ತುಮಕೂರು: ಸರ್ಕಾರ ಶಾಲಾ ಮಕ್ಕಳ ಅಪೌಷ್ಟಿಕತೆ ನೀಗಿಸಲು ಮಧ್ಯಾಹ್ನದ ಬಿಸಿಯೂಟದ ಜತೆಗೆ ಮೊಟ್ಟೆ ವಿತರಿಸಲು ಯೋಜನೆ ರೂಪಿಸಿದೆ, ಆದರೆ ಮುಖ್ಯಶಿಕ್ಷಕರೊಬ್ಬರು ವಿಚಿತ್ರ ಕುಂಟು ನೆಪ ಹೇಳುತ್ತಲೇ ಯೋಜನೆ ಜಾರಿಯಾದಾಗಿನಿಂದ ಇದುವರೆಗೆ ಮಕ್ಕಳಿಗೆ ಒಂದೇಒಂದು ಮೊಟ್ಟೆ ಕೊಟ್ಟಿಲ್ಲ. ಶ್ರಾವಣ ಮಾಸ, ಕಾರ್ತೀಕ ಮಾಸ, ಆಷಾಢ ಮಾಸದಲ್ಲಿ ಈ ಶಾಲೆಯ ಮುಖ್ಯಶಿಕ್ಷಕರು ಕೋಳಿಮೊಟ್ಟೆ ಮುಟ್ಟಲ್ವಂತೆ. ಹಾಗಾಗಿ ಕಾರ್ತೀಕದಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ ಕೊಟ್ಟಿಲ್ಲವಂತೆ!
ಇಂತಹ ಘಟನೆ ಜಿಲ್ಲಾ ಕೇಂದ್ರ ತುಮಕೂರಿಗೆ ಸಮೀಪದಲ್ಲಿಯೇ ಇರುವ ಚಿನಗ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಸ್ವಾತಂತ್ರ ಪೂರ್ವದಲ್ಲಿಯೇ ಆರಂಭವಾದ ಈ ಶಾಲೆಯಲ್ಲಿ ಸದ್ಯ 1 ರಿಂದ 7ನೇ ತರಗತಿವರೆಗೂ 120 ಮಕ್ಕಳು ಇದ್ದಾರೆ. ಸರ್ಕಾರ ಮಕ್ಕಳಿಗೆ ಬಿಸಿಯೂಟ ಯೋಜನೆಯಡಿ ಕೋಳಿ ಮೊಟ್ಟೆ ನೀಡುತ್ತಿದೆ. ಆದರೆ, ಈ ಶಾಲೆಯ ಮುಖ್ಯಶಿಕ್ಷಕ ಆದಿಮೂರ್ತಿ ಅವರ ವರ್ತನೆ ದೇವರು ವರ ಕೊಟ್ಟರೂ ಪೂಜಾರಿ ಕೊಡಲ್ಲ ಎಂಬ ಮಾತನ್ನ ನೆನಪಿಸುತ್ತಿದೆ.
ಮೊಟ್ಟೆ ವಿತರಣೆಗೆ ಸರ್ಕಾರ ಆದೇಶ ಹೊರಡಿಸಿ ತಿಂಗಳುಗಳೇ ಕಳೆದರೂ ಇದುವರೆಗೂ ಈ ಶಾಲೆಯ ಮಕ್ಕಳಿಗೆ ಮಾತ್ರ ಮೊಟ್ಟೆ ಭಾಗ್ಯ ಸಿಕ್ಕಿಲ್ಲ. ಈ ಬಗ್ಗೆ ಕೇಳಿದ್ರೆ ಶ್ರಾವಣ ಮಾಸ, ಕಾರ್ತೀಕ ಮಾಸದಲ್ಲಿ ಮೊಟ್ಟೆ ಮುಟ್ಟಲ್ಲ. ಮೊಟ್ಟೆ ತರೋಕೆ ಹೋಗಬೇಕು ಅಂದ್ರೆ ಬೈಕ್ಗೆ ಪೆಟ್ರೋಲ್ ಬಿಲ್ ಯಾರು ಕೊಡ್ತಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ಈ ಆಡಿಯೋ ವೈರಲ್ ಆಗಿದೆ.
ಆಡಿಯೋದಲ್ಲಿ ಏನಿದೆ?: ಶ್ರಾವಣ, ಕಾರ್ತೀಕ, ಆಷಾಢ ಮಾಸಗಳಲ್ಲಿ ನಾನು ಮೊಟ್ಟೆ ಮುಟ್ಟುವುದಿಲ್ಲ, ಹಾಗಾಗಿ ಮೊಟ್ಟಿ ಕೊಟ್ಟಿಲ್ಲ ಎಂದಿರುವ ಮುಖ್ಯಶಿಕ್ಷಕ, ಪಾಲಕರೊಂದಿಗೆ ವಾಗ್ವಾದಕ್ಕಿಳಿದಿರುವ ಆಡಿಯೋ ವೈರಲ್ ಆಗಿದೆ. ಶ್ರಾವಣ, ಕಾರ್ತೀಕ, ಆಷಾಢ ಮಾಸಗಳಲ್ಲಿ ಬಿಡಿ…..ಬೇರೆ ತಿಂಗಳಲ್ಲಾದರೂ ಮೊಟ್ಟೆ ಕೊಡಬಹುದಲ್ಲವಾ? ಮೊಟ್ಟೆ ಕೊಡುವಂತೆ ಸರ್ಕಾರ ಆದೇಶ ಮಾಡಿದಾಗಿನಿಂದಲೂ ಯಾಕೆ ಕೊಟ್ಟಿಲ್ಲ ಎಂದು ಪಾಲಕರು ಮರು ಪ್ರಶ್ನೆ ಮಾಡಿದರೆ, ಗೌರ್ನಮೆಂಟ್ ಕೊಡೋ 5 ರೂಪಾಯಿ ಸಾಕಾಗಲ್ಲ, ಮೊಟ್ಟೆ ಬೆಲೆ ಹೆಚ್ಚಾಗಿದೆ, ಗ್ಯಾಸ್ ಖರ್ಚು 50 ಪೈಸೆ , ಮೊಟ್ಟೆ ತರಲು ಪೆಟ್ರೋಲ್ ದುಡ್ಡು ಇದನ್ನೆಲ್ಲ ನನ್ ಕೈಯಿಂದ ಹಾಕೋಕಾಗಲ್ಲ, 120 ಮಕ್ಕಳಿಗೂ ನಾನೇ ತಿಂಗಳಿಗೆ ಎಂಟು ದಿನ ತಂದು ಕೊಟ್ಟರೆ ನಾನೇ ಕೈಯಿಂದ ಹಾಕಬೇಕು ಹೇ…ಸುಮ್ನೆ ಇರ್ರೀ…ಎಂದು ಪಾಲಕರೊಂದಿಗೆ ವಾಗ್ವಾದ ಮಾಡಿರುವುದು ವೈರಲ್ ಆಗಿದೆ.
ಮುಖ್ಯಶಿಕ್ಷಕರ ಪ್ರತಿಕ್ರಿಯೆ: ಶಾಲೆಯಲ್ಲಿ ಗುಣಮಟ್ಟದ ಬಿಸಿಯೂಟ ನೀಡುತ್ತಿದ್ದು, ಯಾವುದೇ ತೊಂದರೆ ಆಗದಂತೆ ಚಿಕ್ಕಿ ವಿತರಣೆ ಮಾಡಲಾಗುತ್ತಿದೆ ಎಂದು ಮುಖ್ಯಶಿಕ್ಷಕ ಆದಿಮೂರ್ತಿ ವಿಜಯವಾಣಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ವಿದ್ಯಾರ್ಥಿ ಹಂತಕನ ಬಂಧನ: ಶಿಕ್ಷಕಿ ಮೇಲಿನ ಅತಿರೇಕದ ಪ್ರೇಮವೇ ಕೊಲೆಗೆ ಕಾರಣ? ವಾಟ್ಸ್ಆ್ಯಪ್ನಲ್ಲಿದೆ ರಹಸ್ಯ…
ಇಮ್ರಾನ್ ಖಾನ್ ಆಡಿಯೋ ಲೀಕ್: ನಿಮ್ಮಿಂದಾಗಿ ನನ್ನ ಖಾಸಗಿ ಅಂಗಗಳು ನೋಯುತ್ತಿವೆ.. ಇಂದು ಬರೋಕೆ ಆಗಲ್ಲ…