ನವದೆಹಲಿ: ಚೀನಾ ಮೂಲದ ಲ್ಯು ಸ್ಯಾಂಗ್ (42) ಎಂಬಾತ ಭಾರತದಲ್ಲಿ 5 ಕಂಪನಿಗಳನ್ನು ಸ್ಥಾಪಿಸಿ, ಅವುಗಳ ನಿರ್ದೇಶಕನಾಗಿ 1 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹವಾಲಾ ದಂಧೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಮಣಿಪುರದಲ್ಲಿ ನೆಲೆಸಿದ್ದ ಈ ವ್ಯಕ್ತಿ ಭಾರತದ ಆಧಾರ್ಕಾರ್ಡ್ ಮತ್ತು ಪ್ಯಾನ್ಕಾರ್ಡ್ಗಳನ್ನು ಕೂಡ ಹೊಂದಿದ್ದ ಎಂದು ಹೇಳಲಾಗಿದೆ. ಭಾರತೀಯ ತನಿಖಾ ಸಂಸ್ಥೆಗಳು ಇದೀಗ ಈತನ ವಿರುದ್ಧ ತನ್ನ ಚೀನಾ ಮೂಲವನ್ನು ಮುಚ್ಚಿಟ್ಟು ಭಾರತದಲ್ಲಿ ಹಲವು ಕಂಪನಿಗಳನ್ನು ಸ್ಥಾಪಿಸಿ ವ್ಯವಹಾರ ನಡೆಸಿದ ಕುರಿತು ತನಿಖೆ ನಡೆಸುತ್ತಿವೆ.
ಮಣಿಪುರದ ಬುವಾಲಿಯಾಂಗ್ ಎಂಬ ಗ್ರಾಮದ ಖಾಯಂ ವಿಳಾಸ ನೀಡಿದ್ದ ಲ್ಯು ಸ್ಯಾಂಗ್, ಚಾರ್ಲಿ ಪೆಂಗ್ ಎಂಬ ಭಾರತೀಯ ಹೆಸರನ್ನು ಇಟ್ಟುಕೊಂಡು ಆಧಾರ್ಕಾರ್ಡ್ ಮತ್ತು ಪ್ಯಾನ್ಕಾರ್ಡ್ ಪಡೆದುಕೊಂಡಿದ್ದ. ಈ ಪ್ರಕ್ರಿಯೆಯಲ್ಲಿ ಆತ ತನ್ನ ಚೀನಾ ಮೂಲದ ಬಗೆಗಿನ ಮಾಹಿತಿಯನ್ನು ಬಚ್ಚಿಟ್ಟಿದ್ದ.
2018ರ ಮಾರ್ಚ್ನಲ್ಲಿ ಫಿನ್ ಬ್ಲಾಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಹೂಡಿಕೆ ಸಂಸ್ಥೆಯನ್ನು ಈತ ಆರಂಭಿಸಿದ್ದ. ಇದರ ಪ್ರೊಮೋಟರ್ ತಾನೆಂದು ಹೇಳಿಕೊಂಡಿದ್ದ. ಆಗಿದ್ದ.
ಒಂದು ವರ್ಷದ ಬಳಿಕ ಇನ್ವಿನ್ ಲಾಜಿಸ್ಟಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಒಟಿಎ ನ್ಯೂಡೆಲ್ಲಿ ಪ್ರೈವೇಟ್ ಲಿಮಿಟೆಡ್ ಮತ್ತು ಕ್ಲೀನ್ ಹಾರ್ಬರ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಮೂರು ಕಂಪನಿಗಳನ್ನು ಕೂಡ ಆರಂಭಿಸಿದ್ದು, ಈ ಮೂರು ಕಂಪನಿಯ ಹೆಚ್ಚಿನ ಪಾಲಿನ ಷೇರುಗಳನ್ನು ಹೊಂದುವ ಮೂಲಕ ನಿರ್ದೇಶಕನ ಸ್ಥಾನವನ್ನು ಅಲಂಕರಿಸಿದ್ದ. 2020ರ ಜನವರಿಯಲ್ಲಿ ಆತ ಒಟಿಎ ಲಾಜಿಸ್ಟಿಕ್ ಪ್ರೈವೇಟ್ ಲಿಮಿಟೆಡ್ ಎಂಬ ಮತ್ತೊಂದು ಕಂಪನಿ ಆರಂಭಿಸಿ, ಅದರ ನಿರ್ದೇಶಕ ಕೂಡ ಆಗಿದ್ದ. ಅಧಿಕೃತ ದಾಖಲೆಗಳ ಪ್ರಕಾರ ಈ ಸಂಸ್ಥೆ ಸಾರಿಗೆ ಮತ್ತು ಪ್ರವಾಸೋದ್ಯಮ ವ್ಯವಹಾರಗಳಲ್ಲಿ ತೊಡಗಿಕೊಂಡಿತ್ತು.
ಅಚ್ಚರಿಯ ಸಂಗತಿ ಎಂದರೆ, ಸಾರಿಗೆ ಮತ್ತು ಪ್ರವಾಸೋದ್ಯಮ ವ್ಯವಹಾರದಲ್ಲಿ ತೊಡಗಿದ್ದ ತನ್ನ ಇನ್ವಿನ್ ಲಾಜಿಸ್ಟಿಕ್ಸ್ ಎಂಬ ಕಂಪನಿಯನ್ನು ಮುಚ್ಚಲು ಅನುಮತಿ ಕೋರಿ ಸಂಬಂಧಪಟ್ಟ ಸಂಸ್ಥೆಗೆ ಈತ ಅರ್ಜಿ ಸಲ್ಲಿಸಿದ್ದ.
ಪೆಂಗ್, ತಾನು ಸ್ಥಾಪಿಸಿದ್ದ ಎಲ್ಲ 5 ಕಂಪನಿಗಳ ಹೆಚ್ಚಿನ ಪಾಲಿನ ಷೇರುಗಳನ್ನು ಹೊಂದಿದ್ದು, ಒಟಿಎ ಲಾಜಿಸ್ಟಿಕ್ಸ್, ಫಿನ್ ಬ್ಲ್ಯಾಕ್ರಾಕ್ ಇಂಡಿಯಾ ಮತ್ತು ಕ್ಲೀನ್ ಹಾರ್ಬರ್ಸ್ ಸಂಸ್ಥೆಗಳಲ್ಲಿ ಆಲಿಗಢ ಮೂಲದ ರಾಹುಲ್ ಕುಮಾರ್ ಎಂಬಾತನೊಂದಿಗೆ ನಿರ್ದೇಶಕನ ಸ್ಥಾನವನ್ನು ಹಂಚಿಕೊಂಡಿದ್ದಾನೆ.
ಚೀನಾ ಹಿನ್ನೆಲೆ ಬಚ್ಚಿಟ್ಟಿಲ್ಲ: ಒಂದು ಮೂಲದ ಪ್ರಕಾರ ಭಾರತದಲ್ಲಿ ಭಾರತೀಯ ಹೆಸರಿನಲ್ಲೇ ವ್ಯವಹರಿಸುತ್ತಿದ್ದ ಪೆಂಗ್, ತನ್ನ ಚೀನಾದ ಹಿನ್ನೆಲೆಯನ್ನು ಬಚ್ಚಿಟ್ಟಿರಲಿಲ್ಲ ಎನ್ನಲಾಗಿದೆ. ಆತನ ಸಾಮಾಜಿಕ ಜಾಲತಾಣದ ಖಾತೆಗಳನ್ನು ಗಮನಿಸಿದಾಗ ಹಲವು ಹೆಸರುಗಳಲ್ಲಿ ಖಾತೆಗಳನ್ನು ಹೊಂದಿದ್ದು, ತಾನು ಚೀನಾ ಗ್ಯಾಲಾಕ್ಷಿ ಸೆಕ್ಯೂರಿಟೀಸ್ ಎಂಬ ದಲ್ಲಾಳಿ ಮತ್ತು ಹೂಡಿಕೆ ಬ್ಯಾಂಕ್ನಲ್ಲಿ ಕೆಲಸ ಮಾಡಿದ್ದು, 2008ರಲ್ಲಿ ಉದ್ಯೋಗ ತೊರೆದಿದ್ದಾಗಿ ಹೇಳಿಕೊಂಡಿದ್ದಾನೆ.
ಚೀನಾದ ಗುಲೌ ಜಿಲ್ಲೆಯ ಜಿನ್ಲಿಂಗ್ ಹೈಸ್ಕೂಲ್ನಲ್ಲಿ ತಾನು ವಿದ್ಯಾಭ್ಯಾಸ ಮಾಡಿರುವುದಾಗಿಯೂ ತಿಳಿಸಿದ್ದಾನೆ. ಆದರೆ, ಈತ ಯಾವ ರೀತಿಯ ವ್ಯವಹಾರ ಮಾಡುತ್ತಿದ್ದ ಎಂಬ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಆತನ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಹೇಳಿಕೊಂಡಿದ್ದಾರೆ.
ದಿನಸಿ ಹಂಚಿದ್ದ: ಹವಾಲಾ ದಂಧೆಯಲ್ಲಿ ತೊಡಗಿಕೊಂಡಿದ್ದರೂ ಪೆಂಗ್ ಭಾರತದಲ್ಲಿ ಸಮಾಜಸೇವೆಯನ್ನೂ ಮಾಡುತ್ತಿದ್ದ. ಇತ್ತೀಚೆಗಿನ ಕೋವಿಡ್-19 ಲಾಕ್ಡೌನ್ ವೇಳೆ ದೆಹಲಿಯಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ 200ಕ್ಕೂ ಹೆಚ್ಚು ಮಣಿಪುರ ಮೂಲದ ಕುಟುಂಬಗಳಿಗೆ ಆತ ದಿನಸಿ ಕಿಟ್ಗಳನ್ನು ವಿತರಿಸಿದ್ದ. ಆದರೆ, ಇದರ ಶ್ರೇಯವನ್ನು ಗಳಿಸಿಕೊಳ್ಳಲು ನಿರಾಕರಿಸಿ, ನೇಪಥ್ಯದಲ್ಲೇ ನಿಂತು ಈ ಕೆಲಸ ಮಾಡಿದ್ದ ಎನ್ನಲಾಗಿದೆ.
ಪತ್ತೆಯಾಗಿದ್ದ ಹೇಗೆ?: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ದೆಹಲಿ, ಘಾಜಿಯಾಬಾದ್ ಮತ್ತು ಗುರುಗ್ರಾಮಗಳಲ್ಲಿ ಚೀನಾ ಸಂಪರ್ಕ ಇರುವ ಕಂಪನಿಗಳಿಂದ ಅಕ್ರಮ ನಗದು ವಹಿವಾಟು ನಡೆದಿರುವ ಬಗ್ಗೆ ತನಿಖೆ ನಡೆಸಲು 12ಕ್ಕೂ ಹೆಚ್ಚು ಕಡೆ ದಾಳಿ ಮಾಡಿದ್ದರು. ಈ ದಾಳಿಯ ಸಂದರ್ಭದಲ್ಲಿ ಸ್ಯಾಂಗ್ ಎಂಬ ಹೆಸರು ಪತ್ತೆಯಾಗಿತ್ತು. ಈ ಬಗ್ಗೆ ಹೆಚ್ಚಿನ ತನಿಖೆ ಮಾಡಿದಾಗ, ಪೆಂಗ್ನ ಸೋಗು ಬಹಿರಂಗವಾಯಿತು ಎನ್ನಲಾಗಿದೆ.
ಡಿಜೆ ಹಳ್ಳಿ ಪ್ರಕರಣಕ್ಕೆ ಹೊಸ ತಿರುವು ನೀಡಿದ ಪೊಲೀಸ್ ತನಿಖೆ!