ಬೆಂಗಳೂರು: ಕೋಟ್ಯಂತರ ಜನರು ಕಾತುರದಿಂದ ಕಾಯುತ್ತಿದ್ದ ದಿನ ಇಂದು (ಜನವರಿ 22) ನೆರವೇರಿದ್ದು, ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಸಂಪನ್ನಗೊಂಡಿದೆ. ಇದೇ ವೇಳೆ ನಟ ಧ್ರುವ ಸರ್ಜಾ ತಮ್ಮ ಮಗ ಹಾಗೂ ಮಗಳಿಗೆ ನಾಮಕರಣ ಮಾಡಿರುವುದು ಎಲ್ಲರ ಗಮನ ಸೆಳೆದಿದೆ.
ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ವೇಳೆಯೇ ನಾಮಕರಣ ಶಾಸ್ತ್ರ ನಡೆದಿದ್ದು, ಮಕ್ಕಳಿಗೆ ವಿಶೇಷ ಮತ್ತು ಅರ್ಥಪೂರ್ಣವಾದ ಹೆಸರನ್ನೇ ಇಟ್ಟಿದ್ದಾರೆ. ನಟ ಧ್ರುವ ಸರ್ಜಾ ಮಗಳಿಗೆ ರುದ್ರಾಕ್ಷಿ ಮತ್ತು ಮಗನಿಗೆ ಹಯಗ್ರೀವ ಎಂದು ನಾಮಕರಣ ಮಾಡಿದ್ದಾರೆ. ಮಕ್ಕಳಿಗೆ ಸಂಪ್ರದಾಯಬದ್ಧ ಹೆಸರಿಟ್ಟಿರುವುದಕ್ಕೆ ಧ್ರುವ ಸರ್ಜಾ ಕಾರಣ ನೀಡಿದ್ದು, ಎಲ್ಲರ ಮನ ಗೆದ್ದಿದೆ.
ಈ ಕುರಿತು ಮಾತನಾಡಿರುವ ಧ್ರೂವ ಸರ್ಜಾ, ಜನವರಿ 22ರಂದು ನಾಮಕರಣ ಡೇಟ್ ಬಂತು, ಇಬ್ಬರು ಮಕ್ಕಳಿಗೂ ಒಟ್ಟಿಗೆ ನಾಮಕರಣ ಮಾಡೋದಕ್ಕೆ ಪ್ಲ್ಯಾನ್ ಮಾಡಿದ್ದೆವು. ಇದೇ ದಿನ ರಾಮಮಂದಿರ ಉದ್ಘಾಟನೆ ಆಗಿದೆ. ಮಕ್ಕಳಿಬ್ಬರಿಗೆ ಒತ್ತಕ್ಷರ ಇರುವ ಹೆಸರು ಇಡಬೇಕೆಂದು ನಿರ್ಧರಿಸಿದ್ದೆವು. ಒತ್ತಕ್ಷರ ಅಂದ್ರೆ ತುಂಬಾ ಒಳ್ಳೆಯದು ಅನ್ನುವ ನಂಬಿಕೆ ಇದೆ. ಯಾವುದೇ ಫ್ಯಾನ್ಸಿ ಹೆಸರು ಇಡಬಾರದು ಅಂತ ನಿರ್ಧಾರ ಮಾಡಿದ್ದೆವು. ಅಯೋಧ್ಯೆಯಲ್ಲಿ 12.20 ಕ್ಕೆ ಪೂಜೆ ಇತ್ತು. ನಾವು ನಮ್ಮ ಮಕ್ಕಳಿಗೂ ಅದೇ ಸಮಯಕ್ಕೆ ನಾಮಕರಣ ಮಾಡಿದ್ದೇವೆ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ದಿಢೀರ್ ಹಿಂದೆ ಸರಿದ ವಿರಾಟ್ ಕೊಹ್ಲಿ; ಕಾರಣ ಹೀಗಿದೆ
ನಾನು ಹಾಗೂ ಪತ್ನಿ ಹೆಸರಿನ ಆಯ್ಕೆ ಬಗ್ಗೆ ಬಹಳ ಯೋಚನೆ ಮಾಡಿದೆವು. ಒತ್ತಕ್ಷರದಲ್ಲಿಯೇ ಹೆಸರಿಡಬೇಕು, ಹೆಸರಿನಲ್ಲಿ ಶಕ್ತಿ ಇರಬೇಕು ಎಂಬುದು ನಮ್ಮ ಯೋಚನೆ ಆಗಿತ್ತು. ಅದರಂತೆ ಮಗಳಿಗೆ ರುದ್ರಾಕ್ಷಿ ಹಾಗೂ ಮಗನಿಗೆ ಹಯಗ್ರೀವ ಎಂದು ಹೆಸರಿಟ್ಟಿದ್ದೇವೆ. ಹಯಗ್ರೀವ ಎಂದರೆ ಆಂಜನೇಯನ ಪಂಚಮುಖಿ ಅವತಾರಗಳಲ್ಲಿ ಒಂದಾಗಿದೆ. ನಾವು ಕುಟುಂಬ ಸಮೇತ ಆದಷ್ಟು ಬೇಗ ಅಯೋಧ್ಯೆಗೆ ಭೇಟಿ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
ಬಾಲಿವುಡ್ ನಟ ಸಂಜಯ್ ದತ್ ಸಮಾರಂಭದಲ್ಲಿ ಭಾಗುಯಾಗಿದರ ಕುರಿತು ಪ್ರತಿಕ್ರಿಯಿಸಿದ ಧ್ರುವ ಸರ್ಜಾ, ಅವರಿಗೆ ಅಳುಕುತ್ತಲೇ ಆಹ್ವಾನ ನೀಡಿದೆ. ನೀನು ನನ್ನ ಸಹೋದರ ಇದ್ದಂತೆ ನಾನು ಬರುತ್ತೇನೆ ಎಂದು ಬಂದರು ಎರಡು ಗಂಟೆಗಳ ಕಾಲ ಇಲ್ಲಿದ್ದು ಎಲ್ಲರೊಟ್ಟಿಗೆ ಬೆರೆತು ಮಕ್ಕಳನ್ನು ಆಶೀರ್ವದಿಸಿದರು. ಅವರು ಶಿವನ ಭಕ್ತರು. ಮಗಳಿಗೆ ರುದ್ರಾಕ್ಷಿ ಎಂದು ಹೆಸರಿಟ್ಟಿದ್ದು ಕೇಳಿ ಬಹಳ ಖುಷಿಪಟ್ಟರು ಎಂದು ನಟ ಧ್ರುವ ಸರ್ಜಾ ಮಾಹಿತಿ ನೀಡಿದ್ದಾರೆ.