್ಲಿ ಕುಟುಂಬದೊಟ್ಟಿಗೆ ತೋಟದಲ್ಲಿಯೇ ಕಾಲಕಳೆಯುತ್ತಿದ್ದರು. ಇದೀಗ ಅದೇ ಇಷ್ಟದ ಫಾರ್ಮ್ ಹೌಸ್ನಲ್ಲೇ ಶಾಶ್ವತವಾಗಿ ಮಣ್ಣಾಗಲಿದ್ದಾರೆ.
ಇದನ್ನೂ ಓದಿ: “ಮಾಮ Pls ಅಜ್ಜಿಯ ಕೈ ರುಚಿ ಸವಿಯಲು ಮನೆಗೆ ಬನ್ನಿ” ಎಂದು ಕರೆಯುತ್ತಿದ್ದ.!
ಈ ಹಿಂದೆ, ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿಯಲ್ಲಿ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ನಡೆಯುತ್ತವೆ ಎನ್ನಲಾಗಿತ್ತು. ತಾತ ಶಕ್ತಿ ಪ್ರಸಾದ್, ಮಾವ ಕಿಶೋರ್ ಸರ್ಜಾ ಅಂತ್ಯಕ್ರಿಯೆ ನೆರವೇರಿದ ಸ್ಥಳದಲ್ಲಿಯೇ ಚಿರು ಕಾರ್ಯ ನೆರವೇರಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಕೊನೆಗೆ ಅದು ಸಹೋದರನ ಫಾರ್ಮ್ ಹೌಸ್ಗೆ ಶಿಫ್ಟ್ ಆಯಿತು.
ಸದ್ಯ ಬಸವನಗುಡಿಯ ಮನೆಯಲ್ಲಿ ಪಾರ್ಥಿವ ಶರೀರವನ್ನು ಇರಿಸಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಪಾರ ಪ್ರಮಾಣದ ಅಭಿಮಾನಿಗಳು, ಸಿನಿಮಾ ಸಹೋದ್ಯೋಗಿಗಳು ಆಗಮಿಸಿ ನೆಚ್ಚಿನ ನಟನಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಕರೊನಾ ಭೀತಿಯ ನಡುವೆ, ಚಿರು ಮನೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದಾರೆ.
ಇದನ್ನೂ ಓದಿ: ಅಳಿಯನ ಸಾವಿನ ಬೆನ್ನಲ್ಲೇ ಫೇಸ್ಬುಕ್ ಕವರ್, ಪ್ರೊಫೈಲ್ಗೆ ಕಪ್ಪು ಫೋಟೋ ಅಪ್ಲೋಡ್ ಮಾಡಿದ ಅರ್ಜುನ್ ಸರ್ಜಾ
ಇನ್ನು ಮಧ್ಯಾಹ್ನ ಒಂದು ಗಂಟೆ ವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಇರಲಿದ್ದು, ಅದಾದ ಬಳಿಕ ಮೆರವಣಿಗೆ ಮೂಲಕ ಫಾರ್ಮ್ ಹೌಸ್ಗೆ ಪಾರ್ಥಿವ ಶರೀರ ಸಾಗಲಿದೆ. ಸಂಜೆ ನಾಲ್ಕು ಗಂಟೆ ವೇಳೆಗೆ ಅಂತ್ಯಸಂಸ್ಕಾರ ಪ್ರಕ್ರಿಯೆ ನೆರವೇರಲಿದೆ ಎಂದು ಸರ್ಜಾ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. ಬೃಂದಾವನ ಫಾರ್ಮ್ ಹೌಸ್ ಬಳಿಯಲ್ಲಿಯೂ ಪೊಲೀಸ್ ತುಕಡಿ ನಿಯೋಜಿಸಲಾಗಿದ್ದು, ಅಭಿಮಾನಿಗಳನ್ನು ನಿಯಂತ್ರಿಸಲು ಖಾಕಿ ಪಡೆ ಬ್ಯಾರಿಕೇಡ್ ಹಾಕಿ ಮುಖ್ಯದ್ವಾರ ಹೊರತುಪಡಿಸಿ ಇನ್ನುಳಿದ ದ್ವಾರಗಳನ್ನು ಮುಚ್ಚಲಾಗಿದೆ.
PHOTO GALLERY| ಬಳುಕೋ ಬಳ್ಳಿ ಶಿಲ್ಪಾ ಶೆಟ್ಟಿಗೆ ಹ್ಯಾಪಿ ಬರ್ತಡೇ ..